ನಗರಸಭೆಯಲ್ಲಿ ಅಕ್ರಮ; ಲೋಕಾಗೆ ದೂರು ನೀಡಲು ನಿರ್ಧಾರ ನಗರಸಭಾ ಸದಸ್ಯ ಎ.ಬಿ.ಎಂ ವಿಜಯಕುಮಾರ್‌ ಗಂಭೀರ ಆರೋಪ

 ಹರಿಹರ (ಅ.23) : ನಗರಸಭೆಯಿಂದ ಮಾಡಲಾಗಿರುವ ಹಲವಾರು ಕಾಮಗಾರಿಗಳಲ್ಲಿ ಕೋಟ್ಯಂತರ ರು. ಅಕ್ರಮ ನಡೆದಿರುವ ಕಾರಣ ತನಿಖೆಗಾಗಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ನಗರಸಭಾ ಸದಸ್ಯ ಎ.ಬಿ.ಎಂ ವಿಜಯಕುಮಾರ್‌ ಹೇಳಿದರು.

Add Asianetnews Kannada as a Preferred SourcegooglePreferred

ಸರ್ಕಾರಿ ಸೌಲಭ್ಯ ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್: ಮಾಡಾಳು ವಿರೂಪಾಕ್ಷಪ್ಪ

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹರಿಹರ ನಗರಸಭೆಯಲ್ಲಿ 2016 ರಿಂದ 2022ರ ಮಾಚ್‌ರ್‍ ತಿಂಗಳವರೆಗೆ ಕಾರ್ಯನಿರ್ವಹಿಸಿರುವ ಪೌರಾಯುಕ್ತರು ಹಾಗೂ ಎಂಜಿನಿಯರ್‌ಗಳಿಂದ ಕೋಟ್ಯಂತರ ರು. ಭ್ರಷ್ಟಾಚಾರ ಮಾಡಿದ್ದಾರೆ. ಇವರ ಅವಧಿಯಲ್ಲಿ ನಡೆದಿರುವ ಕಾಮಗಾರಿಯ ದಾಖಲಾತಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದಾಗ ಈ ಅವ್ಯವಹಾರವು ಬೆಳಕಿಗೆ ಬಂದಿದ್ದು, ಇದರ ಸಮಗ್ರ ತನಿಖೆಗಾಗಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.

ನಗರದ ಹೊರವಲಯದ ಬೈಪಾಸ್‌ ಸಮೀಪವಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಶೆಡ್‌ ನಿರ್ಮಾಣಕ್ಕೆ 1 ಕೋಟಿ 12 ಲಕ್ಷ ಟೆಂಡರ್‌ ಆಗಿತ್ತು. ಇದು ಕೇಂದ್ರ ಸರ್ಕಾರದ ಅನುದಾನದಿಂದ ಆಗುವಂಥ ಕಾಮಗಾರಿಯಾಗಿದ್ದು ಯಾವುದೇ ರೀತಿ ನಗರಸಭೆ ಅನುದಾನವನ್ನು ಬಳಸುವಂತಿಲ್ಲ ಆದರೂ ಕೂಡ ಇವರು ಈ ಶೆಡ್‌ ನಿರ್ಮಾಣಕ್ಕೆ ಹರಿಹರ ನಗರಸಭೆಯ ಮಳಿಗೆಯಿಂದ ಸಂಗ್ರಹಿಸಿದ ಹಣವನ್ನು ಈ ಕಾಮಗಾರಿಗೆ ಮತ್ತೆ ಹೆಚ್ಚುವರಿಯಾಗಿ ಡಿಸಿ ಆದೇಶದ ಮೇರೆಗೆ 1 ಕೋಟಿ 75 ಲಕ್ಷಕ್ಕೆ ಏರಿಕೆ ಮಾಡಿ ಕಾಮಗಾರಿ ಕೈಗೊಂಡಿದ್ದಾರೆ. ಈ ಕಾಮಗಾರಿಯಲ್ಲಿ ಸುಮಾರು 40 ರಿಂದ 50 ಲಕ್ಷ ರುಪಾಯಿ ಅವ್ಯವಹಾರ ಆಗಿರುವ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದರು.

ನಗರದ ಹಲವು ವಾರ್ಡುಗಳಲ್ಲಿ ಮಿನಿ ವಾಟರ್‌ ಪ್ಲಾಂಟ್‌ ನಿರ್ಮಿಸಲು ಒಂದು ವಾರ್ಡಿಗೆ 5 ಲಕ್ಷ ದಂತೆ ಸುಮಾರು ಒಂದುವರೆ ಕೋಟಿ ವೆಚ್ಚದ ಕಾಮಗಾರಿ ನಡೆದಿದೆ ಎಂದು ಚೆಕ್‌ಗಳನ್ನು ನೀಡಲಾಗಿದೆ. ಆದರೆ ಈ ನೀರಿನ ಪ್ಲಾಂಟ್‌ಗಳನ್ನು ಅಳವಡಿಸದೆ ಗುತ್ತಿಗೆದಾರನಿಗೆ ಚೆಕ್ಕುಗಳನ್ನು ನೀಡಲಾಗಿದೆ ಎಂದರು.

