Asianet Suvarna News Asianet Suvarna News

ಕೋಟಿ ಕಂಠ ಗಾಯನ ಕನ್ನಡಿಗರ ಹೆಮ್ಮೆ - ಸಚಿವ ಡಾ.ನಾರಾಯಣಗೌಡ

  • ಕೋಟಿ ಕಂಠ ಗಾಯನ ಕನ್ನಡಿಗರ ಹೆಮ್ಮೆ
  • ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಹೇಳಿಕೆ
  • ಕನ್ನಡ ಗೀತೆಗಳ ಗಾಯನಕ್ಕೆ ಒಟ್ಟು 3.33ಲಕ್ಷ ಜನರಿಂದ ನೋಂದಣಿ
koti kanta gayana proud of kannadigas says narayanagowda at shivamogga rav
Author
First Published Oct 29, 2022, 10:17 AM IST

ಶಿವಮೊಗ್ಗ (ಅ.29) : ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮದಲ್ಲಿ ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಕನ್ನಡ ಗೀತೆಗಳ ಗಾಯನಕ್ಕೆ ದನಿಗೂಡಿಸಿದರು.

ಕೋಟಿ ಕಂಠ ಗಾಯನಕ್ಕೆ ನಾಳೆ ಚಾಲನೆ: 1 ಕೋಟಿ ಮಂದಿ ನೋಂದಣಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ನಗರದ ವಿವಿಧ ಕನ್ನಡ ಸಂಘಟನೆಗಳು, ಅಧಿಕಾರಿಗಳು, ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕನ್ನಡದ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಿದರು. ಜಿಲ್ಲೆಯಲ್ಲಿ ಕೋಟಿ ಕಂಠ ಗಾಯನಕ್ಕಾಗಿ ಒಟ್ಟು 3.33 ಲಕ್ಷ ಜನರು ಆನ್‌ಲೈನ್‌ನಲ್ಲಿ ನೋಂದಾಯಿಸಿದ್ದರು.

ಸಂತಸದ ವಿಚಾರ:

ಗಾಯನ ಕಾರ್ಯಕ್ರಮ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗಿಯಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ. ಎರಡನೇ ಬಾರಿ ಈ ಕಾರ್ಯಕ್ರಮ ಆಯೋಜಿಸಿದ್ದು, ಕನ್ನಡಿಗರಿಗೆ ಇದೊಂದು ಹೆಮ್ಮೆ ಈ ಕಾರ್ಯಕ್ರಮ ಕರ್ನಾಟಕದಲ್ಲಿ ಮಾತ್ರವಲ್ಲ ಬೇರೆಡೆಗಳಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ, ಕಾರ್ಯಕ್ರಮ ಆಯೋಜಿಸಿದ ಮುಖ್ಯಮಂತ್ರಿಗಳು ಮತ್ತು ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.

ಕನ್ನಡದ ಜಾಗೃತಿ:

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಕನ್ನಡದ ಬಗೆಗಿನ ನಮ್ಮ ಅಭಿಮಾನ ಇಡೀ ಪ್ರಪಂಚಕ್ಕೆ ಈ ಕಾರ್ಯಕ್ರಮದ ಮೂಲಕ ಗೊತ್ತಾಗಿದೆ. ಕನ್ನಡ ನಮ್ಮ ಮೊದಲ ಆದ್ಯತೆಯಾಗಿದ್ದು, ಕನ್ನಡದ ಹಾಡುಗಳನ್ನು ಸಾಮೂಹಿಕವಾಗಿ ಹೇಳುವ ಮೂಲಕ ಒಂದಾಗಿದ್ದೇವೆ ಎಂಬ ಸಂದೇಶವನ್ನು ನೀಡಿದ್ದೇವೆ. ಈ ಕಾರ್ಯಕ್ರಮದ ಮೂಲಕ ಎಲ್ಲರಲ್ಲಿ ಕನ್ನಡದ ಜಾಗೃತಿ ಮೂಡಿಸಿದ್ದೇವೆ. ಇಂತಹ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಕೋಟಿ ಕಂಠಗಳ ನಿನಾದ ಮುಗಿಲೆತ್ತರಕ್ಕೇರುತ್ತಿದೆ. ಎರಡು ಜ್ಞಾನಪೀಠ ಪ್ರಶಸ್ತಿ ಪಡೆದ ಏಕಮಾತ್ರ ಜಿಲ್ಲೆ ನಮ್ಮದಾಗಿದ್ದು, ಇಬ್ಬರು ರಾಷ್ಟ್ರಕವಿಗಳನ್ನು ಹೊಂದಿರುವ, ಎಲ್ಲ ರೀತಿಯ ಪ್ರಾಕೃತಿಕ ಸೊಬಗು ಮತ್ತು ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಹುಟ್ಟಿದ ಜಿಲ್ಲೆಯ ಸ್ವರ ವಿಶೇಷವಾಗಿದೆ. ಕಾರ್ಯಕ್ರಮ ಅವಕಾಶ ಮಾಡಿಕೊಟ್ಟರಾಜ್ಯ ಸರ್ಕಾರಕ್ಕೆ ಹಾಗೂ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಕಲ್ಪ ವಿಧಿ ಬೋಧಿಸಲಾಯಿತು. ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಶಿವಮೊಗ್ಗದ ಅರುಣ್‌ ಮತ್ತು ತಂಡ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌, ಜಿಲ್ಲಾ ಪಂಚಾಯತ್‌ ಸಿಇಒ ಎನ್‌.ಡಿ.ಪ್ರಕಾಶ್‌, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್‌ ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

ಕರ್ನಾಟಕದ ಎಲ್ಲ ಶಾಲೆಗಳಲ್ಲಿ 28ಕ್ಕೆ ‘ಕೋಟಿ ಕಂಠ ಗಾಯನ’

ಜಿಲ್ಲೆಯ ವಿವಿಧೆಡೆ ಕೋಟಿ ಕಂಠ ಗಾಯನ:

ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಜೊತೆಗೆ, ಜೋಗ ಜಲಪಾತ ಎದುರು, ಜೋಗ, ಭದ್ರಾವತಿಯ ನರಸಿಂಹಸ್ವಾಮಿ ದೇವಸ್ಥಾನ ಎದುರು, ಹೊಸನಗರ ತಾಲೂಕಿನ ನಗರ ಬಿದನೂರು ಕೋಟೆ ಎದುರು, ತೀರ್ಥಹಳ್ಳಿಯ ಕುಪ್ಪಳ್ಳಿಯ ಕುವೆಂಪು ಮನೆ, ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ…, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ಸೇರಿದಂತೆ ದೇಶೀಯ ವಿದ್ಯಾಶಾಲೆ, ಪೆಸಿಚ್‌, ಜವಾಹರಲಾಲ್‌ ನೆಹರು ತಾಂತ್ರಿಕ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಇತರೆ ವಿದ್ಯಾಲಯಗಳಲ್ಲಿಯೂ ಕೋಟಿ ಕಂಠ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Follow Us:
Download App:
  • android
  • ios