ಧರಣಿ ವಾಪಸ್‌ಗೆ ಕೈಮುಗಿದ ಸಚಿವ  ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ 13ನೇ ದಿನದ ಧರಣಿ ನಿರತ ಸ್ಥಳಕ್ಕೆ ನಾರಾಯಣಗೌಡ ಭೇಟಿ

ಮಂಡ್ಯ (ನ.20) : ನಮ್ಮ ಸರ್ಕಾರ ರೈತರ ಪರವಾಗಿದೆ. ಯಾರೂ ಆತಂಕ ಪಡಬೇಡಿ. ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥವಾದೊಡನೆಯೇ ಹಾಲಿನ ದರದ ಕುರಿತು ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಆದ ಕಾರಣ ಅಹೋರಾತ್ರಿ ಧರಣಿಯನ್ನು ಕೈಬಿಡುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ರೈತ ಮುಖಂಡರಲ್ಲಿ ಮನವಿ ಮಾಡಿದರು.

Add Asianetnews Kannada as a Preferred SourcegooglePreferred

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಳೆದ 13 ದಿನಗಳಿಂದ ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.

ರೈತರು ಸರ್ಕಾರದ ಮುಂದಿಟ್ಟಿರುವ ಶೇ.100ರಲ್ಲಿ ಶೇ.80 ರಷ್ಟನ್ನದಾರೂ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತೇವೆ, ಅದೇರೀತಿ ಕಬ್ಬಿನ ದರ ನಿಗದಿ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಿಕೊಡುತ್ತೇವೆ ಎಂದರು.

Mandya: ಕೆಂಪೇಗೌಡ್ರ ಹೆಸರು ಅಜರಾಮರ: ಸಚಿವ ನಾರಾಯಣಗೌಡ

ಪ್ರತಿಭಟನೆ ವಾಪಸ್‌ ಪಡೆಯಲು ಮನವಿ:

ಶಿವಮೊಗ್ಗ ಉಸ್ತುವಾರಿ ಸಚಿವನಾಗಿದ್ದರೂ ಸಹ ಮಂಡ್ಯ ನನ್ನ ಜನ್ಮ ಭೂಮಿ ಆಗಿದೆ. ಆ ಋುಣ ತೀರಿಸಲು ಸಾಧ್ಯವಿಲ್ಲ, ರೈತರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ದಯಮಾಡಿ ಪ್ರತಿಭಟನೆ ವಾಪಸ್‌ ಪಡೆಯಬೇಕು. ಈಗಾಗಲೇ ಕಟಾವು ಬಂದಿರುವ ಬೆಳೆಯ ಕೆಲಸ ಇರುವುದರಿಂದ ವಾಪಸ್‌ ಪಡೆದುಕೊಳ್ಳಿ, ತಕ್ಷಣವೇ ಮುಖ್ಯಮಂತ್ರಿ ಹತ್ತಿರ ಕರೆದುಕೊಂಡು ಹೋಗಲಾಗುವುದು ಎಂದರು.

ಶೀಘ್ರದಲ್ಲೇ ಸಿಹಿ ಸುದ್ದಿ:

ರೈತರು ಇಷ್ಟುದಿನಗಳ ಕಾಲ ಪ್ರತಿಭಟನೆ ಮಾಡಿರುವುದಕ್ಕೆ ಮೊದಲು ಕ್ಷಮೆ ಕೇಳುತ್ತೇನೆ. ನ.20ರಂದು ಬಳ್ಳಾರಿಯಲ್ಲಿ ಮುಖ್ಯಮಂತ್ರಿಗಳು ಸಿಗುತ್ತಾರೆ, ಅಲ್ಲಿ ಶೀಘ್ರವಾಗಿಯೇ ಇತ್ಯರ್ಥಗೊಳಿಸುವಂತೆ ಒಂದು ಸಭೆಯ ದಿನಾಂಕವನ್ನು ತಿಳಿಸುತ್ತೇನೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಲಾಗುವುದು ಹಾಗಾಗಿ ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ, ಜೊತೆಗೆ ಸಿಹಿ ಸುದ್ದಿ ನೀಡಲು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದರು.

ಕೋಟಿ ಕಂಠ ಗಾಯನ ಕನ್ನಡಿಗರ ಹೆಮ್ಮೆ - ಸಚಿವ ಡಾ.ನಾರಾಯಣಗೌಡ

ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌, ಮುಖಂಡರಾದ ಚಂದಗಾಲು ಶಿವಣ್ಣ, ನಾಗೇಶ್‌, ಸ್ವಾಮಿ, ವಸಂತ್‌ಕುಮಾರ್‌, ಕೆ.ಆರ್‌.ಪೇಟೆ ಜಯರಾಂ, ಪುಟ್ಟೇಗೌಡ, ಗೂಳೂರು ರಾಮಕೃಷ್ಣ, ಲಕ್ಷ್ಮಣ್‌ ಚನ್ನಸಂದ್ರ, ಶಿವಳ್ಳಿ ಚಂದ್ರು, ಸೌಭಾಗ್ಯಮ್ಮ, ಲಕ್ಷ್ಮೀ, ವರಲಕ್ಷ್ಮಿ, ಜಗದೀಶ್‌ ಭಾಗವಹಿಸಿದ್ದರು.