ಗಾಯಗೊಂಡವರಲ್ಲಿ ಮಗು ಸೇರಿದಂತೆ ನಾಲ್ವರ ಸ್ಥಿತಿ ಚಿಂತಾಜನಕ, ಕಲಬುರಗಿ ಆಸ್ಪತ್ರೆಗೆ ದಾಖಲು

ಕಲಬುರಗಿ(ಅ.22): ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟಗೊಂಡು 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಇವರನ್ನೆಲ್ಲ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.

Add Asianetnews Kannada as a Preferred SourcegooglePreferred

ಮರಗಮ್ಮ ದೇವಿ ಜಾತ್ರೆ ಹಾಗೂ ಹಿಂದೆ ಭಗ್ನವಾಗಿದ್ದ 15 ದೇವಿ ವಿಗ್ರಹಗಳ ಮರು ಪ್ರತಿಷ್ಠಾಪನೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಹಂತದಲ್ಲಿ ಮದ್ದು ಸಿಡಿಸಿ ಸಂಭ್ರಮಿಸಲಾಗುತ್ತಿತ್ತು. ಆಕಾಶದತ್ತ ಮದ್ದು ಹಾರಿಸಿ ಸಂಭ್ರಮಿಸುತ್ತಿದ್ದಾಗ ಬೆಂಕಿಯ ಕಿಡಿಗಳು ಪಕ್ಕದಲ್ಲೇ ಸಂಗ್ರಹಿಸಲಾಗಿದ್ದ ಮದ್ದಿನ ರಾಶಿಯ ಮೇಲೆ ಬಿದ್ದಿವೆ. ಆಗ ಸಿಡಿಮದ್ದು ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Green Crackers: ಎಚ್ಚರ, ಹಸಿರು ಪಟಾಕಿಗಳೂ ಸುರಕ್ಷಿತವಲ್ಲ!

ಅಂದಾಜು 5 ಕೆಜಿಯಷ್ಟು ಸಿಡಿಮದ್ದು ಇಲ್ಲಿ ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಮದ್ದು ಸಿಡಿಸುವ ವ್ಯಕ್ತಿ, ಓರ್ವ ಮಗು, ಸೇರಿ ನಾಲ್ವರು ತೀವ್ರವಾಗಿ ಗಾಯದೊಂಡಿದ್ದು ಅವರ ಎಲ್ಲರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಹಲವರ ದೇಹದ ಅಂಗಾಂಗಗಳು ಸುಟ್ಟಿವೆ ಎನ್ನಲಾಗಿದ್ದು ಸ್ಥಳೀಯರಿಂದ ವಾಹನಗಳನ್ನು ಪಡೆದು ಗಾಯಗೊಂಡವರನ್ನೆಲ್ಲ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.