*  ರಾಜ್ಯದ ಹಲವೆಡೆ ಹಿಂದೂ-ಮುಸ್ಲಿಂ ಸಂಘರ್ಷ *  9 ದಿನಗಳ ವ್ರತ ಆಚರಣೆಯಲ್ಲಿ ತೊಡಗಿರುವ ಅಸ್ಲಂಸಾಬ್‌*  ರಾಮ- ರಹೀಮ ಬೇರೆ ಅಲ್ಲ  

ಸೋಮರಡ್ಡಿ ಅಳವಂಡಿ

Add Asianetnews Kannada as a Preferred SourcegooglePreferred

ಕೊಪ್ಪಳ(ಏ.16): ರಾಜ್ಯದ ಹಲವೆಡೆ ಹಿಂದೂ(Hindu) ಮತ್ತು ಮುಸ್ಲಿಂ(Muslim) ಸಮುದಾಯದ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ತಾಲೂಕಿನ ಹಿರೇಬೊಮ್ಮನಾಳ ಗ್ರಾಮದ ನಿವಾಸಿ ಅಸ್ಲಂಸಾಬ್‌ ವಾಲಿಕಾರ(Aslamsab Walikar) ಎಂಬ ಮುಸ್ಲಿಂ ಯುವಕ ಹನುಮ ಮಾಲೆ ಧರಿಸಿ, ವ್ರತ ಆಚರಿಸುತ್ತಿದ್ದು, ಅಲ್ಲಾ, ಈಶ್ವರ ಬೇರೆ ಅಲ್ಲ ಎನ್ನುವ ಸಂದೇಶ ಸಾರುತ್ತಿದ್ದಾನೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಹನುಮ ಮಾಲೆ ಧರಿಸುವವರ ಸಂಖ್ಯೆ ಹೆಚ್ಚಿದೆ. ಹೀಗೆ ಪ್ರಭಾವಕ್ಕೆ ಒಳಗಾಗಿರುವ ಅಸ್ಲಂಸಾಬ್‌ ವಾಲಿಕಾರ ಹನುಮಾಲೆಯನ್ನು(Hanumamale) ಧರಿಸಿ ಎಲ್ಲರ ಗಮನ ಸೆಳೆದಿದ್ದಾನೆ.

9 ದಿನಗಳ ಹನುಮ ವ್ರತ:

ಅಸ್ಲಂಸಾಬ್‌ ಹನುಮ ಮಾಲೆ ಧರಿಸಿ 9 ದಿನಗಳ ವ್ರತ ಪ್ರಾರಂಭಿಸಿದ್ದಾನೆ. ಹನುಮ ಮಾಲೆಯನ್ನು ಅವರ ಭಕ್ತಿಯಂತೆ ತಮಗಿಷ್ಟವಾದಷ್ಟು ದಿನಗಳನ್ನು ಧರಿಸುವ ಸಂಪ್ರದಾಯ ಇದೆ. ಈತ 9 ದಿನಗಳ ಕಾಲ ಹಾಕಲು ನಿಶ್ಚಯ ಮಾಡಿದ್ದಾನೆ. ಹನುಮ ಮಾಲೆ ಧರಿಸಿರುವ ಅಸ್ಲಂ ನಿತ್ಯವೂ ಹನುಮಂತನ(Hanuman) ಪೂಜೆ ಮಾಡುತ್ತಾನೆ. ಹನುಮಂತನ ದೇವಸ್ಥಾನದಲ್ಲಿಯೇ ಬಹುತೇಕ ಕಾಲ ಕಳೆಯುತ್ತಾನೆ. ಮನೆಯಲ್ಲಿಯೂ ನಿತ್ಯ ಪೂಜೆ(Pooje) ಮಾಡುತ್ತಾನೆ. ಹನುಮ ಮಾಲೆ ಧರಿಸಿದವರು ಅನುಸರಿಸುವ ಎಲ್ಲ ಕಟ್ಟುಪಾಡುಗಳನ್ನು ಚಾಚು ತಪ್ಪದೇ ಮಾಡುತ್ತಿದ್ದಾನೆ.

