ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಎಂಟಿಬಿ ನಾಗರಾಜ್‌

ಹೊಸಕೋಟೆ(ನ.10): ರಾಜಕೀಯದಲ್ಲಿ ಕೇವಲ ಅ​ಧಿಕಾರಕ್ಕೆ ಅಂಟಿಕೊಂಡು ಕೂರುವ ವ್ಯಕ್ತಿ ನಾನಲ್ಲ. ಆ ಜಾಯಮಾನವೂ ನನ್ನದಲ್ಲ, ನನಗೇನಿದ್ದರೂ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

Add Asianetnews Kannada as a Preferred SourcegooglePreferred

ತಾಲೂಕಿನ ಕಸಬಾ ಹೋಬಳಿಯ ದೊಡ್ಡಘಟ್ಟಿಗನಬ್ಬೆ ಗ್ರಾಪಂ ವ್ಯಾಪ್ತಿಯ ಗಣಗಲು, ಚಿಕ್ಕಗಟ್ಟಿಗನಬ್ಬೆ, ದೊಡ್ಡಗಟ್ಟಿಗನಬ್ಬೆ, ಭಕ್ತರಹಳ್ಳಿ ಗ್ರಾಮಗಳಲ್ಲಿ 50-54ರ ವಿಶೇಷ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯವಾಗಿ ಸ್ಥಾನಮಾನ ನೀಡಿರುವ ಹೊಸಕೋಟೆ ಕ್ಷೇತ್ರದ ಜನರ ಸೇವೆ ಮಾಡುವುದೇ ನನ್ನ ಮುಖ್ಯ ಉದ್ದೇಶ, ಅದು ಅ​ಧಿಕಾರ ಇರಲಿ, ಬಿಡಲಿ ಆ ಕೆಲಸವನ್ನು ನಾನು ನಮ್ಮ ಕುಟುಂಬ ನಿರಂತರವಾಗಿ ಮಾಡುತ್ತೇವೆ. 2004ರಿಂದ ನಡೆದ 5 ಚುನಾವಣೆಗಳಲ್ಲಿ ನಾನು 3 ಬಾರಿ ಗೆದ್ದು, ಶಾಸಕನಾಗಿ, ಸಚಿವನಾಗಿದ್ದೇನೆ. ಅದಕ್ಕೆ ಕಾರಣರಾದವರು ಕ್ಷೇತ್ರದ ಮತದಾರರು. ಆದ್ದರಿಂದ ಕೇವಲ ಅಧಿ​ಕಾರಕ್ಕೆ ಅಂಟಿಕೊಳ್ಳದೆ ಜನಸೇವೆ ಮಾಡುತ್ತೇನೆ. ಕಳೆದ ಉಪ ಚುನಾವಣೆಯಲ್ಲಿ ಸೋತರೂ ಎಂಎಲ್ಸಿಯಾಗಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ ಎಂದರು.

ಕಡು ಬಡವರಿಗೆ ಶಾಶ್ವತ ಸೂರು, ಪ್ರಧಾನಿ ಮೋದಿ ಸಂಕಲ್ಪ: ಸಚಿವ ಎಂಟಿಬಿ ನಾಗರಾಜ್‌

ಯುವ ಮುಖಂಡ ಕೋಡಿಹಳ್ಳಿ ಜನಾರ್ಧನ್‌ ಮಾತನಾಡಿ, ಕ್ಷೇತ್ರದಲ್ಲಿ ಶಾಂತಿ ನೆಮ್ಮದಿ ವಾತಾವರಣ ಸೃಷ್ಟಿಸಿದವರು ಎಂಟಿಬಿ ನಾಗರಾಜ್‌ ಅವರು. 2004ಕ್ಕಿಂತ ಮೊದಲು ಕ್ಷೇತ್ರದಲ್ಲಿ ಇದ್ದ ಚಿತ್ರಣವನ್ನು ಇಂದಿನ ಯುವ ಸಮುದಾಯ ನೋಡಿರಲಿಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದ ಹಿಂದಿನ ಚಿತ್ರಣವನ್ನು ಒಮ್ಮೆ ಮೆಲುಕು ಹಾಕಿದರೆ, ಎಂಟಿಬಿ ನಾಗರಾಜ್‌ ಅವರ ಕಾರ್ಯ ವೈಖರಿಯ ಬೆಲೆ ಮತದಾರರಿಗೆ ಅರ್ಥವಾಗುತ್ತದೆ ಎಂದು ಹೇಳಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್‌, ಟೌನ್‌ ಅಧ್ಯಕ್ಷ ಡಾ.ಸಿ.ಜಯರಾಜ್‌, ಎಸ್ಸಿ ಮೋರ್ಚಾ ಅಧ್ಯಕ್ಷ ದೊಡ್ಡಹರಳಗೆರೆ ನಾಗೇಶ್‌, ಗ್ರಾಪಂ ಉಪಾಧ್ಯಕ್ಷ ಮುನೇಗೌಡ, ಎಸ್‌ಎಫ್‌ಸಿಎಸ್‌ ಮಾಜಿ ನಿರ್ದೇಶಕ ವೆಂಕಟೇಶ್‌, ಮುಖಂಡರಾದ ಎಸ್‌ಟಿಬಿ ಮುನಿರಾಜು, ಚೀಮಂಡಹಳ್ಳಿ ರಾಜೇಂದ್ರ, ರಾಜ್‌ಗೋಪಾಲ್‌ ಇತರರು ಹಾಜರಿದ್ದರು.