Asianet Suvarna News Asianet Suvarna News

ಲಾಕ್‌ಡೌನ್‌: ನೊಂದವರ ನೋವಿಗೆ ಮಿಡಿದ ಶಾಸಕ ಮನಗೂಳಿ

ಕ್ಷೇತ್ರದಲ್ಲಿ ಸಾವಿರಾರು ಕಿಟ್‌ ನೀಡಿ ಜನಸೇವೆ ಮಾಡಿದ ಕುಟುಂಬದ ಸದಸ್ಯರು, ಕಾರ್ಯಕರ್ತರು| ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ,ಪಂಥ ಇಲ್ಲದೆ ಜನರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಮನಗೂಳಿ| ಕ್ಷೇತ್ರದಲ್ಲಿ ಸಾವಿರಾರು ಜನರಿಗೆ ಆಹಾರ ಧಾನ್ಯ, ದಿನಸಿ ಸಾಮಾಗ್ರಿಗಳ ಕಿಟ್‌ಗಳು ವಿತರಿಸುವ ಜೊತೆಗೆ ಕೊರೋನಾ ವಾರಿಯರ್ಸ್‌ಗೆ ಮತ್ತು ಕೆಲ ನಿರ್ಗತಿಕರಿಗೆ ಅನ್ನದಾಸೋಹ ಮಾಡುತ್ತಿರುವ ಶಾಸಕ|

MLA M C Managuli Distribution of Food Kit to Needy People in Sindagi in Vijayapura district
Author
Bengaluru, First Published May 2, 2020, 12:58 PM IST

ಆಲಮೇಲ(ಮೇ.02):  ಕೊರೋನಾ ಹೆಮ್ಮಾರಿ ತಡೆಯಲು ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆಯೇ ಬಡ ಕುಟುಂಬಗಳು ಅಕ್ಷರಶಃ ಆಹಾರಕ್ಕಾಗಿ ಹಪಹಪಿಸಿದರು. ಇವರ ಸಹಾಯಕ್ಕೆ ಕೆಲವು ಸಂಘ-ಸಂಸ್ಥೆಗಳು ನಿಂತವು. ಇನ್ನೂ ಕೆಲವೊಂದು ಸಹೃದಯಿಗಳು ಮಿಡಿದವು. ಇಂತಹ ಸಂದರ್ಭದಲ್ಲಿಯೇ ಸಿಂದಗಿ ಮತಕ್ಷೇತ್ರದ ಬಡವರ ಹಸಿವು ಹಾಗೂ ಜಾಗೃತಿ ಮೂಡಿಸಲು ಜೆಡಿಎಸ್‌ ಶಾಸಕ ಎಂ.ಸಿ.ಮನಗೂಳಿ ಅವರು ಪಣತೊಟ್ಟು, ಅದರಂತೆ ನೊಂದವರ, ಕಷ್ಟದಲ್ಲಿ ಸಿಲುಕಿದವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.

ಸಿಂದಗಿ ಶಾಸಕ ಮನಗೂಳಿ ಅವರು ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ,ಪಂಥ ಇಲ್ಲದೆ ಜನರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಜೆಡಿಎಸ್‌ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರು ಸಾಥ್‌ ನೀಡುತ್ತಿದ್ದು, ಮತಷ್ಟು ಬಡವರ ಸೇವೆಗೆ ಅವಕಾಶ ಸಿಕ್ಕಿದೆ. ಇದರಿಂದ ಕ್ಷೇತ್ರದಲ್ಲಿ ಸಾವಿರಾರು ಜನರಿಗೆ ಆಹಾರ ಧಾನ್ಯ, ದಿನಸಿ ಸಾಮಾಗ್ರಿಗಳ ಕಿಟ್‌ಗಳು ವಿತರಿಸುವ ಜೊತೆಗೆ ಕೊರೋನಾ ವಾರಿಯರ್ಸ್‌ಗೆ ಮತ್ತು ಕೆಲ ನಿರ್ಗತಿಕರಿಗೆ ಅನ್ನದಾಸೋಹ ಮಾಡುತ್ತಿದ್ದಾರೆ.

