ನಗರಪಾಲಿಕೆ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಪಟ್ಟಣ ವ್ಯಾಪಾರ ಸಮಿತಿ ಸಹಯೋಗದಲ್ಲಿ ಸ್ವ-ನಿಧಿ ಮಹೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಮೈಸೂರು : ನಗರಪಾಲಿಕೆ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಪಟ್ಟಣ ವ್ಯಾಪಾರ ಸಮಿತಿ ಸಹಯೋಗದಲ್ಲಿ ಸ್ವ-ನಿಧಿ ಮಹೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದ್ದು, ಅದು ಇಡೀ ದೇಶದಲ್ಲಿ ಮೊದಲ ಬಾರಿಗೆ ಕೃಷ್ಣರಾಜ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಂಡಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ನೆರವಿನೊಂದಿಗೆ ಯೋಜನೆ ಜಾರಿಯಾಗಿದ್ದು, ಈ ಸಂಬಂಧ ಈಗಾಗಲೇ 19000 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಹಣಕಾಸು ಇಲಾಖೆಯೊಂದಿಗೆ ಇನ್ನಿತರೆ ಇಲಾಖೆಗಳೂ ಕೂಡ ನೆರವು ನೀಡಿವೆ. ಇದರೊಂದಿಗೆ ಮಾರ್ಗದರ್ಶಿ ಬ್ಯಾಂಕ್‌ ಮುಂದಾಳತ್ವದಲ್ಲಿ ಎಲ್ಲಾ ಬ್ಯಾಂಕುಗಳಲ್ಲೂ ಯೋಜನೆಗೆ ಪೂರಕವಾದ ನೆರವು ನೀಡುವ ಕೌಂಟರ್‌ ತೆರೆಯಲಾಗಿದೆ. ಯೋಜನೆಯ ಮೂಲಕ ಮೊದಲ ಹಂತದಲ್ಲಿ 8000 ಫಲಾನುಭವಿಗಳಿಗೆ ಬಡ್ಡಿರಹಿತವಾಗಿ ತಲಾ .10000 ಮೂಲ ಬಂಡವಾಳ ಒದಗಿಸಲಾಗಿದೆ. ಈ ಮೂಲಕ ಸಣ್ಣ ಪುಟ್ಟವ್ಯಾಪಾರಸ್ಥರು ಬಡ್ಡಿ ಹಾಗೂ ಮೀಟರ್‌ ಬಡ್ಡಿ ದಂಧೆಕೋರರಿಂದ ಕಿರುಕುಳ ಅನುಭವಿಸುವುದು ತಪ್ಪಿದೆ ಎಂದರು.

ಯೋಜನೆ ಅನುಷ್ಠಾನದ ನಂತರ ಸರ್ಕಾರದಿಂದ ಗುರುತಿನ ಕಾರ್ಡ್‌ ನೀಡಲಾಗುತ್ತದೆ. ಸಂಪಾದನೆ ಸಾರ್ಥಕ ಆಗಬೇಕು. ವ್ಯಾಪಾರದ ಕಾರ್ಡ್‌ ಜೊತೆಗೆ ಈ ಶ್ರಮ್‌ ಕಾರ್ಡ್‌ ಕೂಡ ನೀಡಲಾಗುತ್ತಿದೆ. ಈ ಶ್ರಮ್‌ ಕಾರ್ಡ್‌ ಉಳ್ಳವರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಯೋಜನೆಯ ಕಾರ್ಡುದಾರರಿಗೆ ಪ್ರಧಾನ ಮಂತ್ರಿಗಳ ಕಡೆಯಿಂದ ಹತ್ತು ಸಾವಿರ ಬಂಡವಾಳ ದೊರೆಯಲಿದೆ. ನಂತರ ಇಪ್ಪತ್ತು, ತದನಂತರ ನಲವತ್ತು ಸಾವಿರ, ನಂತರ ಎಂಬತ್ತು ಸಾವಿರದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ದೊರೆಯಲಿದೆ. ಈ ಮೂಲಕ ಬಡ್ಡಿ ರಹಿತ ಬಂಡವಾಳ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ಬೀದಿ ಬದಿ, ತಳ್ಳುಗಾಡಿ, ಸಣ್ಣ ಸಣ್ಣ ವ್ಯಾಪಾರಿಗಳನ್ನು ಗುರುತಿಸಿ ಕೇಂದ್ರ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಬಡತನದಲ್ಲಿದ್ದವರು ವ್ಯಾಪಾರ ಮಾಡುವ ಮೂಲಕ ನೆಮ್ಮದಿಯ ಬದುಕು ಸಾಗಿಸಲು ನೆರವು ನೀಡಲಾಗಿದೆ. ಮೀಟರ್‌ ಬಡ್ಡಿ ದಂದೆಕೋರರಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಆಗಬಹುದಾದ ತೊಂದರೆ ತಪ್ಪಿಸುವ ಉದ್ದೇಶ ಹೊಂದಿದೆ ಎಂದರು.

