ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪಿಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪೀಠ ಸ್ಥಾಪನೆಯಾಗುವವರೆಗೂ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರು ಹೈಕೋರ್ಟ್‌ನ ಪ್ರಧಾನ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸುವಂತೆಯೂ ಅವರು ಕೋರಿದ್ದಾರೆ.

ಶಿವಮೊಗ್ಗ: ನಗರದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ನಡೆಯುತ್ತಿರುವ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ವಿಶೇಷವಾಗಿ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ಪ್ರಯೋಜನಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಲು ತುರ್ತು ಸಲಹೆ ನೀಡುವಂತೆ ಕೋರಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಔಪಚಾರಿಕ ಮನವಿ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಸದ ರಾಘವೇಂದ್ರ ಅವರು ಮಂಗಳವಾರ ಲೋಕ ಭವನದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಕೋರಿ ವಿವರವಾದ ಪ್ರಾತಿನಿಧ್ಯವನ್ನು ಸಲ್ಲಿಸಿದರು.

ರಾಜ್ಯಪಾಲರ ಗಮನ ಸೆಳೆದ ಸಂಸದ ರಾಘವೇಂದ್ರ

ಭೇಟಿಯ ಸಂದರ್ಭದಲ್ಲಿ ಸಂಸದರು, ಶಿವಮೊಗ್ಗದ ಭೌಗೋಳಿಕ ಅನುಕೂಲ ಮತ್ತು ಮಧ್ಯ ಕರ್ನಾಟಕದ ಪ್ರಮುಖ ಆಡಳಿತ, ಶೈಕ್ಷಣಿಕ, ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿ ಜಿಲ್ಲೆ ಹೊರಹೊಮ್ಮಿರುವುದರ ಕಡೆಗೆ ರಾಜ್ಯಪಾಲರ ಗಮನ ಸೆಳೆದಿದ್ದಾರೆ. ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆಯಿಂದ ಶಿವಮೊಗ್ಗ ಜಿಲ್ಲೆಯ ಜನರಿಗೆ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಮಲೆನಾಡು ಮತ್ತು ಮಧ್ಯ ಕರ್ನಾಟಕ ಪ್ರದೇಶದ ಜನರಿಗೆ ಹಾಗೂ ನ್ಯಾಯಿಕ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಒತ್ತಿ ತಿಳಿಸಿದ್ದಾರೆ, ಇದರಿಂದಾಗಿ ನ್ಯಾಯ ಪ್ರಾಪ್ತಿಯ ಜನರ ಹಕ್ಕು ಹೆಚ್ಚು ಸುಲಭವಾಗಿ, ಅನುಕೂಲಕರವಾಗಿ ಮತ್ತು ಪರಿಣಾಮಕಾರಿಯಾಗಿ ಸಾಧ್ಯವಾಗಲಿದೆ ಎಂದಿದ್ದಾರೆ. ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ಉಪಸ್ಥಿತರಿದ್ದರು ಮತ್ತು ಸಂಸದರ ಬೇಡಿಕೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ನಡೆಯುತ್ತಿರುವ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ಹಕ್ಕೊತ್ತಾಯ, ಹೋರಾಟಗಳ ನಡುವೆ, ಸಂಸದ ರಾಘವೇಂದ್ರ ಅವರ ಈ ಭೇಟಿಯು ಪ್ರಾಮುಖ್ಯತೆ ಪಡೆದಿದೆ. ಜೊತೆಗೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸಬೇಕೆಂದು ನಿರಂತರವಾಗಿ ಪ್ರತಿಪಾದಿಸುತ್ತಿರುವ ಕಾನೂನು ವಲಯ, ವಕೀಲರ ಸಂಘಗಳು ಮತ್ತು ವಿವಿಧ ನಾಗರಿಕ ಸಮಾಜ ಸಂಸ್ಥೆಗಳ ಸದಸ್ಯರ ಬೇಡಿಕೆಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ.

ಸರ್ಕ್ಯೂಟ್ ಪೀಠ ಸ್ಥಾಪನೆಯಾಗುವವರೆಗೆ ಬೆಂಗಳೂರು ನ್ಯಾಯವ್ಯಾಪ್ತಿಯಡಿಯಲ್ಲಿಯೇ ಶಿವಮೊಗ್ಗ ಇರಲಿ: ಇದೇ ಸಂದರ್ಭದಲ್ಲಿ, ಶಿವಮೊಗ್ಗದಲ್ಲಿ ಪ್ರತ್ಯೇಕ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸುವವರೆಗೆ ಶಿವಮೊಗ್ಗ ಜಿಲ್ಲೆ ಬೆಂಗಳೂರಿನ ಹೈಕೋರ್ಟ್‌ನ ಪ್ರಧಾನ ಪೀಠದ ವ್ಯಾಪ್ತಿಯಲ್ಲಿ ಮುಂದುವರಿಯಬೇಕೆಂದು ಸಂಸದರು ಹೇಳಿದ್ದಾರೆ. ವಕೀಲರು, ಧಾವೆ ಹೂಡುವವರು ಮತ್ತು ಸಾರ್ವಜನಿಕರು ವ್ಯಕ್ತಪಡಿಸಿರುವ ಕಳವಳಗಳಿಗೆ ಧ್ವನಿಯಾಗಿ, ಬೆಂಗಳೂರು ಶಿವಮೊಗ್ಗದ ಜನರಿಗೆ ಅತ್ಯಂತ ಸುಲಭವಾಗಿ ತಲುಪಬಹುದಾದ ಕೇಂದ್ರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಶಿವಮೊಗ್ಗವನ್ನು ಮಂಗಳೂರಿನಲ್ಲಿ ಪ್ರಸ್ತಾಪಿತ ನ್ಯಾಯಪೀಠದ ವ್ಯಾಪ್ತಿಗೆ ತರುವುದರ ವಿರುದ್ಧ ಶಿವಮೊಗ್ಗದ ವಲಯದಿಂದ ವ್ಯಕ್ತವಾಗುತ್ತಿರುವ ಭಾವನೆಗಳನ್ನು ಮತ್ತು ಅದಕ್ಕೆ ಕಾರಣಗಳನ್ನು ಸಂಸದರು ರಾಜ್ಯಪಾಲರಿಗೆ ತಿಳಿಸಿಕೊಟ್ಟಿದ್ದಾರೆ. ಪ್ರಸ್ತಾಪಿತ ಮಂಗಳೂರು ಪೀಠದೊಂದಿಗೆ ಶಿವಮೊಗ್ಗವನ್ನು ಜೋಡಿಸುವುದರಿಂದ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಧಾವೆದಾರರ ಹಿತಾಸಕ್ತಿ ಮತ್ತು ಅನುಕೂಲವನ್ನು ಸಮರ್ಪಕವಾಗಿ ಪೂರೈಸುವುದು ಸಾಧ್ಯವಿಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠದ ಸ್ಥಾಪನೆಯು ಆ ಭಾಗದ ಜನರ ನ್ಯಾಯಪ್ರಾಪ್ತಿಯ ಹಕ್ಕಿಗೆ ಗಮನಾರ್ಹ ಬಲ ನೀಡುತ್ತದೆ, ಧಾವೆದಾರರ ವೆಚ್ಚದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ದೀರ್ಘಕಾಲದ ಆಕಾಂಕ್ಷೆಯನ್ನು ಈಡೇರಿಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.