ಕೊರೋನಾ ಕುರಿತು ಸುಳ್ಳುಸುದ್ದಿ ಹರಿಬಿಟ್ಟ ಯುವಕನಿಗೆ ಒಂದು ವಾರ ಕಸ ಗುಡಿಸುವ ಶಿಕ್ಷೆ..!

ಎಲ್ಲ ಕೆಲಸಕ್ಕೆ ಪುತ್ರನ ಸಾಥ್‌:

ಎಂ.ಸಿ.ಮನಗೂಳಿ ಅವರು ಹುಟ್ಟಿನಿಂದಲೂ ಜನಸೇವೆ ಮಾಡುವ ಸ್ವಭಾವ ಉಳ್ಳವರು, ಬಡವರ ಬಗ್ಗೆ, ನಿರ್ಗತಿಕರ, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಯಾರಾದರೂ ಇವರ ಬಳಿ ಸಹಾಯ ಕೇಳಿಕೊಂಡು ಹೋದರೆ ಅಂತಹವರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಗುಣ ಇವರದು. ಜನಸೇವೆಗಾಗಿಯೇ ಸುಮಾರು 40 ವರ್ಷದಿಂದ ರಾಜಕೀಯ ಮಾಡುತ್ತಾ ಬಂದು ಎರಡು ಬಾರಿ ಶಾಸಕರಾಗಿ ಎರಡು ಬಾರಿಗೂ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಭಾಗದಲ್ಲಿ ಇವರದು ತನ್ನದೆಯಾದ ದೊಡ್ಡ ಕಾರ್ಯಕರ್ತರ ಪಡೆಯೇ ಇದೆ. ಸುಮಾರು 80 ವರ್ಷದ ಇಳಿಯ ವಯಸ್ಸಿನಲ್ಲೂ ಯುವಕರಿಗೆ ಮಾದರಿಯಾಗಿ ಕಾರ್ಯ ಮಾಡುತ್ತಿದ್ದಾರೆ. ಇವರ ಜೊತೆಗೆ ಪುತ್ರ ಅಶೋಕ ಮನಗೂಳಿ ಟೊಂಕಕಟ್ಟಿನಿಂತಿದ್ದು ಮತ್ತಷ್ಟುಕಾರ್ಯಕರ್ತರಲ್ಲಿ ಹುಮ್ಮಸು ಬಂದಿದೆ. ಅಶೋಕ ಮನಗೂಳಿ ನೇತೃತ್ವದಲ್ಲಿ ತಿಂಗಳಿಂದ ಸಾವಿರಾರು ಕಾರ್ಯಕರ್ತರು ಕೊರೋನಾ ವಿರುದ್ಧ ಕೆಲಸ ಮಾಡುತ್ತಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ:

ಸಿಂದಗಿ ಮತಕ್ಷೇತ್ರ ಅಭಿವೃದ್ಧಿಯಿಂದ ಹಿಂದೆ ಉಳಿದ ಸಂದರ್ಭದಲ್ಲಿ ಶಾಸಕ ಮನಗೂಳಿ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಕೆಲಸ ಮಾಡಿಸಿದ್ದಾರೆ. ಕೊಟ್ಟಮಾತಿನಂತೆ ಆಲಮೇಲ ತಾಲೂಕು ಘೋಷಣೆ, ಕಡಣಿ ಬ್ರಿಡ್ಜ್‌, ತೋಟಗಾರಿಕೆ ಕಾಲೇಜ ಸೇರಿದಂತೆ ಹಲವಾರು ದೊಡ್ಡ ಪ್ರಮಾಣದ ಕಾರ್ಯ ಮಾಡಿದ್ದು ಕ್ಷೇತ್ರದ ಜನ ಮನಗೂಳಿ ಅವರನ್ನು ಇದೇ ಕಾರಣಕ್ಕೆ ಸ್ಮರಿಸುತ್ತಿದ್ದಾರೆ.

