ಬೆಂಗಳೂರಿನಲ್ಲಿ ಓಲಾ ಚಾಲಕನಿಂದ ಕೊಲೆಯಾದ ಮಾಡೆಲ್ ಮೃತದೇಹವನ್ನು ಮತ್ತೊಮ್ಮೆ ಹೊರತೆಗೆದು ಅಂತ್ಯ ಸಂಸ್ಕಾರ ಮಾಡಲಾಗಿದೆ. 

ಬೆಂಗಳೂರು [ಆ.25]:  ಅಪರಿಚಿತ ಮೃತದೇಹ ಎಂದೂ ತಿಳಿದು ಪೂಜಾ ಸಿಂಗ್‌ ಅವರ ಅಂತ್ಯಕ್ರಿಯೆಯನ್ನು ಪೊಲೀಸರು ನೆರವೇರಿಸಿದ್ದರು. ಈಗ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ನಗರಕ್ಕೆ ಬಂದ ಮೃತ ಕುಟುಂಬದವರು, ಮತ್ತೆ ಮೃತದೇಹವನ್ನು ತೆಗೆದು ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರೆವೇರಿಸಿದ್ದಾರೆ.

Add Asianetnews Kannada as a Preferred SourcegooglePreferred

ವಿಮಾನ ನಿಲ್ದಾಣ ಸಮೀಪ ಜು.31ರಂದು ಪೂಜಾಸಿಂಗ್‌ ಮೃತದೇಹ ಪತ್ತೆಯಾಗಿತ್ತು. ಆದರೆ ಅಂದು ಅವರ ಹೆಸರು, ವಿಳಾಸ ಸಿಗದ ಹಿನ್ನೆಲೆಯಲ್ಲಿ 12 ದಿನಗಳ ಕಾಲ ಶವಗಾರದಲ್ಲಿ ಇರಿಸಿದ ಪೊಲೀಸರು, ಅಪರಿಚಿತಳ ಪತ್ತೆಗೆ ಹುಡುಕಾಟ ನಡೆಸಿದ್ದರು. ಆದರೆ ಸುಳಿವು ಸಿಗದ ಹಿನ್ನೆಲೆಯಲ್ಲಿ ಕೊನೆಗೆ ತಾವೇ ಅಂತ್ಯಕ್ರಿಯೆ ನಡೆಸಿದ್ದರು.

ಪೂಜಾಳ ಕೊಲೆ ವಿಚಾರ ತಿಳಿದು ನಗರಕ್ಕೆ ಬಂದ ಆಕೆಯ ಪತಿ ಸೌದೀಪ್‌ ಡೇ, ಅತ್ತೆ ಮಾವ ಮತ್ತು ಆಕೆಯ ತಂದೆ - ತಾಯಿ ಸೇರಿದಂತೆ ಕುಟುಂಬ ಸದಸ್ಯರು, ನಂತರ ಕೋರ್ಟ್‌ ಅನುಮತಿ ಪಡೆದು ಮತ್ತೆ ಮೃತದೇಹವನ್ನು ಹೊರ ತೆಗೆದು ತಮ್ಮ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರೆವೇರಿಸಿದರು. ಬಳಿಕ ಚಿತಾಭಸ್ಮವನ್ನು ತೆಗೆದುಕೊಂಡು ಹೋದರು ಎಂದು ಬಾಗಲೂರು ಠಾಣೆ ಪೊಲೀಸರು ಮಾಹಿತಿ ನೀಡಿದರು.