ಇದೇ ರೀತಿ ಆಲಂ ಬ್ಲೀಚಿಂಗ್‌ ಪೌಡರ್‌ ಖರೀದಿಗಾಗಿ ನಕಲಿ ಬಿಲ್ಲುಗಳನ್ನ ಸೃಷ್ಟಿಸಿ ಲಕ್ಷಾಂತರ ರುಪಾಯಿ ಚೆಕ್‌ಗಳನ್ನ ಹರಿಯಲಾಗಿದೆ. ಹರಿಹರ ನಗರದಲ್ಲಿದ್ದ ಸುಂದರ ರಸ್ತೆಗಳನ್ನು ಯುಜಿಡಿ ಕಾಮಗಾರಿಯ ಹೆಸರಿನಲ್ಲಿ ಸಂಪೂರ್ಣ ರಸ್ತೆಗಳನ್ನು ಮಾಡಲಾಗಿದೆ ಸುಮಾರು 65 ಕೋಟಿಗೂ ಅಧಿಕ ವೆಚ್ಚದಲ್ಲಿ ನಡೆದಿರುವ ಈ ಕಾಮಗಾರಿಯು ರಸ್ತೆಯಲ್ಲಿ ಪೈಪ್‌ ಅಳವಡಿಸಿದ ನಂತರ ಪುನಃ ರಸ್ತೆಯನ್ನು ಸರಿಪಡಿಸುವ ಜವಾಬ್ದಾರಿ ಗುತ್ತಿಗೆದಾರನಾಗಿರುತ್ತದೆ. ಆದರೆ ಅಂದಿನ ಪೌರಾಯುಕ್ತರು ಈ ಕಾಮಗಾರಿ ಪೂರ್ಣಗೊಳ್ಳದೆ ಹಾಗೂ ರಸ್ತೆಗಳನ್ನು ಸರಿಪಡಿಸದೆ ಇರುವುದು ಗೊತ್ತಿದ್ದರೂ ಗುತ್ತಿಗೆದಾರನಿಗೆ ಕಾಮಗಾರಿ ಮುಗಿದಿದೆ ಎಂದು ಸಂಪೂರ್ಣ ಹಣವನ್ನು ಬಿಡುಗಡೆ ಮಾಡಿರುವುದು ಹರಿಹರ ನಗರಸಭೆಯಲ್ಲಿ ನಡೆದ ದೊಡ್ಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಇದೇ ರೀತಿ 24*7 ಜಲಸಿರಿ ಕಾಮಗಾರಿ ಇನ್ನೂ ಹಲವಾರು ವಾರ್ಡ್‌ಗಳ ನಿವಾಸಿಗಳಿಗೆ ನೀರು ದೊರಕದೆ ಇದ್ದರೂ ಕೂಡ ಸಂಪೂರ್ಣ ಕಾಮಗಾರಿ ಮುಗಿದಿದೆ ಎಂದು ಕೋಟ್ಯಂತರ ವೆಚ್ಚದ ಕಾಮಗಾರಿಯ ಹಣವನ್ನ ಗುತ್ತಿಗೆದಾರನಿಗೆ ಪೂರ್ಣ ಬಿಲ್‌ ಪಾವತಿ ಮಾಡಲಾಗಿದೆ ಎಂದರು.

ಇನ್ಶೂರೆನ್ಸ್ ಮಾಫಿಯಾ ಗ್ಯಾಂಗ್ ಬೆನ್ನತ್ತಿದ ಪೊಲೀಸ್: ಇದು ಕವರ್ ಸ್ಟೋರಿ ಇಂಪ್ಯಾಕ್ಟ್

14 ಮತ್ತು 15 ಹಣಕಾಸು ಯೋಜನೆ ಅಡಿ ಕೈಗೊಂಡಿರುವ ಕಾಮಗಾರಿಯಲ್ಲಿ ಒಂದೇ ಕಾಮಗಾರಿಗೆ ಎರಡೆರಡು ಬಿಲ್ಲುಗಳನ್ನು ಸೃಷ್ಟಿಮಾಡುವ ಮೂಲಕ ಗುತ್ತಿಗೆದಾರನಿಗೆ ಚೆಕ್‌ ಗಳನ್ನು ನೀಡಲಾಗಿದೆ. ಉದಾಹರಣೆಗೆ ರಾಮಪ್ಪನ ಮನೆಯಿಂದ ಭೀಮಪ್ಪನ ಮನೆಯವರೆಗೆ ಸಿಸಿ ಚರಂಡಿ ಇನ್ನೊಂದು ಬಿಲ್ಲಿನಲಿ ಭೀಮಪ್ಪನ ಮನೆಯಿಂದ ರಾಮಪ್ಪನ ಮನೆವರೆಗೆ ಎಂದು ನಕಲಿ ಬಿಲ್ಲುಗಳನ್ನು ಸೃಷ್ಟಿಮಾಡಿ ಲಕ್ಷಾಂತರ ರುಪಾಯಿ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.