800 ವರ್ಷ ಇತಿಹಾಸ ಪ್ರಸಿದ್ಧ ಬೇಲೂರಿನ ದೇವಾಲಯದ ಕಾಳಿ ವಿಗ್ರಹ ಭಗ್ನ
ಬೆಲೂರಲ್ಲಿ ರಾತ್ರಿ ದೇಗುಲದ ಮುಖ್ಯದ್ವಾರ ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು, ಪುರಾತನ ಕಾಳಿಯ ಮೂರ್ತಿಯನ್ನು ಅರ್ಧಭಾಗಕ್ಕೆ ತುಂಡರಸಿ ಹಾನಿ ಮಾಡಿದ್ದಾರೆ.
ಬೇಲೂರು (ನ.21): ಹಾಸನ ಜಿಲ್ಲೆ ಬೇಲೂರು ತಾಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಮಹಾಲಕ್ಷ್ಮೀ ದೇವಾಲಯದ ಕಾಳಿ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ದೇವಿಗೆ ಪ್ರತಿದಿನ ಪೂಜೆ ಸಲ್ಲುತ್ತಿದ್ದು, ನಿತ್ಯ ಕೈಂಕರ್ಯಗಳು ಮುಗಿದ ಬಳಿಕ ಅರ್ಚಕರು ತೆರಳುತ್ತಿದ್ದರು. ಗುರುವಾರ ರಾತ್ರಿ ದೇಗುಲದ ಮುಖ್ಯದ್ವಾರ ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು, ಪುರಾತನ ಕಾಳಿಯ ಮೂರ್ತಿಯನ್ನು ಅರ್ಧಭಾಗಕ್ಕೆ ತುಂಡರಸಿ ಹಾನಿ ಮಾಡಿದ್ದಾರೆ.
ಹಾಸನಾಂಬೆ ಹುಂಡಿಯಲ್ಲಿ ಈ ಬಾರಿ ಸಂಗ್ರಹವಾದ ಹಣವೆಷ್ಟು..? ಆದಾಯದಲ್ಲಿ ಭಾರಿ ಕುಸಿತ ..
ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದು ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಈ ದೇವಾಲಯ ಚತುಷ್ಕುಟ(ನಾಲ್ಕು ಗರ್ಭಗೃಹ) ಆಲಯವಾಗಿದ್ದು, ಕಾಳಿ, ವಿಷ್ಣು ಹಾಗೂ ಶಿವಲಿಂಗವನ್ನೂ ಒಳಗೊಂಡಿದೆ. ರಾಷ್ಟ್ರೀಯ ಸ್ಮಾರಕವೂ ಆಗಿರುವ ಈ ದೇವಾಲಯದಲ್ಲಿ ರಾತ್ರಿಪಾಳಿಯ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದಿರುವುದೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.