ತಾಲೂಕಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಶಾಸಕ ಜಿ.ಟಿ. ದೇವೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಕೆ. ಹೆಮ್ಮನಹಳ್ಳಿ- ಮಾಣಿಕ್ಯಪುರ ರಸ್ತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮೈಸೂರು (ಸೆ.07): ತಾಲೂಕಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಶಾಸಕ ಜಿ.ಟಿ. ದೇವೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಕೆ. ಹೆಮ್ಮನಹಳ್ಳಿ- ಮಾಣಿಕ್ಯಪುರ ರಸ್ತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆ ಪಕ್ಕದಲ್ಲಿರುವ ಪುಟ್ಟಸ್ವಾಮಿಯವರ ಮನೆಗೆ ನೀರು ತುಂಬಿ, ಅಪಾರ ನಷ್ಟವಾಗಿದೆ. ಕೆ. ಹೆಮ್ಮನಹಳ್ಳಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಕೆಲವೊಂದು ಬಡಾವಣೆಗಳು ನಿರ್ಮಾಣಗೊಂಡಿದ್ದು, ಆ ಬಡಾವಣೆಗಳು ಪೂರ್ಣಯ್ಯ ನಾಲೆಗಳನ್ನು ಒತ್ತುವರಿ ಮಾಡಿರುವುದಾಗಿ ಸಾರ್ವಜನಿಕರು ಶಾಸಕರಿಗೆ ದೂರಿದರು. 

ಪುಟ್ಟಸ್ವಾಮಿಯವರು ಸಾಕಿದ್ದ ಸುಮಾರು 1000 ನಾಟಿ ಕೋಳಿಯಲ್ಲಿ 800 ನಾಟಿ ಕೋಳಿಗಳು ಮಳೆಯಿಂದಾಗಿ ಸಾವಿಗಿಡಾಗಿವೆ. ಸರ್ಕಾರ ವತಿಯಿಂದ ಸೂಕ್ತ ಪರಿಹಾರವನ್ನು ನೀಡುವ ಬಗ್ಗೆ ಶಾಸಕರು ಭರವಸೆ ನೀಡಿದರು. ನಂತರ ಕೆ. ಹೆಮ್ಮನಹಳ್ಳಿ ಗ್ರಾಮದ ಚಿಕ್ಕೆರೆ ಹಿಂಭಾಗದಲ್ಲಿರುವ ಗಂಗಾಧರ್‌ ಅವರ ಕೋಳಿ ಫಾರಂನಲ್ಲಿ ಸಾಕಿದ 4000 ಕೋಳಿಗಳು ಮಳೆಯ ನೀರು ನುಗ್ಗಿ ಸಾವಿಗೀಡಾಗಿರುವುದನ್ನು ಶಾಸಕರು ಪರಿಶೀಲಿಸಿದರು. 

ಕರ್ನಾಟಕದಲ್ಲಿ ಹೊಸದಾಗಿ ಸೈಬರ್‌ ಪಾಲಿಸಿ ಜಾರಿಗೆ ಸಿದ್ಧತೆ: ಸಿಎಂ ಬೊಮ್ಮಾಯಿ

ಸಾಹುಕಾರಹುಂಡಿ ಕೆರೆಯಿಂದ ಪೂರ್ಣಯ್ಯ ನಾಲೆ ಒತ್ತುವರಿಯಾಗಿದ್ದು, ನಾಲೆ ನೀರು ಜಮೀನುಗಳಿಗೆ ನುಗ್ಗಿ ರೈತರು ಬೆಳೆದ ಅಪಾರ ಬೆಳೆ ನಷ್ಟವಾಗಿರುವುದನ್ನು ಶಾಸಕರು ಪರಿಶೀಲಿಸಿದರು. ನಂತರ ಮೂಗನಹುಂಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಮೂಗನಹುಂಡಿ ಕೆರೆ ತುಂಬಿ ಕೋಡಿ ಬಿದ್ದು ಕೋಡಿ ನೀರು ಮೂಗನಹುಂಡಿ ಮತ್ತು ತಿಬ್ಬಯ್ಯನಹುಂಡಿ ರಸ್ತೆಯು ಕೊಚ್ಚಿಕೊಂಡು ಹೋಗಿ ಅಪಾರವಾದ ಬೆಳೆ ನಷ್ಟವಾಗಿರುವುದನ್ನು ಪರಿಶೀಲಿಸಿದರು. 

