ಮಧುಗಿರಿ :  ಚನ್ನಮಲ್ಲೇನಹಳ್ಳಿ ಮತ್ತು ಚಂದ್ರಗಿರಿ ಗುಟ್ಟೆ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ. ಹಾಗಾಗಿ, ಕೂಡಲೇ ಕಲ್ಲು ಗಣಿಗಾರಿಕೆ ಮುಚ್ಚಿಸುವಂತೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಹಸೀಲ್ದಾರ್‌ ಸಿಗ್ಬತ್‌ವುಲ್ಲಾ ಅವರಿಗೆ ಸೂಚಿಸಿದರು.

ತಾ.ಪಂ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾ.ಪಂ ಪಿಡಿಒ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಜನತೆಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಚರಂಡಿಗಳ ಸ್ವಚ್ಚತೆ, ನರೇಗಾ ಯೋಜನೆ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ವಾಟರ್‌ ಮ್ಯಾನ್‌ಗಳು ಸಕಾಲಕ್ಕೆ ನೀರು ಬಿಡಬೇಕು. ಆಯಾಯ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ, ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದರು.

ಪಂಚಾಯಿತಿ ವ್ಯಾಪ್ತಿಯ ಜನತೆಗೆ ಅಗತ್ಯ ಕೆಲಸಗಳ ಬಗ್ಗೆ ಅಂದಾಜು ಪಟ್ಟಿ ತಯಾರಿಸುವಂತೆ ಪಿಡಿಒಗಳಿಗೆ ಸೂಚಿಸಿ, ಬಡವರನ್ನು ಹೊರತುಪಡಿಸಿ ಉಳ್ಳವರಿಂದ ಕಡ್ಡಾಯವಾಗಿ ಕಂದಾಯ ವಸೂಲಿ ಮಾಡಿ ಎಂದರು.

ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ಬುಧವಾರ ಕೇಂದ್ರ ಸ್ಥಾನದಲ್ಲಿರಬೇಕು. ಗ್ರಾಮಗಳಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳು, ತಮ್ಮ ಕಚೇರಿ ಮೇಲಿನ ಮೇಲ್ಚಾವಣಿಗಳನ್ನು ಸ್ವಚ್ಚಗೊಳಿಸಿ, ಗ್ರಾ.ಪಂ.ನವರು ಹಳ್ಳಿಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಸೂರಿಲ್ಲದ ಕಡು ಬಡವರಿಗೆ ನಿವೇಶನ ಹಂಚಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ತಿಳಿಸಿದರು.

ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಕಚೇರಿಗಳಿಗೆ ವಾರ ಪತ್ರಿಕೆ, ಮಾಸ ಪತ್ರಿಕೆ, ಯೂ ಟ್ಯೂಬ್‌ ಚಾನಲ್‌ ಹೆಸರೇಳಿಕೊಂಡು ಕೆಲವು ನಕಲಿ ಪತ್ರರ್ಕತರು ಸುಖ ಸುಮ್ಮನೆ ಕೆಲಸ ಮಾಡುವ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ. ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಹೆದರಿಸುವ ಮೂಲಕ ಕೆಲಸ ಕಾರ್ಯಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ನಾನು ಅಕ್ಷರ ಸಹ ಸಹಿಸಲ್ಲ, ಇಂತಹ ನಕಲಿ ಪತ್ರರ್ಕತರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವಂತೆ ಡಿವೈಎಸ್‌ಪಿಗೆ ಸಚಿವ ಕೆ.ಎನ್‌.ರಾಜಣ್ಣ ಸೂಚಿಸಿದರು.

ನಿಲ್ಲದ ಅಕ್ರಮ ಗಣಿಗಾರಿಕೆ

ಚಿತ್ರದುರ್ಗ(ಸೆ.19):  ಆ ಭಾಗದ ಜನರು ಕಷ್ಟಪಟ್ಟು ಮನೆಗಳನ್ನ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸ್ತಿದ್ದಾರೆ. ಆದ್ರೆ ರಾತ್ರೋರಾತ್ರಿ ಸುತ್ತಮುತ್ತಲಿರೋ ಕ್ರಷರ್‌ಗಳು ಮಾಡ್ತಿರೋ ಹಾವಳಿಗೆ ನಿದ್ದೆಗೆಟ್ಟು ಭಯದಲ್ಲಿ ವಾಸ ಮಾಡ್ತಿದ್ದಾರೆ. ಅಷ್ಟಕ್ಕೂ ಆ ಗ್ರಾಮ ಯಾವುದು ಅಲ್ಲಾಗ್ತಿರೋ ಸಮಸ್ಯೆ ಆದ್ರು ಏನು ಎನ್ನುವುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ....

