Asianet Suvarna News Asianet Suvarna News

ಕೆರೂರ ಗಲಾಟೆ: ಉದ್ದೇಶಪೂರ್ವಕವಾಗಿಯೇ ಹಿಂದೂಗಳ ಮೇಲೆ ಹಲ್ಲೆ, ಮುರುಗೇಶ ನಿರಾಣಿ

*  ಕಾಂಗ್ರೆಸ್ ನವರು ಸಿದ್ದರಾಮೋತ್ಸವ ಮಾಡ್ತಾರೋ, ಇನ್ನೊಂದು ಮಾಡ್ತಾರೋ ಗೊತ್ತಿಲ್ಲ
*  ರಾಜ್ಯದಲ್ಲಿ ಮತ್ತೇ ಅಧಿಕಾರಕ್ಕೆ ಬರೋದೆ ಬಿಜೆಪಿ ಸರ್ಕಾರ
*  ನಿರಾಣಿ ಫೌಂಡೇಶನ್ ವತಿಯಿಂದ ಉದ್ಯೋಗ ಮೇಳ 
 

Minister Murugesh Nirani React on Kerur Riot grg
Author
Bengaluru, First Published Jul 11, 2022, 1:00 AM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಜು.10):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಅಂಗವಾಗಿ ಕಾಂಗ್ರೆಸ್ ನವರು ಸಿದ್ದರಾಮೋತ್ಸವ ಆಚರಣೆ ಮಾಡಿಕೊಳ್ಳುವುದು, ಅವರ ವೈಯಕ್ತಿಕ & ಕಾಂಗ್ರೆಸ್ ಪಕ್ಷಕ್ಕೆ ಸೇರಿರೋ ವಿಚಾರವಾಗಿದೆ. ಅದಕ್ಕೂ ನಮಗೂ ಸಂಭಂಧವಿಲ್ಲ. ಅವರು ವಿಜಯೋತ್ಸವ ಮಾಡ್ತಾರೋ, ಇನ್ನೊಂದು ಮಾಡ್ತಾರೋ ಮಾಡಲಿ. ಆದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಬೇರಿ ಭಾರಿಸಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ನಿನ್ನೆ(ಭಾನುವಾರ) ನಗರದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತವನ್ನು ಜನರಿಗೆ ನೀಡುತ್ತಿವೆ‌. ಹೀಗಾಗಿ ಜನರು ಸಹ ಬಿಜೆಪಿ ಸರ್ಕಾರದ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ಬಂದಿದ್ದಾರೆ. ಇದರಿಂದ ಭವಿಷ್ಯದಲ್ಲಿ ಬಿಜೆಪಿ ಇನ್ನಷ್ಟು ಪ್ರಭಲವಾಗಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

BAGALKOTE: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಲಿ: ಯತ್ನಾಳ ವ್ಯಂಗ್ಯ

2023ರವರೆಗೂ ಬೊಮ್ಮಾಯಿ ಅವರೇ ಸಿಎಂ

ಮುಂಬರುವ ಚುನಾವಣೆಯನ್ನ ಸಿಎಂ ಸೇರಿ ಸಾಮೂಹಿಕ ನಾಯಕತ್ವ ನೇತೃತ್ವದಲ್ಲಿ ಎದುರಿಸುತ್ತೇವೆ. ರಾಜ್ಯದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸಕಾ೯ರವು ಸಂಘ ಪರಿವಾರ & ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ  ಮಾಗ೯ದಶ೯ನದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಹೀಗಾಗಿ 2023ರ ಚುನಾವಣೆವರೆಗೂ ಬೊಮ್ಮಾಯಿ ಅವರೇ ಸಿಎಂ ಆಗಿರ್ತಾರೆ. ಸಿಎಂ ಬೊಮ್ಮಾಯಿ ಮತ್ತು ನಮ್ಮೆಲ್ಲರ ಸಾಮೂಹಿಕ ನೇತೃತ್ವದಲ್ಲಿ ಚುನಾವಣೆಗೆ ಸಿದ್ದರಾಗಿದ್ದೇವೆ. ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 125ಕ್ಕೂ ಅಧಿಕ ಸ್ಥಾನ ಪಡೆದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಕೆರೂರ ಗಲಾಟೆಯಲ್ಲಿ ಉದ್ದೇಶಪೂರ್ವಕವಾಗಿಯೇ ಹಿಂದೂಗಳ ಮೇಲೆ ಹಲ್ಲೆ

