ರಾಜೀನಾಮೆ ನೀಡಿದ ಮೇಲೆ ಉಚ್ಚಾಟನೆ ಏಕೆ : ಶಾಸಕ ರಾಮ್'ದಾಸ್'ಗೆ ಪ್ರಶ್ನೆ
ಪಕ್ಷದಲ್ಲಿ ರಾಮದಾಸ್ಗಿಂತ ಹಳೆ ಕಾರ್ಯಕರ್ತ ನಾಗಿದ್ದ ನಾನು 2 ಬಾರಿ ಪಾಲಿಕೆ ಚುನಾವಣೆಯಲ್ಲಿ ನಿಂತು ಗೆದ್ದಿದ್ದೇನೆ. ಈ ಬಾರಿಯೂ ಗೆಲ್ಲುತ್ತೇನೆ. ಆದರೆ ಪಕ್ಷದಿಂದ ಟಿಕೆಟ್ ನೀಡದೆ ನನಗೆ ವಂಚನೆ ಮಾಡಿದ್ದಾರೆ.
ಮೈಸೂರು[ಆ.30]: ಈ ಬಾರಿಯ ನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ನಾನು ಆ.23ರಂದೇ ಬಿಜೆಪಿಗೆ ರಾಜಿನಾಮೆ ನೀಡಿದ್ದೇನೆ. ಆದರೆ, ಉಚ್ಚಾಟನೆ ಮಾಡಿರುವುದೇಕೆ ಎಂದು ಪಕ್ಷೇತರ ಅಭ್ಯರ್ಥಿ ಮ.ವಿ. ರಾಮಪ್ರಸಾದ್, ಶಾಸಕ ಎಸ್.ಎ. ರಾಮ ದಾಸ್ ಅವರನ್ನು ಪ್ರಶ್ನಿಸಿದ್ದಾರೆ.
ಪಕ್ಷದಲ್ಲಿ ರಾಮದಾಸ್ಗಿಂತ ಹಳೆ ಕಾರ್ಯಕರ್ತ ನಾಗಿದ್ದ ನಾನು 2 ಬಾರಿ ಪಾಲಿಕೆ ಚುನಾವಣೆಯಲ್ಲಿ ನಿಂತು ಗೆದ್ದಿದ್ದೇನೆ. ಈ ಬಾರಿಯೂ ಗೆಲ್ಲುತ್ತೇನೆ. ಆದರೆ ಪಕ್ಷದಿಂದ ಟಿಕೆಟ್ ನೀಡದೆ ನನಗೆ ವಂಚನೆ ಮಾಡಿದ್ದಾರೆ. ಸಬೂಬು ನೀಡಿರುವ ಪಕ್ಷದವರು, ಎರಡು ಬಾರಿ ನೀಡಿದ ಮೇಲೆ ಮೂರನೇ ಬಾರಿಗೆ ಹೊಸಬರಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಹಾಗಾದರೆ ಈ ನಿಯಮ ಎಲ್ಲರಿಗೂ ಅನ್ವಯವಾಗಬೇಕು ಅಲ್ಲವೇ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾರ್ಡ್ ನಂ.55ರಲ್ಲಿ ನನಗೆ ದೊರಕಿರುವ ಅಭೂತಪೂರ್ವ ಬೆಂಬಲದಿಂದ ಶಾಸಕ ಎಸ್.ಎ. ರಾಮದಾಸ್ ವಿಚಲಿತರಾಗಿ ಮಾಡಿದ ತಪ್ಪಿನ ಪಾಪಪ್ರಜ್ಞೆ ಅರಿವಾಗುತ್ತಿದೆ. ರಾಜಕೀಯವಾಗಿ ನನ್ನನ್ನು ಮುಗಿಸಿಬಿಡುವ ಅವರ ದುರುದ್ದೇಶ ಈಡೇರಲಿಲ್ಲ ಎಂಬ ಹತಾಶೆ ಭಾವನೆಯಿಂದ ನನ್ನನ್ನು ಪಕ್ಷದಿಂದ ವಜಾ ಮಾಡಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ನಾನೇ ಪಕ್ಷ ತ್ಯಜಿಸಿದ ಮೇಲೆ ವಜಾ ಮಾಡಿಸುವುದಾದರೆ ಹೇಗೆ? ಈ ಬಾರಿ ಕೆ.ಆರ್. ಕ್ಷೇತ್ರದಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲುವುದಿಲ್ಲ. ಕಳಪೆ ಪ್ರದರ್ಶನ ನೀಡಲಿದೆ ಎಂದು ರಾಮಪ್ರಸಾದ್ ಭವಿಷ್ಯ ನುಡಿದರು. ಮುಖಂಡರಾದ ನಾಗಣ್ಣ, ವಾಸು, ಸಂದೀಪ್ ಇದ್ದರು.