ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ  ಉಪ ನಗರವಾಗಿ ಅಭಿವೃದ್ಧಿ ಪಡಿಸುವ ದಿಕ್ಕಿನಲ್ಲಿ ಚಿಂತನೆ ಸಬ್‌ಅರ್ಬನ್‌ ಹಾಗೂ ಮೆಟ್ರೋ ರೈಲು ಸಂಪರ್ಕ ವಿಸ್ತರಣೆ

ಚಿಕ್ಕಬಳ್ಳಾಪುರ (ಜೂ.28): ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರವನ್ನು ಉಪ ನಗರವಾಗಿ ಅಭಿವೃದ್ಧಿ ಪಡಿಸುವ ದಿಕ್ಕಿನಲ್ಲಿ ತಮ್ಮ ಚಿಂತನೆ ಇದ್ದು, ದೇವನಹಳ್ಳಿವರೆಗೂ ಬರಲಿರುವ ಸಬ್‌ಅರ್ಬನ್‌ ಹಾಗೂ ಮೆಟ್ರೋ ರೈಲು ಸಂಪರ್ಕವನ್ನು ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸಲು ಎಲ್ಲ ಪ್ರಯತ್ನ ಮಾಡಲಾಗುವುದೆಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದರು.

Add Asianetnews Kannada as a Preferred SourcegooglePreferred

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ಒಕ್ಕಲಿಗರ ಸಂಘದ ಸಯೋಗದೊಂದಿಗೆ ಭಾನುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ದಿನಾಚರಣೆಯಲ್ಲಿ ಮಾತನಾಡಿ, ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.

ತಮ್ಮ ಕ್ಷೇತ್ರದಲ್ಲಿ ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸುಧಾಕರ್ .

ಕ್ಷೇತ್ರದಲ್ಲಿ ದುಡಿಯುವ ಜನತೆಗೆ ಉದ್ಯೋಗ ಕಲ್ಪಿಸಬೇಕಿದೆ. ಅದಕ್ಕಾಗಿ ವಿಶೇಷ ಕೈಗಾರಿಕೆಗಳನ್ನು ಜಿಲ್ಲೆಗೆ ತರುವ ಪ್ರಯತ್ನ ನಡೆದಿದೆ. ಸದ್ಯದಲೇ ಕೆಲ ಕೈಗಾರಿಕೆಗಳು ಬರಲಿವೆ. ಜಿಲ್ಲೆಯ ಜನರ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ, ಆರೋಗ್ಯ, ಕೈಗಾರಿಕೆ ಹಾಗೂ ನೀರಾವರಿ ಕ್ಷೇತ್ರಗಳಿಗೆ ಒತ್ತು ಕೊಡಬೇಕಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ನಾಡಪ್ರಭು ಕೆಂಪೇಗೌಡರು ಜಾತಿ, ಯಾವುದೇ ಸಮಾಜ, ಮತಭೇದ ಮಾಡದೆ ಲೋಕಕಲ್ಯಾಣಕ್ಕಾಗಿ ಒಬ್ಬ ರಾಜನಾಗಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಚಿಂತನೆಯನ್ನು ಹೊಂದಿ ಕೆಲಸ ಮಾಡಿದವರು, ಎಲ್ಲರಿಗೂ ಉಪಯೋಗವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಹಲವು ಕೆರೆಗಳನ್ನು ನಿರ್ಮಿಸಿದ್ದಾರೆ ಎಂದರು.

ಚಿಕ್ಕ ಹಳ್ಳಿಯಾಗಿದ್ದ ಬೆಂದಕಾಳೂರನ್ನು ಒಂದು ಚೊಕ್ಕಟವಾದ, ಸುಂದರವಾದ ನಗರವನ್ನಾಗಿ ಬೆಂಗಳೂರನ್ನು ಸುಸಜ್ಜಿತ ವೈಜ್ಞಾನಿಕ ನಗರವನ್ನಾಗಿ ಬೆಳೆಸಿದ ಕೀರ್ತಿ ನಮ್ಮ ನಾಡಪ್ರಭು ಆವರಿಗೆ ಸಲ್ಲುತ್ತದೆ ಆ ಕಾರಣಕ್ಕಾಗಿ ನಾವು 21ನೇ ಶತಮಾನದಲ್ಲಿಯೂ ಸಹ ಅವರನ್ನು ಸ್ಮರಿಸಲೇಬೇಕು ಎಂದರು.

ಶೀಘ್ರ ಕೆಂಪೇಗೌಡ ಕಂಚಿನ ಪುತ್ಥಳಿ ಆನಾವರಣ

ಕೆಂಪೇಗೌಡರ ಐತಿಹಾಸಿಕ ಘಟನಾವಳಿಗಳನ್ನು ಸ್ಮರಿಸಿದ ಸಚಿವ ಸುಧಾಕರ್‌, ಈ ಭಾಗದಲ್ಲೂ ಕೆಂಪೇಗೌಡರ ಹೆಜ್ಜೆ ಗುರುತುಗಳು ಇವೆ. ಹಾಗಾಗಿ ಕೆಂಪೇಗೌಡ ಸೇರಿದಂತೆ ವಿವಿಧ ಸಮುದಾಯಗಳ ಸುಮಾರು 7-8 ವ್ಯಕ್ತಿಗಳ ಕಂಚಿನ ಪ್ರತಿಮೆಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಪ್ರತಿಷ್ಠಾಪಿಸಿ ಆನಾವರಣಗೊಳಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.