ಈ ಪ್ರಕರಣ ಸ್ಟಾಕ್‌ ಯಾರ್ಡ್‌ನಿಂದ ಮರಳು ತರುವಾಗ ಘಟಿಸಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಮೃತ ಮಯೂರ್‌ ಚವ್ಹಾಣ ಕುಟುಂಬಕ್ಕೆ ಪೊಲೀಸ್‌ ಇಲಾಖೆಯಿಂದ 30 ಲಕ್ಷ ರು. ಪರಿಹಾರ ನೀಡಲಾಗುವುದು. ಜೊತೆಗೆ ಸೇವಾ ವಿಮೆ, ಗ್ರಾಚ್ಯುಟಿ ಸೇರಿದಂತೆ ಇತರೆ 10 ಲಕ್ಷ ರು. ಕುಟುಂಬಕ್ಕೆ ಸಿಗಲಿದೆ. ಸರ್ಕಾರದ ನಿಯಮಾವಳಿಯಂತೆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗುವುದು. ಮಕ್ಕಳ ವಿಧ್ಯಾಬ್ಯಾಸದ ಬಗ್ಗೆಯೂ ಸರ್ಕಾರ ಗಮನಹರಿಸಲಿದೆ: ಪ್ರಿಯಾಂಕ್‌ ಖರ್ಗೆ 

ಕಲಬುರಗಿ(ಜೂ.21):  ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾಗೆ ಕಡಿವಾಣ ಹಾಕಲಾಗುವುದು. ಅಕ್ರಮ ಮರಳುಗಾರಿಕೆ, ಗಣಿಗಾರಿಕೆ, ಜೂಜು ಅಡ್ಡೆ ತಡೆಯಲು ಈಗಾಗಲೆ ಹೆಜ್ಜೆ ಇಟ್ಟಿದ್ದೇವೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿ​ದರು.

ಇತ್ತೀಚೆಗೆ ಅಕ್ರಮ ಮರಳು ತಪಾಸಣೆ ಸಂದರ್ಭದಲ್ಲಿ ಟ್ರ್ಯಾಕ್ಟರ್‌ಗೆ ಸಿಲುಕಿ ಸಾವನಪ್ಪಿದ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್‌ ಠಾಣೆಯ ಮುಖ್ಯ ಪೇದೆ ಮಯೂರ್‌ ಚವ್ಹಾಣ ಅವರ ಚೌಡಾಪೂರ್‌ ತಾಂಡಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಚಿಂಚೋಳಿ: ಮೃತ ಹಣಮಂತ ಭೋವಿ ಕುಟುಂಬಕ್ಕೆ ಸಂಸದ ಉಮೇಶ ಜಾಧವ್‌ ಸಾಂತ್ವನ

ನಂತರ ಮಾತ​ನಾಡಿ, ಈ ಪ್ರಕರಣ ಸ್ಟಾಕ್‌ ಯಾರ್ಡ್‌ನಿಂದ ಮರಳು ತರುವಾಗ ಘಟಿಸಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಮೃತ ಮಯೂರ್‌ ಚವ್ಹಾಣ ಕುಟುಂಬಕ್ಕೆ ಪೊಲೀಸ್‌ ಇಲಾಖೆಯಿಂದ 30 ಲಕ್ಷ ರು. ಪರಿಹಾರ ನೀಡಲಾಗುವುದು. ಜೊತೆಗೆ ಸೇವಾ ವಿಮೆ, ಗ್ರಾಚ್ಯುಟಿ ಸೇರಿದಂತೆ ಇತರೆ 10 ಲಕ್ಷ ರು. ಕುಟುಂಬಕ್ಕೆ ಸಿಗಲಿದೆ. ಸರ್ಕಾರದ ನಿಯಮಾವಳಿಯಂತೆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗುವುದು. ಮಕ್ಕಳ ವಿಧ್ಯಾಬ್ಯಾಸದ ಬಗ್ಗೆಯೂ ಸರ್ಕಾರ ಗಮನಹರಿಸಲಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಂ.ವೈ.ಪಾಟೀಲ ಜೊತೆ ಸೇರಿ ತಮ್ಮ ಪಕ್ಷದ ವತಿಯಿಂದ 1 ಲಕ್ಷ ರೂ. ಚೆಕ್‌ ಮೃತ ಮಯೂರ್‌ ಚವ್ಹಾಣ ಅವರ ಪತ್ನಿ ನಿರ್ಮಲಾ ಅವರಿಗೆ ವಿತರಿಸಿದರು. ಶಾಸಕರಾದ ಎಂ.ವೈ.ಪಾಟೀಲ, ಎಸ್‌.ಪಿ. ಇಶಾ ಪಂತ್‌, ತಹಶೀಲ್ದಾರ ಸಂಜೀವಕುಮಾರ ದಾಸರ್‌ ಮತ್ತಿತರು ಇದ್ದರು.