ಮುಂದಿನ 2 ತಿಂಗಳ ಒಳಗಾಗಿ ಮೀನುಗಾರರಿಗೆ ನೀಡಿದ ಕಿಸಾನ್‌ ಕಾರ್ಡ್‌ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕಾರವಾರ(ಜೂ.17): ಮುಂದಿನ 2 ತಿಂಗಳ ಒಳಗಾಗಿ ಮೀನುಗಾರರಿಗೆ ನೀಡಿದ ಕಿಸಾನ್‌ ಕಾರ್ಡ್‌ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಮಂಗಳವಾರ ಮಾಧ್ಯಮದವರ ಜತೆಗೆ ಮಾತನಾಡಿ, ಉತ್ತರ ಕನ್ನಡದಲ್ಲಿ ಕಿಸಾನ್‌ ಕಾರ್ಡ್‌ಗಾಗಿ 5,000 ಅರ್ಜಿ ಬಂದಿದೆ. 2500 ಅರ್ಜಿ ಅರ್ಹತೆ ಪಡೆದುಕೊಂಡಿದೆ. ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ, ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಲಾಗಿದೆ. 2 ತಿಂಗಳ ಒಳಗೆ ಎಲ್ಲರ ಖಾತೆಗೂ ಹಣ ಜಮಾ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಚೀನಾ ಗಡಿ ಕ್ಯಾತೆ ಶುರುವಾದದ್ದು ಎಲ್ಲಿಂದ? ಇಲ್ಲಿದೆ ಟೈಂ ಲೈನ್

11,000ಕ್ಕೂ ಅಧಿಕ ಅರ್ಜಿ ಶೂನ್ಯ ಬಡ್ಡಿ ದರದ ಸಾಲಕ್ಕಾಗಿ ಬಂದಿದೆ. ಆದರೆ, 1800 ಜನರಿಗೆ ಸಾಲ ಮಂಜೂರಾಗಿದೆ ಎಂದು ಇಲ್ಲಿನ ಮೀನುಗಾರರು ತಿಳಿಸಿದ್ದರು. ಆದಷ್ಟುಶೀಘ್ರದಲ್ಲಿ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಮೀನುಗಾರರಿಗೆ ಸಾಲದ ವಿಚಾರದಲ್ಲಿ ಆಗಿದ್ದ ಸಮಸ್ಯೆ ಮುಂದಿನ ದಿನದಲ್ಲಿ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಟ್ಟಕಡೆಯ ಮೀನುಗಾರನಿಗೂ ಬದುಕಲು ಹೇಗೆ ಸಹಾಯ ಮಾಡಬೇಕು ಎನ್ನುವ ಬಗ್ಗೆ ಯೋಚಿಸಲಾಗುತ್ತಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹೊರತಾಗಿ ಉಳಿದ ಜಿಲ್ಲೆಗಳಲ್ಲಿ 26,000 ಕೆರೆಗಳಿವೆ. ಇವುಗಳ ಮೂಲಕ ಹೇಗೆ ಒಳನಾಡು ಮೀನುಗಾರಿಕೆಗೆ ಉತ್ತೇಜಿಸಬಹುದು ಎಂದು ಚಿಂತನೆ ನಡೆಸಿದೆ. ಸಣ್ಣ ಕೆರೆಯಾದಲ್ಲಿ ಪಾಲನಾಕೇಂದ್ರ, ಬೃಹತ್‌ ಕೆರೆಯಾದಲ್ಲಿ ಗುತ್ತಿಗೆ ಪದ್ಧತಿ, ಬಡ ಮೀನುಗಾರನಿಗೆ ಕೆರೆ ನೀಡಿ, ಕಿಸಾನ್‌ ಕಾರ್ಡ್‌ ವಿತರಿಸಿ ಅವನ ಬದುಕಿಗೆ ಭದ್ರತೆ ನೀಡಬಹುದೇ ಎನ್ನುವ ಮಜಲುಗಳಲ್ಲಿ ವಿಚಾರ ಮಾಡಲಾಗುತ್ತಿದೆ ಎಂದರು.

ಮಾನ್ಸೂನ್‌ ಮುಗಿವ ತನಕ ಮರಳುಗಾರಿಕೆ ಸ್ಥಗಿತ: ಶಿವಮೊಗ್ಗ ಡಿಸಿ

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಇದ್ದುದ್ದರಿಂದ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ಆ ಭಾಗಕ್ಕೆ ಸಿಂಹಪಾಲು ಸಿಕ್ಕಿದಂತೆ ತೋರುತ್ತದೆ. ಕೆಲವು ಕಾರಣದಿಂದ ಉತ್ತರ ಕನ್ನಡದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ನೀಡಿರಲಿಲ್ಲ. ಈಗ ಇಲಾಖಾ ಹಾಗೂ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿದ್ದು, ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು. ಶಾಸಕಿ ರೂಪಾಲಿ ನಾಯ್ಕ ಇದ್ದರು.