ಕೆರೂರು ಗಲಭೆ ಪ್ರಕರಣ ವಿಚಾರವಾಗಿ ಮಾತನಾಡಿದ ಸಚಿವ ಮುರುಗೇಶ ನಿರಾಣಿ ಅವರು, ಕೆರೂರು ಗುಂಪು ಘರ್ಷಣೆ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನಮ್ಮ ಹಿಂದೂ ಸಂಘಟನೆಯ ವ್ಯಕ್ತಿಗಳ ಮೇಲೆ ಹಲ್ಲೆಯಾಗಿದೆ. ಇದು ಆಗಬಾರದಿತ್ತು. ಈ ಘಟನೆಯನ್ನ ನಾವು ಖಂಡನೆ ಮಾಡುತ್ತೇವೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಸ್ಪಷ್ಟ ಸೂಚನೆ ನೀಡಿದ್ದೇವೆ ಎಂದು ಸಚಿವ ಮುರಗೇಶ ನಿರಾಣಿ ಹೇಳಿದರು.

ರಾಜ್ಯ, ಕೇಂದ್ರದಲ್ಲಿರುವುದು ಡಬಲ್‌ ದೋಖಾ ಸರ್ಕಾರಗಳು: ಖಂಡ್ರೆ

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ

ಕೆರೂರ ಗಲಾಟೆ ಪ್ರಕರಣಕ್ಕೆ ಪೊಲೀಸರ ವೈಫಲ್ಯವೇ ಮುಖ್ಯ ಕಾರಣ ಎನ್ನುವ ವಿಚಾರವಾಗಿ ಮಾತನಾಡಿದ ಸಚಿವ ನಿರಾಣಿ, ಈ ಬಗ್ಗೆಯೂ ತನಿಖೆ ನಡೆದಿದೆ, ನಾನು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಘಟನೆ ನಡೆಯುವ ಸಮಯದಲ್ಲಿ ನಾಲ್ಕೈದು ಜನ ಪೊಲೀಸರು ಸಹ ಸ್ಥಳದಲ್ಲಿದ್ರೂ ಅನ್ನೋ ಮಾಹಿತಿ ಗಮನಕ್ಕೆ ಬಂದಿದೆ. ಅಲ್ಲಿ ಯಾರು ಇದ್ರೂ ಅನ್ನೋದರ ಬಗ್ಗೆ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳು ವಿಚಾರಣೆ ಮಾಡುತ್ತಾರೆ.
ಪೊಲೀಸರು ಕೂಡಾ ತಪ್ಪು ಎಸೆಗಿರೋದು ಸಾಬೀತಾದ್ರೆ ಖಂಡಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ,ಹಿಂದು- ಮುಸ್ಲಿಂ ಎಲ್ಲರಿಗೂ ಒಂದೇ ಕಾನೂನು, ಹಿಂದು ಯುವಕರ ಮೇಲೆ ನಡೆದ ಹಲ್ಲೆ ಉದ್ದೇಶ ಪೂರ್ವಕವಾಗಿ ನಡೆದಿದೆ.ಅದು ಬಹಳ ಸ್ಪಷ್ಟವಾಗಿ ಹೇಳಬಹುದು ಎಂದರು.

ನಿರಾಣಿ ಫೌಂಡೇಶನ್ ವತಿಯಿಂದ ನಡೆದ ಉದ್ಯೋಗ ಮೇಳ

ಬಾಗಲಕೋಟೆ ನಗರದಲ್ಲಿ ನಿರಾಣಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಉದ್ಯೋಗ ಮೇಳವನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಿದರು.  ನವನಗರದ ತೇಜಸ್ ಶಾಲೆಯ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳದ ಸಾನಿಧ್ಯವನ್ನು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಹಿಸಿದ್ದರು. ಉದ್ಯೋಗ ಮೇಳದಲ್ಲಿ  ಅನೇಕ ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗ ಪಡೆಯಲು ನೂರಾರು ವಿದ್ಯಾರ್ಥಿಗಳು ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮುರುಗೇಶ ನಿರಾಣಿ, ಇಂದಿನ ದಿನಗಳಲ್ಲಿ ಓದಿದರೂ ಸಹ ಕೆಲಸವಿಲ್ಲದೆ ಅದೆಷ್ಟೋ ಜನ ನಿರುದ್ಯೋಗಿಗಳಾಗಿದ್ದಾರೆ ಹೀಗಾಗಿ ಅನುಕೂಲವಾಗಲಿ ಅನ್ನೋ ಕಾರಣದಿಂದ ಈ ಉದ್ಯೋಗ ಮೇಳ ಆಯೋಜಿಸಿದ್ದು, ಇದರ ಸದುಪಯೋಗ ಆಗುವಂತಾಗಲಿ ಎಂದರು.
 

Follow Us:
Download App:
  • android
  • ios