ರಾಜ್ಯದ ಧೀಮಂತ ನಾಯಕ, ನೇಗಿಲಯೋಗಿ ಬಿ.ಎಸ್‌.ಯಡಿಯೂರಪ್ಪ ಅವರ 80ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ 27ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ವಿಮಾನ ಮೊದಲು ಇಳಿಯಲಿದೆ.

ಶಿರಾಳಕೊಪ್ಪ (ಫೆ.18): ರಾಜ್ಯದ ಧೀಮಂತ ನಾಯಕ, ನೇಗಿಲಯೋಗಿ ಬಿ.ಎಸ್‌.ಯಡಿಯೂರಪ್ಪ ಅವರ 80ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ 27ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ವಿಮಾನ ಮೊದಲು ಇಳಿಯಲಿದೆ. ಅನಂತರ ವಿಮಾನ ನಿಲ್ದಾಣ ಉದ್ಘಾಟನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.​ರಾ​ಘ​ವೇಂದ್ರ ಹೇಳಿ​ದ​ರು. ಶುಕ್ರವಾರ ಶಿರಾಳಕೊಪ್ಪ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿ​ಕೊಂಡಿ​ದ್ದ ಬೃಹತ್‌ ಸಭೆಯಲ್ಲಿ ಮಾತನಾಡಿದ ಅವ​ರು, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡಿರುವ ಧೀಮಂತ ನಾಯಕನ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಕುರಿತು ಎಲ್ಲರೂ ಪ್ರಯತ್ನಿಸೋಣ ಎಂದರು.

Add Asianetnews Kannada as a Preferred SourcegooglePreferred

ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಯಡಿಯೂರಪ್ಪ ಅವರಿಗೆ ನೇಗಿಲಯೋಗಿ ಎಂದು ಕರೆದಿದ್ದರು. ಅನಂತರ ಇಲ್ಲಿಯ ಜನರ ಆಶೀರ್ವಾದದಿಂದ ಯಡಿಯೂರಪ್ಪ ಗುಡಗಿದರೆ ವಿಧಾನಸೌಧ ನಡುಗುವುದು ಎಂಬ ಹೆಸರು ಬಂತು. ಈಗ ರಾಜ್ಯದ ಜನತೆ ರಾಜಾಹುಲಿ ಎಂದು ಕರೆಯುತ್ತಿದ್ದಾರೆ. ಯಡಿಯೂರಪ್ಪ ಅವರ ಹುಟ್ಟುಹಬ್ಬ ಪ್ರಧಾನಿ ನೇತೃತ್ವದಲ್ಲಿ ನಡೆಯಲಿದೆ. ಅವರ ಹುಟ್ಟುಹಬ್ಬವನ್ನು ಆಚರಿಸುವ ದಿನ ರಾಜ್ಯದ ಎರಡನೆಯ ದೊಡ್ಡ ವಿಮಾನ ನಿಲ್ದಾಣ ಎಂದು ಹೆಸರು ಪಡೆದಿರುವ ಇಲ್ಲಿಯ ವಿಮಾನ ನಿಲ್ದಾಣ ಉದ್ಘಾಟನೆಯಂದು ತಾಲೂಕಿನ ಅತಿಹೆಚ್ಚು ಜನರು ಭಾಗವಹಿಸಬೇಕು ಎಂದು ತಿಳಿ​ಸಿ​ದರು.

