ಮೈಸೂರು ಬ್ರಾಂಡ್ ಲೋಗೋ ಬಿಡುಗಡೆ
ಮೈಸೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಹೊಸದಾಗಿ ರೂಪಿಸಲಾಗಿರುವ ಬ್ರಾಂಡ್ ಮೈಸೂರು ಲೋಗೋವನ್ನು ಪ್ರವಾಸೋಧ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಭಾನುವಾರ ಜಿಪಂ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
![Mysore brand logo launched snr Mysore brand logo launched snr](https://static-ai.asianetnews.com/images/01hhbn77evksxzx9wc292cess9/10mys13-165_363x203xt.jpg)
ಮೈಸೂರು : ಮೈಸೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಹೊಸದಾಗಿ ರೂಪಿಸಲಾಗಿರುವ ಬ್ರಾಂಡ್ ಮೈಸೂರು ಲೋಗೋವನ್ನು ಪ್ರವಾಸೋಧ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಭಾನುವಾರ ಜಿಪಂ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಸಚಿವರು, ಮೈಸೂರು ಬ್ರಾಂಡಿಂಗ್ ಗಾಗಿ ಇದು ದೊಡ್ಡ ಹೆಜ್ಜೆ. ಇದರಿಂದ ಹಲವಾರು ಅನುಕೂಲ ಆಗಲಿದೆ. ಅಕ್ಕಪಕ್ಕದ ಜಿಲ್ಲೆ ಹಾಗೂ ರಾಜ್ಯಗಳನ್ನು ಆರ್ಕಷಿಸುವುದಕ್ಕಾಗಿ ಮಾಡುತ್ತಿಲ್ಲ. ವಿಶ್ವದ ಪ್ರವಾಸಿ ಪ್ರೇಮಿಗಳನ್ನು ಸೆಳೆಯಲು ಮುಖ್ಯ ಉದ್ದೇಶವಾಗಿದೆ. ಇತಿಹಾಸ ತಿಳಿಯಲು ಅನುಕೂಲವಾಗುತ್ತದೆ ಎಂದರು.
ಮೈಸೂರನ್ನು ಕೇವಲ ಅರಮನೆಗಳ ನಗರಿ ಎಂದೇ ನೋಡುತ್ತೇವೆ. ಆದರೆ, ಇಲ್ಲಿ ಪ್ರವಾಸಿ ಕ್ಷೇತ್ರಗಳನ್ನು ನೋಡಬಹುದು. ಜಗತ್ತಿನಲ್ಲಿ ಹಲವಾರು ಪ್ರವಾಸಿ ಕ್ಷೇತ್ರಗಳು ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುತ್ತದೆ. ಬೆಳಗಾವಿ, ಹುಬ್ಬಳಿ, ಬಳ್ಳಾರಿಯಿಂದ ಮೈಸೂರಿಗೆ ಬರುವ ಜನರು ಅರ್ಧ ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರುತ್ತಾರೆ. ಪ್ರವಾಸಿತಾಣಗಳು ಧಾರ್ಮಿಕವಾಗಿಯೂ ನೋಡುತ್ತಾರೆ ಎಂದು ಅವರು ತಿಳಿಸಿದರು.
ಸೋಮನಾಥಪುರ ಹಳೇಬಿಡಿನ ಕ್ಷೇತ್ರಗಳಂತೂ ಎಲ್ಲರ ಆಕರ್ಷಣೆಗೆ ಒಳಗಾಗುತ್ತದೆ. ಕಾರಣ ಅಲ್ಲಿನ ಕಲೆ ಮತ್ತು ವಾಸ್ತು ಶಿಲ್ಪ. ಇಂತಹ ಪ್ರವಾಸಿ ಕ್ಷೇತ್ರಗಳನ್ನು ರಕ್ಷಿಸಬೇಕು. ಪ್ರವಾಸಿಗರಿಗೆ ತಿಳಿಸುವಂತಹ ಕೆಲಸ ಆಗಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಕೇವಲ ಅರಮನೆ, ಮೃಗಾಲಯ ಮಾತ್ರವಲ್ಲದೇ 24 ಹೆಚ್ಚು ಪ್ರವಾಸೋಧ್ಯಮ ತಾಣಗಳಿವೆ. ಇವುಗಳನ್ನು ಜಗತ್ತಿಗೆ ತೋರಿಸಬೇಕು. ಮೈಸೂರು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂದು ತಿಳಿಸಬೇಕು. ದಸರಾ ಹಾಗೂ ಅರಮನೆ ಮಾತ್ರ ಪ್ರವಾಸೋದ್ಯಮದ ಕೇಂದ್ರ ಬಿಂದುವಲ್ಲ. ತಲಕಾಡಿನ ಸೋಮನಾಥಪುರ ಸೇರಿದಂತೆ ಹಲವಾರು ತಾಣಗಳಿವೆ. ಅವುಗಳನ್ನು ಪ್ರವಾಸಿಗರಿಗೆ ತಲುಪುವಂತೆ ಮಾಡಬೇಕು ಎಂದರು.