ಕೊರೋನಾ ನಿರ್ಮೂಲನೆಗೆ ಸಭೆ:

ತಾಲೂಕಿನಲ್ಲಿ ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆ ಆಗಬಾರದು, ಕೊರೋನಾ ವಿರುದ್ಧ ಎಲ್ಲ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ತಮ್ಮ ಕಾರ್ಯಕ್ಷೇತ್ರ ಬಿಟ್ಟು ಬೇರೆಲ್ಲೂ ಹೋಗಬಾರದು ನಿಮಗೆ ಸರ್ಕಾರ ಎಲ್ಲ ರೀತಿಯಲ್ಲಿ ಅನುಕೂಲ ಮಾಡುತ್ತದೆ. ಜನರಿಗೆ ಆಹಾರ, ವಸತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಂದಗಿ ಹಾಗೂ ಆಲಮೇಲದಲ್ಲಿ ಅಧಿಕಾರಿಗಳ ಸಭೆ ನಡೆಸಿ ಶಾಸಕ ಮನಗೂಳಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ

ಭಾವುಕರಾದ ಶಾಸಕರು:

ಜನರು ಸಂಕಷ್ಟಕ್ಕೇ ಸಿಲುಕಿದ್ದಾಗ ಜನಪ್ರತಿನಿಧಿಗಳಾದ ನಾವು ಯಾವುದೇ ಜಾತಿ,ಧರ್ಮ,ಪಂಥ ನೋಡಬಾರದು. ಜನ ಸೇವೆ ಇಲ್ಲಿ ಮುಖ್ಯ ಎಂದು ನಮ್ಮ ನಾಯಕರು ನಮಗೆ ಹೇಳಿದ್ದಾರೆ. ಅವರ ಮಾರ್ಗದಲ್ಲಿಯೇ ನಾನು ಮುಂದುವರಿದಿದ್ದೇನೆ. ಈ ಸಮಯದಲ್ಲಿ ಮನುಷ್ಯನಿಗೆ ಮನುಷತ್ವವೇ ಮುಖ್ಯ, ಯಾವುದೇ ಯೋಚನೆ ಮಾಡದೇ ಜನಸೇವೆ ಮಾಡುತ್ತಿದ್ದೇನೆ. ದೇಶವೇ ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದು, ನಾನು ಅದಕ್ಕೆ ಬದ್ಧನ್ನಾಗಿಯೇ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಿಟ್‌, ಮಾಸ್ಕ ಹಂಚಲು ನನ್ನ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ಅಲ್ಲದೇ ಕೊರೋನಾ ವಿರುದ್ಧ ಹಗಲಿರುಳು ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಧæೖರ್ಯತುಂಬುವ ಕೆಲಸ ಮಾಡುತ್ತೇನೆ. ಆದರೆ ಜನರು ಸರಕಾರದ ಆದೇಶ ಇನ್ನೂ ಪಾಲಿಸಬೇಕು. ಜನರ ಜೀವನ ಮುಖ್ಯ ಎಂದು ಭಾವುಕರಾಗಿ ಕನ್ನಡಪ್ರಭದ ಮುಂದೆ ಕಣ್ಣೀರು ಇಟ್ಟರು.

ರೈತರ ನೋವಿಗೆ ಸ್ಪಂದನೆ

ಕೊರೋನಾ ವೈರಸ್‌ ಹೋರಾಟದ ಮಧ್ಯೆಯೂ ತನ್ನ ಕ್ಷೇತ್ರದ ಜನರಿಗೆ ಕುಡಿಯುವ ನೀರು, ರೈತರ ಜಮೀನಿಗೆ, ಜಾನುವಾರುಗಳಿಗೆ ಬೇಸಿಗೆಯ ಸಮಯದಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ಕೆರೆ ತುಂಬುವ ಕೆಲಸಕ್ಕೆ ಮುಂದಾಗಿರುವ ಶಾಸಕರು ಜಲಸಂಪನ್ಮೂಲ ಸಚಿವರು ಆಲಮಟ್ಟಿಯಲ್ಲಿ ನಡೆಸಿದ ಸಭೆಯಲ್ಲಿ ಒತ್ತಾಯ ಮಾಡಿ ಕಾಲುವೆಗೆ ನೀರು ಬಿಡಿಸಿ, ಸಿಂದಗಿ, ಆಲಮೇಲ, ಬಳಗಾನೂರ ಸೇರಿದಂತೆ ವಿವಿಧ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದಾರೆ. ಅಲ್ಲದೇ ರೈತರು ಬೆಳೆದ ಬೆಳೆಗೆ ಸೂಕ್ತವಾದ ಮಾರುಕಟ್ಟೆಗೆ ಅವಕಾಶ ನೀಡುವಂತೆ ಒತ್ತಾಯ ಮಾಡಿ ರೈತರ ಸಮಸ್ಯೆಗೆ ಸ್ಪಂದಿಸಿದ್ದಾರೆ