ಕಾಂಗ್ರೆಸ್‌ನವರಿಗೆ ಚೆಂಡುಹೂವು ಇನ್ನೂ ಪರ್ಮನೆಂಟ್: ಸಿ.ಟಿ.ರವಿ ವ್ಯಂಗ್ಯ

ಶಿವಮೊಗ್ಗ, ಶಿಕಾರಿಪುರ ಮಾರ್ಗವಾಗಿ ರಾಣೇಬೆನ್ನೂರು ಸೇರುವ .612 ಕೋಟಿ ವೆಚ್ಚದ ಮೊದಲ ಹಂತದ ರೈಲ್ವೆ ನಿರ್ಮಾಣ ಕಾಮಗಾರಿಗೆ ಅಂದು ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಿಲ್ಲೆಯಲ್ಲಿ ಸ್ವಾತಂತ್ರ್ಯ ಬಂದನಂತರ ಈವರೆಗೆ ಯಾವುದೇ ಹೊಸ ರೈಲ್ವೆ ಮಾರ್ಗ ಆಗಿರಲಿಲ್ಲ. ನರೇಂದ್ರ ಮೋದಿ ಸರ್ಕಾರ ಈ ಯೋಜನೆ ಕೈಗೊಂಡಿದೆ. ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ 22ರಿಂದ ಪ್ರತಿ ಶಕ್ತಿ ಕೇಂದ್ರದ ಪ್ರಮುಖರು ಗ್ರಾಮದ ಪ್ರತಿಯೊಂದು ಮನೆಗೆ ಈ ಹಿಂದೆ ಕೋವಿಡ್‌ ಸಂದರ್ಭದಲ್ಲಿ ಅಕ್ಕಿ ವಿತರಿಸಿದಂತೆ ಪ್ರತಿಯೊಂದು ಮನೆಗೂ ಸಿಹಿ ಹಂಚಬೇಕು. ಹಾಗೆಯೇ ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ಹೊರಡಲು ವಿನಂತಿ ಮಾಡಿಕೊಂಡು, ಅವರೆಲ್ಲರನ್ನು ಕರೆತರುವ ಕಾರ್ಯ ಕಾರ್ಯಕರ್ತರದ್ದಾಗಿದೆ ಎಂದರು.

ಚುನಾವಣೆ ನೀತಿ ಸಂಹಿತೆ ಮಾ.2ನೇ ವಾರದಲ್ಲಿ ಬರಲಿದೆ. ಶಿಕಾರಿಪುರ ತಾಲೂಕಿನ ಕೆರೆ ತುಂಬಿಸುವ ಯೋಜನೆಯಲ್ಲಿ ಕೆಲವು ಕೆರೆಗಳು ಕೈಬಿಟ್ಟು ಹೋಗಿದ್ದವು. ಅವುಗಳನ್ನು ತುಂಬಿಸುವ ಯೋಜನೆಗೆ ಯಡಿಯೂರಪ್ಪ ಅವರು 38 ಕೋಟಿ ಹಣ ನಿಗದಿಪಡಿ​ಸಿ​ದ್ದಾರೆ. ತಾಲೂಕಿನಲ್ಲಿ ಅಕ್ಕಮಹಾದೇವಿ ಕೋಟೆ ಅಭಿವೃದ್ಧಿ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಅದರ ಉದ್ಘಾಟನೆಗೆ .25 ಸಾವಿರ ಮಹಿಳೆಯರನ್ನು ಸೇರಿಸಿ ಉದ್ಘಾಟನೆ ಮಾಡಲಾಗುವುದು. ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ಡಿಪೋ ಸಿದ್ಧವಾಗಿದೆ. ಮುಖ್ಯಮಂತ್ರಿ ಅವರು ಡಿಪೋ ಉದ್ಘಾಟನೆ ಸಂದರ್ಭ 44 ಹೊಸ ಬಸ್‌ಗಳನ್ನು ತಾಲೂಕಿಗೆ ಕಳಿಸಿಕೊಡುವುದಾಗಿ ಹೇಳಿದ್ದಾರೆ. ಬಜೆಟ್‌ನಲ್ಲಿ ತಾಲೂಕಿನ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಓಡಾಡಲು ವ್ಯವಸ್ಥೆ ಕಲ್ಪಿಸುತ್ತಿದ್ದಾರೆ ಎಂದರು.

ಮದ್ದೂರು ಗೆಲ್ಲಲು ಕಾಂಗ್ರೆಸ್‌ ಭರ್ಜರಿ ಪ್ಲಾನ್‌: ಡಿಕೆಶಿ ನೇತೃತ್ವದಲ್ಲಿ ಮಹತ್ವದ ಚರ್ಚೆ

ಪ್ರಾರಂಭದಲ್ಲಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್‌, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ.ರೇವಣಪ್ಪ, ಅಗಡಿ ಅಶೋಕ, ಸಣ್ಣ ಹನುಮಂತಪ್ಪ, ನಿವೇದಿತಾ ರಾಜು, ಪುರಸಭೆ ಅಧ್ಯಕ್ಷೆ ಮಂಜುಳಾ ಟಿ.ರಾಜು, ಟಿ.ರಾಜು, ನಗರ ಬಿಜೆಪಿ ಅಧ್ಯಕ್ಷ ಮಂಚಿ ಶಿವಣ್ಣ,ಧುರೀಣರಾದ ಸತೀಶ್‌ ತಾಳಗುಂದ, ತಾಪಂ ಮಾಜಿ ಅಧ್ಯಕ್ಷ ಶಂಭು, ಸುಬ್ರಮಣ್ಯ, ಶಕ್ತಿ ಕೇಂದ್ರದ ಯೋಗೀಶ್ವರ, ಚಂದ್ರಣ್ಣ ಮುಳಕೊಪ್ಪ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದದರು.