ಗ್ರಾಮೀಣ ಭಾಗದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹಾರಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ಭರವಸೆ ನೀಡಿದರು.

ಮಲ್ಕುಂಡಿ: ಗ್ರಾಮೀಣ ಭಾಗದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹಾರಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ಭರವಸೆ ನೀಡಿದರು.

Add Asianetnews Kannada as a Preferred SourcegooglePreferred

ಸಮೀಪದ ದೇವರಾಯಶೆಟ್ಟಿಪುರ ಗ್ರಾಪಂ ವ್ಯಾಪ್ತಿಯ ದೇವರಾಯ ಶೆಟ್ಟಿಪುರ, ಕೊತ್ತನಹಳ್ಳಿ, ಇಂದಿರಾ ನಗರ, ಹೊಸವೀಡು, ಹೊಸವೀಡು ಹುಂಡಿ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ ಮಾತನಾಡಿದ ಅವರು, ನನ್ನ ತಂದೆ ದಿ.ಆರ್. ಧ್ರುವನಾರಾಯಣ್ ಅವರ ಅವಧಿಯಲ್ಲಿ ಈ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಿದ್ದಾರೆ. ನಾನು ಕೂಡ ಅವರ ಹಾದಿಯಲ್ಲೇ ಸಾಗಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೆನೆ. ಗ್ರಾಮೀಣ ಭಾಗದಲ್ಲಿ ಹಾಗಬೇಕಾದ ಕಾಮಗಾರಿಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವುದಾಗಿ ಅವರು ಹೇಳಿದರು.

ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಹುಲಿ, ಆನೆ, ಚಿರತೆಗಳು ರೈತರು, ಸಾಕು ಪ್ರಾಣಿಗಳು ಹಾಗೂ ರೈತ ಮಹಿಳೆರನ್ನು ಬಲಿ ತೆಗೆದುಕೊಂಡಿವೆ. ಈ ಬಗ್ಗೆ ಸಚಿವರ ಜೊತೆ ಚರ್ಚಿಸಲಾಗಿದೆ. ಈ ಭಾಗದಲ್ಲೇ ಒಂದು ಸಭೆ ಮಾಡಿ ಸೂಕ್ತ ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.

ಗ್ರಾಮಸ್ಥರು ವಿವಿಧ ಸಮಸ್ಯೆಗಳ ಕುರಿತು ಶಾಸಕರ ಬಳಿ ಅಹವಾಲು ಸಲ್ಲಿಸಿದರು. ರೈತರ ಜಮೀನಿನ ಸಾಗುವಳಿ ಪತ್ರ ವಿತರಣೆ, ಶಾಲೆ ಕೊಠಡಿಗಳ ನಿರ್ಮಾಣ, ಸಿ ಸಿ ರಸ್ತೆ, ಗ್ರಾಮಗಳಿಗೆ ಬಸ್ಸಿನ ಸೌಲಭ್ಯ, ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ರೈಲ್ವೆ ಕಂಬಿ ಮುಂತಾದ ಬೇಡಿಕೆಯನ್ನು ಶಾಸಕರ ಮುಂದಿಟ್ಟರು.

ಬಳಿಕ ಶಾಸಕರು ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಂದ ಪರಿಹಾರ ಸೂಚಿಸಿ, ಕೆಲವು ಸಮಸ್ಯೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಪರಿಹರಿಸಲು ಸೂಚಿಸಿದರು.

ಇತ್ತೀಚಿನ ದಿನದಲ್ಲಿ ನಡೆದ ಅಂಧಕಾಸುರ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಪೋಲಿಸ್ ಅಧಿಕಾರಿಗಳ ಜೊತೆ ಮಾತನಾಡಿ ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು ಎಂದು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅದು ಸರಿಯಲ್ಲ ನನ್ನ ಕ್ಷೇತ್ರ ನಂಜನಗೂಡು ಶಾಂತಿಗೂಡಾಗಿದೆ. ನಾನು ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಗ್ರಾಪಂ ಅಧ್ಯಕ್ಷೆ ಶಿಲ್ಪಾ ಸುರೇಶ್, ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷ ಶ್ರೀಕಂಠನಾಯಕ, ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ ನಾಯಕ, ಉಪಾಧ್ಯಕ್ಷ ಬಿ.ಟಿ. ಕುಮಾರ್, ಎಸ್ಸಿ ಮೂರ್ಚಾ ಜಿಲ್ಲಾ ಉಪಾಧ್ಯಕ್ಷ ಮಹದೇವು, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಜಯರಾಂ, ಬಸವಣ್ಣ ಮೊದಲಾದ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.