ಬಿಜೆಪಿ ಶಾಸಕ ಯತ್ನಾಳರನ್ನ ಪರೋಕ್ಷವಾಗಿ ರಾಕ್ಷಸ ಎಂದ ಸ್ವಾಮೀಜಿ

ಈತನೊಬ್ಬನೇ ಅಲ್ಲ:

ಹನುಮ ಮಾಲೆ ಧರಿಸುತ್ತಿರುವ ಮುಸ್ಲಿಂ ಯುವಕ ಈತನೊಬ್ಬನೇ ಅಲ್ಲ, ಅನೇಕರು ಧರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಹನುಮ ಮಾಲೆ ಧರಿಸಿದಾಗಲೂ ಹನುಮ ನಾಮ ಪಠಣ ಮಾಡುವ ಕಾರ್ಯಕ್ರಮದಲ್ಲಿ ಅನೇಕ ಮುಸ್ಲಿಂ ಯುವಕರು ಪಾಲ್ಗೊಂಡಿದ್ದರು.

ರಾಮ-ರಹೀಮ್‌ ಬೇರೆಯಲ್ಲ:

ಮಾಲೆ ಧರಿಸಿರುವ ಅಸ್ಲಂಸಾಬ್‌ ಹೇಳುವುದು ಹೀಗೆ- ‘ರಾಮ - ರಹೀಮ(Ram-Raheem) ಬೇರೆ ಅಲ್ಲ. ಎಲ್ಲ ದೇವರು ಒಂದೇ. ನಾನು ಹನುಮಂತನ ಭಕ್ತನಾಗಿರುವುದರಿಂದ ಹನುಮ ಮಾಲೆ ಧರಿಸಿದ್ದೇನೆ. ನಮ್ಮ ಮನೆಯಲ್ಲಿಯೂ ಯಾವುದೇ ವಿರೋಧ ಇಲ್ಲ. ಎಲ್ಲರೂ ಸಹಕಾರ ನೀಡುತ್ತಿದ್ದಾರೆ’ ಎನ್ನುತ್ತಾರೆ.

Koppal: ಹನುಮನ ನಾಡು ಅಂಜನಾದ್ರಿ ಬೆಟ್ಟದಲ್ಲಿ ಯೋಗ ಕಾರ್ಯಕ್ರಮ

ಅಂಜನಾದ್ರಿಯಲ್ಲಿ ವಿಸರ್ಜನೆ:

ಹನುಮ ಮಾಲೆ ಧರಿಸಿರುವ ಅಸ್ಲಂಸಾಬ್‌ ವಾಲಿಕಾರ ಹಿರೇಬೊಮ್ಮನಾಳ ಗ್ರಾಮದ ಹನುಮಂತನ ದೇವಸ್ಥಾನದಲ್ಲಿಯೇ(Temple) ಇದ್ದು ಎಲ್ಲ ವ್ರತಾಚರಣೆ ಮಾಡುತ್ತಾರೆ. ಅಂಜನಾದ್ರಿಯಲ್ಲಿ(Anjadri Hill) ವಿಸರ್ಜನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ನಾನು ಇದೇ ಮೊದಲ ಬಾರಿಗೆ ಧರಿಸಿದ್ದೇನೆ. ಅನೇಕ ನನ್ನ ಸ್ನೇಹಿತರು ಮಾಲೆ ಧರಿಸಿರುವುದರಿಂದ ಅವರೊಂದಿಗೆ ಆಚರಣೆ ತಿಳಿದುಕೊಂಡಿದ್ದೇನೆ ಎನ್ನುತ್ತಾನೆ. ಹನುಮಂತನ ಭಕ್ತನಾಗಿರುವುದರಿಂದ ದೇವರಿಗೆ ಭಕ್ತಿ ಸಮರ್ಪಣೆ ಮಾಡುತ್ತಿದ್ದೇನೆ ಎಂದನು.

ರಾಮ- ರಹೀಮ ಬೇರೆ ಅಲ್ಲ. ನಾನು ಹನುಮಂತನ ಭಕ್ತನಾಗಿರುವದರಿಂದ ಹನುಮ ಮಾಲೆ ಧರಿಸಿದ್ದೇನೆ. ನಮ್ಮ ಮನೆಯವರು ಸಹಕಾರ ನೀಡಿದ್ದಾರೆ ಅಂತ ಹನುಮಮಾಲೆ ಧರಿಸಿರುವ ಯುವಕ ಅಸ್ಲಂಸಾಬ್‌ ವಾಲಿಕಾರ ತಿಳಿಸಿದ್ದಾರೆ.