ನಮ್ಮ ಶಾಸಕರಿಗೆ ಈಗ ಸುಮಾರು 82 ವರ್ಷ ನಡೆದಿದ್ದರೂ ಕ್ಷೇತ್ರದ ಜನರ ಹಿತಕ್ಕಾಗಿ ಹಗಳಿರಲು ಸುತ್ತಾಡುತ್ತಿದ್ದಾರೆ. ಸರ್ಕಾರದ ಪ್ರತಿಯೊಂದು ಸಭೆಗೆ ಅವರೇ ಖುದ್ದಾಗಿ ಹಾಜರಾಗುತ್ತಾರೆ. ಅಲ್ಲದೇ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ. ಕ್ಷೇತ್ರದಲ್ಲಿ ತಿರುಗಾಡುತ್ತಾ ಜನರ ಸೇವೆ ಮಾಡುತ್ತಾರೆ. ಈ ವಯಸ್ಸಿನಲ್ಲಿ ಇಷ್ಟೊಂದು ಕೆಲಸ ಮಾಡುವ ಹುಮ್ಮಸ್ಸು ನಾವು ಯಾರಲ್ಲಿಯೂ ಕಂಡಿಲ್ಲ ಎಂದು ಕ್ಷೇತ್ರದ ಹಿರಿಯ ರಾಜಕಾರಣಿ ಸಿದ್ದಾರಾಮ ಪಾಟೀಲ ಹೇಳಿದ್ದಾರೆ. 

ನಾವು ಕಂಡ ಜನ ನಾಯಕರಲ್ಲಿ ಇಂತಹ ಹೃದಯವಂತರ ಸಂಖ್ಯೆ ಕಡಿಮೆ. ಇಳಿಯ ವಯಸ್ಸಿನಲ್ಲಿ ಯುವಕರಂತೆ ಕೆಲಸ ಮಾಡುತ್ತಾ ಜನಸೇವೆಗೆ ಬದ್ಧರಾಗಿರುವ ಮನಗೂಳಿ ಅವರು ನಮ್ಮಂತಹ ಸಾವಿರಾರು ಯುವಕರಿಗೆ ಮಾದರಿಯಾಗಿದ್ದಾರೆ. ಮತಕ್ಷೇತ್ರದಲ್ಲಿ ಅಭಿವೃದ್ಧಿಗೆ ತನ್ನದೇಯಾದ ಚಾಪು ಮೂಡಿಸಿದ್ದಾರೆ ಎಂದು ಆಲಮೇಲದ ಮುನ್ನಾ ತಾಂಬೂಳಿ ಅವರು ತಿಳಿಸಿದ್ದಾರೆ.

ಸಿಂದಗಿ ಮತಕ್ಷೇತ್ರದಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆ. ತಾವು ಬೆಳೆದ ಬಾಳೆ, ಕಲ್ಲಂಗಡಿ,ಪಪ್ಪಾಯಿ, ದ್ರಾಕ್ಷಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಮಾರಾಟವಾಗದೇ ನಷ್ಟಅನುಭವಿಸುತ್ತಿದ್ದಾರೆ.ಅಂತಹ ವರಿಗೆ ಸರ್ಕಾರ ಬೆಳೆನಷ್ಟಪರಿಹಾರ ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಕೃಷಿ ಸಚಿವ ಬಿ ಸಿ ಪಾಟೀಲ ಜೊತೆ ಚರ್ಚೆ ಮಾಡಿದ್ದೇನೆ. ಅಲ್ಲದೇ ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಹಾಕುವ ಕೆಲಸ ಮಾಡುತ್ತೇನೆ ಎಂದು  ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಹೇಳಿದ್ದಾರೆ.
 

Follow Us:
Download App:
  • android
  • ios