ಹೀಗೆ ಬಾನೆತ್ತರಕ್ಕೆ ನಿಂತಿರೋ ದೈತ್ಯಾಕಾರದ ಗುಡ್ಡವನ್ನು ಬಿಡದೇ ಮಹಾಶೂರರು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಬ್ಲಾಸ್ಟ್ ಮಾಡಿರೋ ಸದ್ದಿಗೆ ಮನೆಗಳು ಬಿರುಕು ಬಿಟ್ಟಿವೆ. ಇದು ಕಲ್ಲಿನಕೋಟೆ ಚಿತ್ರದುರ್ಗದ ಕೂದಲೆಳೆ ಅಂತರದಲ್ಲಿರೋ ಸಿಬಾರ ಗ್ರಾಮದ ಬಳಿ.

ಬರಗಾಲ ಒಂದೆಡೆ; ನಕಲಿ ಈರುಳ್ಳಿ ಬೀಜ ಇನ್ನೊಂದೆಡೆ ಕೋಟೆನಾಡು ರೈತರು ಕಂಗಾಲು!

ಹೌದು, ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಕಲ್ಲಿನ‌ ಕ್ವಾರಿಗಳಲ್ಲಿ ಬ್ಲಾಸ್ಟ್ ಮಾಡುವ ಸಂದರ್ಭದಲ್ಲಿ ಅನೇಕ ಕಾರ್ಮಿಕರು ಮೃತ ಪಟ್ಟಿರೋ ಘಟನೆಗಳು ನಮ್ಮ ಕಣ್ಮುಂದಿದೆ. ಆದ್ರೂ ಚಿತ್ರದುರ್ಗ ಜಿಲ್ಲೆಯ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲೇ ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ರು ಅಧಿಕಾರಿಗಳು ಮಾತ್ರ ಕುರುಡು ಪ್ರದರ್ಶನ ಮಾಡ್ತಿದ್ದಾರೆ. ನಿತ್ಯ ರಾತ್ರಿ ವೇಳೆ ಬ್ಲಾಸ್ಟ್ ಮಾಡೋದ್ರಿಂದ ಚಿಕ್ಕ ಮಕ್ಕಳು ಮಲಗಿದ್ದವರು ಭಯ ಪಡ್ತಿದ್ದಾರೆ. ಅಲ್ಲದೇ ಕಷ್ಟಪಟ್ಟು ದುಡಿದು ಕಟ್ಟಿರೋ ಮನೆಗಳು ಅಲ್ಲಲ್ಲಿ ಬಿರುಕು ಬಿಡ್ತಿದ್ದಾವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಏನೂ ಪ್ರಯೋಜನ ಆಗ್ತಿಲ್ಲ ಎಂದ ಸ್ಥಳೀಯರಾದ ಕಾಂತಪ್ಪ ಅವರು ಬೇಸರ ವ್ಯಕ್ತಪಡಿಸಿದರು. 

ಇನ್ನೂ ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಮೇಲಾಗಿ ಅನಧಿಕೃತವಾಗಿ ಕ್ರಷರ್ ನಡೆಸ್ತಿರೋರು ರಾತ್ರಿ ವೇಳೆಯೇ ಬ್ಲಾಸ್ಟಿಂಗ್ ಮಾಡೋದ್ರಿಂದ ನಿತ್ಯ ಜನರ ಗೋಳಾಟ ಯಾರೂ ಕೇಳತೀರದಂತಾಗಿದೆ. ಹೀಗೆ ಮುಂದುವರೆದ್ರೆ ನಿಸರ್ಗ ಸಂಪತ್ತು ಬೆಳೆಸೋರು ಯಾರು? ಗುಡ್ಡ ಬೆಟ್ಟಗಳಿಂದಲೇ ನಮ್ಮ ಜಿಲ್ಲೆ ಹೆಸರುವಾಸಿಯಾಗಿದೆ. ಆದ್ರೆ ಕೆಲವರು ಅವರ ವೈಯಕ್ತಿಕ ಬ್ಯುಸಿನೆಸ್ ಗಾಗಿ ಈ ರೀತಿ ಸ್ಥಳೀಯರಿಗೆ ತೊಂದರೆ ಕೊಡ್ತಿರೋದು ನೋವಿನ ಸಂಗತಿ ಅಂತಾರೆ ಪರಿಸರ ಪ್ರೇಮಿ ಮಂಜುಳಾ. 

ಒಟ್ಟಾರೆಯಾಗಿ ಬೇರೆ ಜಿಲ್ಲೆಗಳಲ್ಲಿ ಆನಾಹುತ ಆದ ಮೇಲೆ ಜಿಲ್ಲೆಯ ಅಧಿಕಾರಿಗಳು ಸುಮ್ಮನೆ ಕುಳಿತಿರೋದು ಖಂಡನೀಯ. ಕೂಡಲೇ ಪರಿಶೀಲಿಸಿ ಅನಧಿಕೃತ ಕ್ರಷರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ. ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮನೆಗಳಲ್ಲಿ ಆಗಿರೋ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಲಿ ಎಂಬುದು ಎಲ್ಲರ ಬಯಕೆ.