ಸಣ್ಣ ನೀರಾವರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೃತ್ಯುಂಜಯ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಬೊಮ್ಮೇನಹಳ್ಳಿ ಕೆರೆ, ಹುಯಿಲಾಳು ಕೆರೆ, ಜಟ್ಟಿಹುಂಡಿ ಕೆರೆ, ಚಿಕ್ಕೆಕೆರೆ, ಸಾಹುಕಾರಹುಂಡಿ ಕೆರೆಗಳು ತುಂಬಿ ಕೋಡಿ ಬಿದ್ದು, ನೀರು ನಾಲೆಯಲ್ಲಿ ಹರಿಯಲು ಆಗದೆ ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ರಸ್ತೆಗಳು ಕೊಚ್ಚಿಕೊಂಡು ಹೊಗಿವೆ. ಹೀಗಾಗಿ, ಕೂಡಲೇ ತಮ್ಮ ಇಲಾಖೆಯಿಂದ ಒಂದು ತಂಡವನ್ನು ರಚಿಸಿ, ನಾಲೆಗಳ ಹೂಳು ತೆಗೆಯುವ ಬಗ್ಗೆ ಹಾಗೂ ತೂಬುಗಳ ರಿಪೇರಿ, ಸೇತುವೆಗಳ ನಿರ್ಮಾಣ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿದರು.

5 ಲಕ್ಷದ ಚೆಕ್‌ ವಿತರಣೆ: ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಕೊಚ್ಚಿ ಕೊಂಡು ಹೋಗಿ ಸಾವೀಗಿಡಾಗಿದ್ದ ಮಾವಿನಹಳ್ಳಿಯ ಮಹೇಶ್‌ ಅವರ ಪತ್ನಿ ರಾಜಮ್ಮನವರ ಮಾವಿನಹಳ್ಳಿ ಮನೆಗೆ ತೆರಳಿದ ಶಾಸಕ ಜಿ.ಟಿ. ದೇವೇಗೌಡ ಅವರು, ಸರ್ಕಾರದ ವತಿಯಿಂದ .5 ಲಕ್ಷ ದ ಪರಿಹಾರದ ಚೆಕ್‌ ವಿತರಿಸಿದರು. ತಾಪಂ ಇಒ ಗಿರೀಶ್‌, ಎಇಇ ಮಮತಾ, ಉಪ ತಹಸೀಲ್ದಾರ್‌ಗಳಾದ ಕುಬೇರ್‌, ಮಂಜುನಾಥ, ರಾಜಸ್ವ ನಿರೀಕ್ಷಕರಾದ ಶಿವಕುಮಾರ್‌, ಲೋಹಿತ್‌ ಮೊದಲಾದವರು ಇದ್ದರು.

ಬಿಜೆಪಿಯವರು ಜೆಡಿಎಸ್‌ಗೆ ಒಳ್ಳೆ ಮಕ್ಮಲ್ ಟೋಪಿ ಹಾಕಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ನಾಗವಾಲ ಕೆರೆಗೆ ಶಾಸಕ ಜಿಟಿಡಿ ಬಾಗಿನ: ತಾಲೂಕಿನ ನಾಗವಾಲ ಕೆರೆಯು ಸುಮಾರು 40 ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿದ್ದು, ಈ ಕೆರೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಬಾಗಿನ ಅರ್ಪಿಸಿದರು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ನರೇಂದ್ರ ಹಾಗೂ ಸದಸ್ಯರು, ಮುಖಂಡರಾದ ಬೊಮ್ಮೇನಹಳ್ಳಿ ಕುಮಾರ್‌, ಪಿಡಿಒ ಶೋಭರಾಣಿ ಮೊದಲಾದವರು ಇದ್ದರು.