ಶಾಸಕರಾದ ದರ್ಶನ್ ಧ್ರುವನಾರಾಯಣ, ಡಿ. ರವಿಶಂಕರ್, ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಡಿಸಿಪಿ ಎಸ್. ಜಾಹ್ನವಿ, ನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ. ರೂಪಾ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ, ಸಹಾಯಕ ನಿರ್ದೇಶಕರಾದ ಟಿ.ಕೆ. ಹರೀಶ್ ಇದ್ದರು.
ಬ್ರಾಂಡ್ ಮೈಸೂರು ಸ್ಪರ್ಧೆ ವಿಜೇತರು
ಮೈಸೂರು ಜಿಲ್ಲೆಯ ಪ್ರವಾಸೋದ್ಯಮ, ಸಂಸ್ಕೃತಿ, ಕಲೆ, ಪರಂಪರೆಯನ್ನು ಬಿಂಬಿಸುವಂತೆ ಬ್ರಾಂಡ್ ಮೈಸೂರು ಸ್ಪರ್ಧೆಯನ್ನು ನಾಲ್ಕು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಈ ಕೆಳಕಂಡವರು ವಿಜೇತರಾಗಿದ್ದಾರೆ.
ಲೋಗೋ ಸ್ಪರ್ಧೆಯಲ್ಲಿ ಎಲ್.ಎ. ರಾಘವೇಂದ್ರ(ಪ್ರಥಮ), ಎಂ. ಬಾಲಸ್ವಾಮಿ(ದ್ವಿತೀಯ), ರಿದ್ವಾ ಶೈಲಾ ರೈ (ತೃತೀಯ).
ಮ್ಯಾಸ್ ಕಾಟ್ ವಿಭಾಗದಲ್ಲಿ ಅತಿಥಿ ಪಂಡಿತ್(ಪ್ರಥಮ), ಬಿ. ಪ್ರಣೀತ್(ದ್ವಿತೀಯ), ಸಯಾನ್ ಪಂಡಿತ್ (ತೃತೀಯ). ವಿಭಿನ್ನವಾದ ಸ್ಮರಣಿಕೆಗಳು ವಿಭಾಗದಲ್ಲಿ ಬಿ. ಪ್ರಣೀತ್(ಪ್ರಥಮ), ಟಿ. ಪ್ರತಿಭಾ(ದ್ವಿತೀಯ), ಎಲ್. ಪ್ರೀತಂ ಭಾರದ್ವಾಜ್(ತೃತೀಯ). ಬ್ಲಾಗ್ ಬರಹದಲ್ಲಿ ಸಿಂಧು ಎಸ್. ಶಾಸ್ತ್ರಿ(ಪ್ರಥಮ), ಮೇಘನಾ ಭಾಸ್ಕರ್(ದ್ವಿತೀಯ), ಎಸ್.ಎಂ. ಮೀನಾಕ್ಷಿ(ತೃತೀಯ).
ಆನ್ ಲೈನ್ ಮೂಲಕ ಸ್ಪರ್ಧೆಯಲ್ಲಿ 150 ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ಕ್ರಮವಾಗಿ 20 ಸಾವಿರ, 10 ಸಾವಿರ, 5 ಸಾವಿರ ರೂ. ಬಹುಮಾನ ನೀಡಲಾಗಿದೆ.
ಬ್ರಾಂಡ್ ಮೈಸೂರು ಲೋಗೋ ವಿಶೇಷತೆ
ಬ್ರಾಂಡ್ ಮೈಸೂರು ಲೋಗೋದಲ್ಲಿ ಅಂಬಾರಿ ಹೊತ್ತ ಆನೆ, ಯದುವಂಶದ ಅರಸರ ಲಾಂಛನ ಗಂಡಬೇರುಂಡ, ಮೈಸೂರು ರೇಷ್ಮೆ, ಅರಮನೆ ಕಮಾನುಗಳು, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಒಳಗೊಂಡಿದೆ. ಅಲ್ಲದೆ, "ನಮ್ಮ ಪರಂಪರೆ, ನಿಮ್ಮ ತಾಣ" ಎಂಬ ಅಡಿಬರಹವಿದ್ದು, ಲೋಗೋ ಆಕರ್ಷಕವಾಗಿ ಮೂಡಿ ಬಂದಿದೆ.
ದಸರಾದಲ್ಲಿ ಮಾತ್ರವಲ್ಲದೇ ಮೈಸೂರು ಆತಿಥೇಯರ ತಾಣವಾಗಿಸಲು ಮತ್ತು ಸುರಕ್ಷಿತವಾದ ವಾತಾವರಣ ನಿರ್ಮಿಸಲು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಕ್ರಿಯಾ ಯೋಜನೆ ರೂಪಿಸಲಾಗಿದೆ. ವಿಶ್ವದ ಪ್ರವಾಸಿಗರನ್ನು ಆಕರ್ಷಿಸಲು ಬ್ರಾಂಡ್ ಮೈಸೂರು ಲೋಗೋ ನೆರವಾಗಲಿದೆ.
- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