ಈಗ ಸಚಿವ ಸ್ಥಾನ ಸಿಗದವರಿಗೆ ಆಗ ಸಿಗುವ ವಿಶ್ವಾಸ| ಸಂದರ್ಭಕ್ಕೆ ಅನುಗುಣವಾಗಿ ಸಂಪುಟದಲ್ಲಿ ಸ್ಥಾನಮಾನ ಸಿಗುತ್ತಿದೆ| ಲೋಪವನ್ನು ಮುಖ್ಯಮಂತ್ರಿಗಳೇ ಸರಿಪಡಿಸುತ್ತಾರೆ| ಸರ್ಕಾರ ಬರಲು ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಕೊಡುತ್ತಿರುವುದು ಬಹಳ ಸಂತೋಷ ತಂದಿದೆ: ಜಾರಕಿಹೊಳಿ| 

ಬೆಳಗಾವಿ(ಜ.14): ಮುಂಬರುವ ಮಾರ್ಚ್‌ ಇಲ್ಲವೇ ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸಚಿವ ಸಂಪುಟ ಪುನಾರಚನೆಯಾಗಲಿದ್ದು ಈಗ ಸಚಿವ ಸ್ಥಾನ ತಪ್ಪಿದವರಿಗೆ ಆಗ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ.17 ರಂದು ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಉಪಚುನಾವಣೆ ನಡೆಯಬೇಕಿದೆ. ಬಳಿಕ ತಾಪಂ, ಜಿಪಂ ಚುನಾವಣೆ ನಡೆಯಲಿದೆ. ಬಳಿಕ ಮತ್ತೊಮ್ಮೆ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಚಿವ ಸ್ಥಾನವಿಲ್ಲ: ರಮೇಶ್ ಜಾರಕಿಹೊಳಿ‌ ಮತ್ತು ಮಹೇಶ್ ಕುಮಟಳ್ಳಿ ಪ್ರತ್ಯೇಕ ಮಾತುಕತೆ

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಮಹೇಶ ಕುಮಟಳ್ಳಿ, ಎಚ್‌.ವಿಶ್ವನಾಥ, ಮುನಿರತ್ನ ಅವರಿಗೆ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ದೊರೆಯಲಿದೆ. ನಮ್ಮ ಟೀಂನಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ದೊರೆಯಬೇಕಿದೆ. ಎಚ್‌.ವಿಶ್ವನಾಥ ಅವರಿಗೆ ಸಚಿವರಾಗಲು ಕಾನೂನಿನ ತೊಡಕಿದೆ. ಕಲಬುರಗಿಯಲ್ಲಿ ಪ್ರಭಾವ ಹೊಂದಿರುವ, ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಲೀಕಯ್ಯ ಗುತ್ತೇದಾರ್‌ ಅವರಿಗೂ ಸಚಿವ ಸ್ಥಾನ ಸಿಗಬೇಕಿತ್ತು ಎಂದರು. ಇದೇ ವೇಳೆ ಸರ್ಕಾರ ಬರಲು ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಕೊಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.

ವಿಶ್ವನಾಥ್‌ ಮಾತು ನನಗೆ ಆಶೀರ್ವಾದ:

ಸಚಿವ ಸ್ಥಾನದಿಂದ ವಂಚಿತರಾಗಿರುವ ಎಚ್‌.ವಿಶ್ವನಾಥ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳು ನನಗೆ ಆಶೀರ್ವಾದ ಎಂದುಕೊಳ್ಳುತ್ತೇನೆ. ಸರ್ಕಾರ ಕೇವಲ ಬೆಂಗಳೂರು, ಬೆಳಗಾವಿಗೆ ಸೀಮಿತವಾಗಿದೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂದರ್ಭಕ್ಕೆ ಅನುಗುಣವಾಗಿ ಸಂಪುಟದಲ್ಲಿ ಸ್ಥಾನಮಾನ ಸಿಗುತ್ತಿದೆ. ಲೋಪವನ್ನು ಮುಖ್ಯಮಂತ್ರಿಗಳೇ ಸರಿಪಡಿಸುತ್ತಾರೆ ಎಂದರು.