Asianet Suvarna News Asianet Suvarna News

ಕಾಂಗ್ರೆಸ್ ವಿರುದ್ಧ ಶಾಸಕ ಎಂ.ಟಿ.ಕೃಷ್ಣಪ್ಪ ಗಂಭೀರ ಆರೋಪ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ತಾಂಡವವಾಡುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತಾಪಿಗಳ ಗೋಳು ಹೇಳಲಾಗದು. ಇದೊಂದು ರೈತ ವಿರೋಧಿ ಸರ್ಕಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

MLA M. T. Krishnappa has made a serious allegation against the Congress snr
Author
First Published Nov 10, 2023, 8:55 AM IST

 ತುರುವೇಕೆರೆ :  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ತಾಂಡವವಾಡುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತಾಪಿಗಳ ಗೋಳು ಹೇಳಲಾಗದು. ಇದೊಂದು ರೈತ ವಿರೋಧಿ ಸರ್ಕಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

ಜೆಡಿಎಸ್ ವರಿಷ್ಠರ ಸೂಚನೆಯ ಮೇರೆಗೆ ಜಿಲ್ಲೆಯಾದ್ಯಂತ ಬರ ಅಧ್ಯಯನ ಮಾಡುತ್ತಿರುವ ಎಂ.ಟಿ.ಕೃಷ್ಣಪ್ಪ ತಂಡ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಲಕ್ಷ್ಮೀದೇವರಹಳ್ಳಿಯ ರೈತರ ಜಮೀನಿಗೆ ಭೇಟಿ ನೀಡಿ ರೈತರ ಕಷ್ಟಗಳನ್ನು ಆಲಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದ ರೈತರ ಹಿತ ನಿರ್ಲಕ್ಷ್ಯ ಮಾಡಿದೆ. ಯಾವುದೇ ಸಚಿವರು ಬರ ಅಧ್ಯಯನ ಮಾಡಿಲ್ಲ. ಕುಳಿತಲ್ಲೇ ವರದಿ ತರಿಸಿಕೊಳ್ಳುತ್ತಿದ್ದಾರೆ. ವಾಸ್ತವತೆ ಅರಿಯುವ ಮನಸ್ಸು ಕಾಂಗ್ರೆಸ್ ಗೆ ಇಲ್ಲ. ವರ್ಗಾವಣೆ ಹಾಗೂ ಕಮೀಷನ್ ದಂಧೆಯಲ್ಲಿ ತೊಡಗಿದ್ದಾರೆಂದು ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

ಗ್ಯಾರಂಟಿ ಯೋಜನೆ ಜಾರಿಗೆ ತರುತ್ತೇವೆಂದು ಹೇಳಿ ಜನರನ್ನು ವಂಚಿಸಿದ್ದಾರೆ. ಎಲ್ಲಾ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬರಗಾಲ ತಾಂಡವಾಡುತ್ತಿದೆ. ಜಮೀನಿನಲ್ಲಿ ಬೆಳೆ ಬೆಳೆಯಲು ಬಿತ್ತಿದ್ದ ಬೀಜದ ಹಣವೂ ದೊರಕದ ಸ್ಥಿತಿ ಇದೆ. ರೈತರಿಗೆ ಬೇಸಾಯವೇ ಬೇಡ ಎಂಬ ಸ್ಥಿತಿ ಇದೆ. ಆದರೆ, ಈ ಕಾಂಗ್ರೆಸ್ ಸರ್ಕಾರ ಮೋಜಿನಲ್ಲಿ ತೊಡಗಿದೆ ಎಂದು ಎಂ.ಟಿ.ಕೃಷ್ಣಪ್ಪ ಆಪಾದಿಸಿದರು.

ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಪರಿಹಾರಕ್ಕಾಗಿ ಬೆಟ್ಟು ತೋರದೇ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಮೆರೆಯಲಿ. ಜೆಡಿಎಸ್ ನ ಬರ ಅಧ್ಯಯನ ತಂಡ ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಕೇಂದ್ರಕ್ಕೂ ವರದಿ ಸಲ್ಲಿಸಲಿದೆ. ಸಾಧ್ಯವಾದರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರಧಾನಿ ಮೋದಿಯವರನ್ನೂ ಭೇಟಿ ಮಾಡಿ, ರಾಜ್ಯದ ರೈತಾಪಿಗಳ ಸಂಕಷ್ಟವನ್ನು ವಿವರಿಸಿ ಸೂಕ್ತ ಪರಿಹಾರ ತರುವ ಪ್ರಯತ್ನ ಮಾಡುವುದಾಗಿಯೂ ಎಂ.ಟಿ.ಕೃಷ್ಣಪ್ಪ ಹೇಳಿದರು.

ತುಮಕೂರು ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಮತ್ತು ಕುಣಿಗಲ್ ನಲ್ಲಿ ಬರ ವೀಕ್ಷಣೆ ನಡೆದಿದೆ. ಎಲ್ಲಾ ಕಡೆಯೂ ಬರಗಾಲ ಆವರಿಸಿದೆ. ನೀರಿಗೆ ಹಾಹಾಕಾರವಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಈ ಎಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸಲಾಗಿದೆ. ಈ ಸಂಬಂಧ ಜೆಡಿಎಸ್ ಶಾಸಕಾಂಗ ಪಕ್ಷದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತುರುವೇಕೆರೆ ತಾಲೂಕಿನಲ್ಲಿ 14388  ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಆಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪೂಜಾ ಮಾಹಿತಿ ನೀಡಿದರು.

ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಇಒ ಶಿವರಾಜಯ್ಯ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ, ಜೆಡಿಎಸ್ ಪರಾಜಿತ ಅಭ್ಯರ್ಥಿ ತಿಪಟೂರಿನ ಶಾಂತಕುಮಾರ್, ಗುಬ್ಬಿಯ ನಾಗರಾಜು, ಜೆಡಿಎಸ್ ಮುಖಂಡರಾದ ಕುಣಿಗಲ್‌ನ ಎನ್.ಜಗದೀಶ್, ಸ್ಥಳೀಯ ಮುಖಂಡರಾದ ವಿಜಯೇಂದ್ರ, ವೆಂಕಟಾಪುರ ಯೋಗೀಶ್, ತ್ಯಾಗರಾಜು, ಮಾಜಿ ಜಿಲ್ಲಾ ಪಂಚಾಯ್ತಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios