ಮೊಬೈಲ್ ಸಾಗಿಸುತ್ತಿದ್ದ ಕಂಟೈನರ್ ತಡೆದು ಕೋಟಿ ಕೋಟಿ ಮೌಲ್ಯದ  ಮೊಬೈಲ್ ದರೋಡೆ ಮಾಡಲಾಗಿದೆ. 

ಆನೇಕಲ್‌ (ಅ.22): ತುಮಿಳುನಾಡಿನ ಕೃಷ್ಣಗಿರಿ-ಹೊಸೂರು ನಡುವಿನ ಮೇಲುಮಲೈ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಕಂಟೈನರ್‌ ಒಂದನ್ನು ತಡೆದ 10 ದರೋಡೆ ಕೋರರ ತಂಡ, ಚಾಲಕರನ್ನು ಥಳಿಸಿ ಸಿನಿಮೀಯ ಶೈಲಿಯಲ್ಲಿ 15 ಕೋಟಿ ರು. ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಚೆನ್ನೈನಿಂದ ಮುಂಬೈಗೆ ಡಿಎಚ್‌ಎಲ್‌ ಕಂಟೈನರ್‌ ಮೂಲಕ ಎಂಐ ಕಂಪನಿಯ ಮೊಬೈಲ್‌ಗಳನ್ನು ಸಾಗಿಸಲಾಗುತ್ತಿತ್ತು. ಇದೇ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ದರೋಡಕೋರರ ತಂಡ, ಕಂಟೈನರ್‌ ಅನ್ನು ಅಡ್ಡಗಟ್ಟಿಚಾಲಕರಾದ ಅರುಣ್‌(26) ಹಾಗೂ ಸತೀಶ್‌ ಕುಮಾರ್‌ (29)ನನ್ನು ಹಿಡಿದು ಥಳಿಸಿದ್ದಾರೆ. ಹರಿತವಾದ ಚಾಕು ತೋರಿಸಿ, ಇಬ್ಬರನ್ನೂ ಕಾಡಿನೊಳಗೆ ಎಳೆದುಕೊಂಡು ಹೋಗಿ ಮರಕ್ಕೆ ಕಟ್ಟಿಹಾಕಿ, ಅವರ ಬಳಿ ಇದ್ದ ಮೊಬೈಲ್‌ ಮತ್ತು ಹಣವನ್ನು ಕಸಿದುಕೊಂಡಿದ್ದಾರೆ.

ಡ್ರಗ್ಸ್‌ ಮಾಫಿಯಾ: ಕೊರೋನಾ ಕಾರಣ ವಿಚಾರಣೆಗೆ ಬರ್ತಿಲ್ಲ ಒಬೆರಾಯ್‌ ಪತ್ನಿ ಪ್ರಿಯಾಂಕ ...

ಬೇರೆ ಕಂಟೈನರ್‌ಗೆ ಶಿಫ್ಟ್‌: ಬಳಿಕ ಕಂಟೈನರ್‌ವೊಂದಿಗೆ ಪರಾರಿಯಾದ ದರೋಡೆಕೋರರು 10 ಕಿ.ಮೀ. ದೂರ ಸಾಗಿ, ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿದ್ದಾರೆ. ವಾಹನ ರಿಪೇರಿಯಲ್ಲಿದೆ ಎಂಬ ಫಲಕವನ್ನು ರಸ್ತೆಯಲ್ಲಿಟ್ಟು ಜನರ ದಿಕ್ಕು ತಪ್ಪಿಸಿದ್ದಾರೆ. ಇದೇ ವೇಳೆ ಮತ್ತೊಂದು ಕಂಟೈನರ್‌ ತಂದು ಬಾಕ್ಸ್‌ಗಳಲ್ಲಿದ್ದ ಮೊಬೈಲ್‌ ಬಾಕ್ಸ್‌ಗಳನ್ನು ಅನ್‌ಲೋಡ್‌ ಮಾಡಿಕೊಂಡು, ಡಿಎಚ್‌ಎಲ್‌ ಕಂಟೈನರ್‌ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೇ ಮಾರ್ಗದಲ್ಲಿ ಸಂಚಸರಿಸುತ್ತಿದ್ದ ವಾಹನ ಸವಾರರು, ಕಾಪಾಡಿ ಕಾಪಾಡಿ ಎಂಬ ಸದ್ದು ಕೇಳಿ ಕಾಡಿನೊಳಗೆ ತೆರಳಿದ್ದಾರೆ. ಈ ವೇಳೆ ಚಾಲರನ್ನು ರಕ್ಷಿಸಿ, ಸೂಳಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳು ಚಾಲಕರನ್ನು ಹೊಸೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಖಾಲಿ ಕಂಟೈನರ್‌ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೃಷ್ಣಗಿರಿ ಎಸ್ಪಿ ಮುರಳಿ, ದರೋಡೆಕೋರರ ಪತ್ತೆಗೆ ವಿಶೇಷ ತಂಡವನ್ನು ರಚಿಸಿ, ತನಿಖೆ ಚುರುಕುಗೊಳಿಸಿದ್ದಾರೆ.