14 ವರ್ಷಗಳ ಬಳಿಕ ಕೊನೆಗೂ ತನ್ನ ಮಕ್ಕಳ ಸೇರಿದ ತಾಯಿ!
ಕುಟುಂಬವನ್ನು ಇನ್ನು ಖಂಡಿತಾ ಸೇರಲಾರೆ ಎಂದುಕೊಂಡಿದ್ದ ತಾಯಿಯೊಬ್ಬರು 14 ವರ್ಷಗಳ ನಂತರ ತನ್ನ ಮಕ್ಕಳನ್ನು ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ತಾಯಿಯೊಬ್ಬಳು 14 ವರ್ಷಗಳ ಬಳಿಕ ತನ್ನ ಮಕ್ಕಳನ್ನು ಸೇರಿಕೊಂಡ ಅಪೂರ್ವ ಕ್ಷಣಕ್ಕೆ ಹಲವರು ಸಾಕ್ಷಿಯಾದರು.
ಮಂಗಳೂರು(ಫೆ.17): ತಾಯಿಯೊಬ್ಬಳು 14 ವರ್ಷಗಳ ಬಳಿಕ ತನ್ನ ಮಕ್ಕಳನ್ನು ಸೇರಿಕೊಂಡ ಅಪೂರ್ವ ಕ್ಷಣ ಶನಿವಾರ ಮಂಗಳೂರಿನಲ್ಲಿ ನಡೆಯಿತು. ಮಂಗಳೂರಿನ ಸಮಾಜ ಸೇವಾ ಸಂಸ್ಥೆ ವೈಟ್ ಡೊವ್ಸ್ನ ಆಶ್ರಮ ಈ ಸುಂದರ ಕ್ಷಣಗಳಿಗೆ ವೇದಿಕೆಯಾಯಿತು. ವೈಟ್ ಡೊವ್ಸ್ ಸಂಸ್ಥೆಯ ಮುಖ್ಯಸ್ಥರಾದ ಕೋರಿನ್ ರಸ್ಕಿನ್ಹಾ ಮತ್ತು ಇತರರು ಇದಕ್ಕೆ ಸಾಕ್ಷಿಯಾಗಿದ್ದಾರೆ. ತಮಿಳುನಾಡಿನ ಕೊರ್ಟಂಪೇಟೆಯ ಲೂದ್ರ್ ಮೇರಿ 14 ವರ್ಷಗಳ ಆಶ್ರಮವಾಸದ ಬಳಿಕ ತನ್ನ ಕುಟುಂಬದ ಸದಸ್ಯರನ್ನು ಸೇರಿಕೊಂಡ ಮಹಿಳೆ.
ಘಟನೆಯ ಹಿನ್ನೆಲೆ:
ಲೂರ್ದ್ ಮೇರಿ ಅವರು 14 ವರ್ಷಗಳ ಹಿಂದೆ ಆಕೆ ತಮಿಳುನಾಡಿನ ತನ್ನ ಹುಟ್ಟೂರಿನಿಂದ ನಾಪತ್ತೆಯಾಗಿದ್ದರು. 10 ವರ್ಷಗಳ ಹಿಂದೆ ಮಂಗಳೂರಿನಲ್ಲಿದ್ದ ಆಕೆಯನ್ನು ಪಾಂಡೇಶ್ವರ ಪೊಲೀಸರು ವೈಟ್ ಡೋವ್ಸ್ ಆಶ್ರಮಕ್ಕೆ ಕರೆ ತಂದು ಸೇರಿಸಿದ್ದರು. ಮಂಗಳೂರಿಗೆ ಬರುವುದಕ್ಕೆ ಮುಂಚಿನ 4 ವರ್ಷ ಕಾಲ ಆಕೆ ಎಲ್ಲಿದ್ದರು ಎಂಬ ವಿಚಾರ ತಿಳಿದು ಬಂದಿರಲಿಲ್ಲ.
"
ಆಕೆಗೆ ತಮಿಳು ಭಾಷೆ ಮಾತ್ರ ಗೊತ್ತಿದ್ದು, ತನ್ನ ಹೆಸರು ಲೂರ್ದ್ ಮೇರಿ ಎಂದು ತಿಳಿಸಿದ್ದಳು. ಆಶ್ರಮದಲ್ಲಿ ಇರುವವರಿಗೆ ತಮಿಳು ಗೊತ್ತಿಲ್ಲದ ಕಾರಣ ಆಕೆಯ ಜತೆ ಹೆಚ್ಚು ಮಾತನಾಡಲು ಯಾರೂ ಮುಂದಾಗಿರಲಿಲ್ಲ. ವೈಟ್ ಡೊವ್ಸ್ನಲ್ಲಿ ಆಶ್ರಮವಾಸಿ ಆಗಿ ಸೇರಿದ ಅವರಿಗೆ ಮಾನಸಿಕ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಇತ್ತೀಚೆಗೆ ಒಂದು ವಾರದ ಹಿಂದೆ ತಮಿಳುನಾಡಿನ ಕ್ರೈಸ್ತ ಧರ್ಮಗುರು ರೆ.ಫಾ. ಜಾನ್ ಲೆವಿಸ್ ಅವರು ವೈಟ್ ಡೊವ್ಸ್ ಆಶ್ರಮಕ್ಕೆ ಭೇಟಿ ನೀಡಿದ್ದರು.