ಒಂದೊಂದು ವ್ಯಾಪಾರದಲ್ಲಿ ಒಂದೊಂದು ಸಮಸ್ಯೆ ಇದ್ದು, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡಲಾಗಿದೆ. ಈಗಾಗಲೇ ವ್ಯಾಪಾರಸ್ಥರನ್ನು ಗುರುತಿಸಲಾಗಿದೆ. ಯಾರ್ಯಾರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂಬ ಬಗ್ಗೆ ಪೊಲೀಸರು, ಪಾಲಿಕೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ದಾಖಲೆ ಸಿದ್ದಪಡಿಸಿದ್ದಾರೆ. ಯೋಜನೆ ಅನುಷ್ಠಾನದ ನಂತರ ಸರ್ಕಾರದಿಂದ ಗುರುತಿನ ಕಾರ್ಡ್‌ ನೀಡಲಾಗಿದೆ. ಸಂಪಾದನೆ ಸಾರ್ಥಕ ಆಗಬೇಕು ಎಂದರು.

ಹತ್ತು ಹಲವು ಯೋಜನೆ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಪ್ರತಿ ಹಂತದಲ್ಲಿಯೂ ನಮ್ಮ ಕ್ಷೇತ್ರದಲ್ಲಿ ಮಾದರಿ ನಡೆ ಅನುಸರಿಸಿದ್ದು, ಈವರೆಗೆ 9200 ಗರ್ಭಿಣಿಯರಿಗೆ ಮಡಿಲು ಯೋಜನೆ ತಲುಪಿಸಲಾಗಿದೆ. ನಮ್ಮ ಕ್ಷೇತ್ರದ ಗರ್ಭಿಣಿಯರ ಅಣ್ಣನಾಗಿ ಸೇವೆ ಮಾಡಲಿಕ್ಕೆ ಇಂದು ಸದಾವಕಾಶ ನನ್ನ ಪಾಲಿಗೆ ಲಭಿಸಿರುವುದು ಹೆಮ್ಮೆಯ ವಿಷಯ. ಪ್ರತಿ ಆರು ತಿಂಗಳಿಗೊಮ್ಮೆ ಈ ಕಾರ್ಯ ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರು.

ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಪೋ›ತ್ಸಾಹಿಸುವುದು, ಗೌರವಿಸುವುದು ಹಾಗೂ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳು, ವಿವಿಧ ಸ್ಪರ್ಧೆ, ಡೇ-ನಲ್ಮ… ಕುರಿತು ಕಿರು ಚಿತ್ರ ಪ್ರದರ್ಶನ, ಉತ್ತಮ ಡಿಜಿಟಲ್‌ ವಹಿವಾಟು ಬಗ್ಗೆ ಬ್ಯಾಂಕ್‌ ತರಬೇತಿ, ಪಿಎಂ ಸ್ವಾ-ನಿಧಿ ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳುವುದು, ಆಹಾರ ಮೇಳ, ಸ್ವ-ಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾಂಕುಗಳ ಸೌಲಭ್ಯದ ಬಗ್ಗೆ ತಿಳಿಸಲಾಯಿತು.

ಬೀದಿ ಬದಿ ವ್ಯಾಪಾರಸ್ಥರ ಕುಟುಂಬದ ವಿದ್ಯಾವಂತ ಎಸ್ಸೆಸ್ಸೆಲ್ಸಿಯಲ್ಲಿ ಶೇ.85ರಷ್ಟು, ಪಿಯುಸಿ ಮತ್ತು ಪದವಿಯಲ್ಲಿ ಶೇ.75 ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪೋ›ತ್ಸಾಹಧನ ನೀಡುವುದು ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರ ವಿತರಿಸಲಾಯಿತು. ಬೀದಿ ಬದಿ ವ್ಯಾಪಾರಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಉಪ ಮೇಯರ್‌ ಡಾ.ಜಿ. ರೂಪಾ, ಉಪ ಆಯುಕ್ತೆ ರೂಪಾ ಇದ್ದರು.