ಮಲಯಾಳ ಪರೀಕ್ಷೆ: ಬಿಹಾರ ಮಹಿಳೆಗೆ ನೂರಕ್ಕೆ ನೂರು ಅಂಕ!
ಈ ಸಂದರ್ಭದಲ್ಲಿ ಆಶ್ರಮದ ಮ್ಯಾನೇಜರ್ ಜೆರಾಲ್ಡ್ ಫರ್ನಾಂಡಿಸ್ ಅವರು ಆಶ್ರಮದಲ್ಲಿ ಇರುವ ತಮಿಳು ನಿವಾಸಿಗಳ ಜತೆ ತಮಿಳು ಭಾಷೆಯಲ್ಲಿ ಮಾತನಾಡಿ ಅವರ ಕುಟುಂಬಗಳ ಬಗ್ಗೆ ತಿಳಿದುಕೊಳ್ಳುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಲೂರ್ದ್ ಮೇರಿ ಅವರು ತಾನು ಹುಟ್ಟಿಬೆಳೆದ ಊರು ತಮಿಳುನಾಡಿನ ಕೊರ್ಟಂಪೇಟೆ ಎಂದು ಫಾ.ಜಾನ್ ಅವರಿಗೆ ತಿಳಿಸಿದ್ದರು.
ಫಾ.ಜಾನ್ ಲೆವಿಸ್ ಅವರು ಕೊರ್ಟಂಪೇಟೆಯ ಚಚ್ರ್ನ ಧರ್ಮಗುರುಗಳನ್ನು ಸಂಪರ್ಕಿಸಿ ಮಂಗಳೂರಿನಲ್ಲಿ ಪತ್ತೆಯಾದ ಲೂದ್ರ್ ಮೇರಿ ಅವರ ಬಗ್ಗೆ ಚಚ್ರ್ನಲ್ಲಿ ಘೋಷಿಸುವ ವ್ಯವಸ್ಥೆ ಮಾಡಿದ್ದರು. ಆಗ ಮೇರಿ ಅವರ ಕುಟುಂಬದ ಬಗ್ಗೆ ಮಾಹಿತಿ ಇದ್ದ ವ್ಯಕ್ತಿಯೊಬ್ಬರು ಕೊಯಮುತ್ತೂರಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸು ಕಲಿಯುತ್ತಿರುವ ಮೇರಿ ಅವರ ಪುತ್ರಿ ಜ್ಞಾನ ಅಂತೋನಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ಆಕೆ ತನ್ನ ಹಿರಿಯ ಸಹೋದರ ವೃತ್ತಿಯಲ್ಲಿ ಚಾಲಕ ಆಗಿರುವ ಕುಳಂದೈಯಾಸು ಅವರನ್ನು ಸಂಪರ್ಕಿಸಿ ತಮ್ಮ ತಾಯಿ ಜೀವಂತ ಇರುವುದಾಗಿ ತಿಳಿಸಿದ್ದಳು.
ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೋನಾ ಪೀಡಿತ ಮಹಿಳೆ!
ಪುತ್ರ ಕುಳಂದೈಯಾಸು ಅವರಿಗೆ 9 ವರ್ಷ ಪ್ರಾಯವಾದಾಗ ತಾಯಿ ಮೇರಿ ಕಾಣೆಯಾಗಿದ್ದರು. ತೃತೀಯ ಮಗು (ಪುತ್ರಿ) ರಾಕಿಯೆಲ್ ಲಿಸಿಯಾ ಈಗ ವಸತಿ ಶಾಲೆಯೊಂದರಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಹುಟ್ಟಿದ ಕೆಲವೇ ತಿಂಗಳಲ್ಲಿ ಮೇರಿ ನಾಪತ್ತೆಯಾಗಿದ್ದರು. ದಿಢೀರನೆ ಕಾಣೆಯಾದ ಮೇರಿ ಇಂದಲ್ಲ ನಾಳೆ ಬರುತ್ತಾಳೆ ಎಂದು ಪತ್ನಿಯ ಆಗಮನವನ್ನು ನಿರೀಕ್ಷಿಸುತ್ತಿದ್ದ ಪತಿ ಜಾನ್ಸನ್ ಕೆಲವು ವರ್ಷಗಳ ಬಳಿಕ ಸಾವನ್ನಿಪ್ಪಿದ್ದರು. ಅವರು ಸಾವಿಗೀಡಾದ ವೇಳೆ ಪಡಿತರ ಚೀಟಿಯಿಂದ ಆಕೆಯ ಹೆಸರನ್ನು ತೆಗೆದು ಹಾಕಲಾಗಿತ್ತು.
ವೈಟ್ ಡೊವಸ್ ಮುಖೇನ 14 ವರ್ಷಗಳ ಬಳಿಕ ಲೂದ್ರ್ ಮೇರಿ ತನ್ನ ಕುಟುಂಬದ ಜೊತೆ ಒಂದಾಗಿದ್ದು, ಶನಿವಾರ ಪುತ್ರಿ ಜ್ಞಾನ ಅಂತೋನಿ ಮತ್ತು ಪುತ್ರ ಕುಳಂದೈಯಾಸು ಅವರು ಮಂಗಳೂರಿಗೆ ಆಗಮಿಸಿ ಆಕೆಯನ್ನು ಊರಿಗೆ ಕರೆದೊಯ್ದರು.