ಇಂದು 5 ಸಾವಿರ ಸಾರಿಗೆ ಬಸ್‌ ಓಡಾಡುವ ವಿಶ್ವಾಸವಿದೆ| ನೌಕರರ ಮುಷ್ಕರದಿಂದ ಈವರೆಗೆ 170 ಕೋಟಿ ನಷ್ಟ| ನಮ್ಮಲ್ಲಿ 25 ಸಾವಿರ ಬಸ್‌ ಇದೆ. 1.3ಲಕ್ಷ ಮಂದಿ ಸಿಬ್ಬಂದಿ ಇದ್ದಾರೆ. ಖಾಸಗಿಯವರಿಗೆ ಕೊಟ್ಟರೆ ಸಾರ್ವಜನಿಕರಿಗೆ ತೊಂದರೆ: ಸಚಿವ ಸವದಿ| 

ಬೀದರ್‌(ಏ.16): ಸರ್ಕಾರಕ್ಕೆ ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಯಾವುದೇ ಉದ್ದೇಶ ಇಲ್ಲ, ಎಸ್ಮಾ ಜಾರಿ ಬಗ್ಗೆಯೂ ಯೋಚಿಸಿಲ್ಲ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.

Add Asianetnews Kannada as a Preferred SourcegooglePreferred

ಹುಮನಾಬಾದ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮಲ್ಲಿ 25 ಸಾವಿರ ಬಸ್‌ ಇದೆ. 1.3ಲಕ್ಷ ಮಂದಿ ಸಿಬ್ಬಂದಿ ಇದ್ದಾರೆ. ಖಾಸಗಿಯವರಿಗೆ ಕೊಟ್ಟರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ನೌಕರರ ಮುಷ್ಕರದಿಂದ ಸಾರಿಗೆ ಇಲಾಖೆಗೆ ಈವರೆಗೆ 170 ಕೋಟಿ ಆದಾಯ ಖೋತಾ ಆಗಿದೆ. ನೌಕರರು ಹಠಕ್ಕೆ ಬೀಳಬೇಡಿ. ಪ್ರತಿಭಟನೆ ಬಿಡಿ, ಕೆಲಸ ಆರಂಭಿಸಿ. ವೇತನ ಹೆಚ್ಚಿಸುವ ಬಗ್ಗೆ ನಾವು ಮಾತನಾಡುತ್ತೇವೆ ಎಂದು ಭರವಸೆ ನೀಡಿದರು.

ವಿರಸ ಬಿಡಿ, ಸಾಮರಸ್ಯ ಸಾಧಿಸಿ: ಸಾರಿಗೆ ನೌಕರರಿಗೆ ನಟ ಯಶ್‌ ಪತ್ರ

ಇಂದು ಹೆಚ್ಚಿನ ಪ್ರಮಾಣದಲ್ಲಿ ಬಸ್‌ ಓಡಾಡುತ್ತಿದೆ. ಶುಕ್ರವಾರ 5 ಸಾವಿರ ಬಸ್‌ಗಳು ಓಡಾಡುವ ವಿಶ್ವಾಸ ಇದೆ. 24 ಸಾವಿರ ಖಾಸಗಿ ಬಸ್‌ಗಳು ರಸ್ತೆಗಿಳಿದಿವೆ. ಖಾಸಗಿ ವಾಹನಗಳು ಸಾರಿಗೆ ಸಂಸ್ಥೆಯ ದರದಲ್ಲಿಯೇ ಪ್ರಯಾಣಿಕರಿಗೆ ಟಿಕೆಟ್‌ ನೀಡಲಿವೆ ಎಂದು ಸವದಿ ತಿಳಿಸಿದರು.

ಇದೇ ವೇಳೆ, ನೌಕರರ ಕುಟುಂಬದ ಪ್ರತಿಭಟನೆಗೆ ಸಂಬಂಧಿಸಿ ಸವದಿ ಆಕ್ಷೇಪ ವ್ಯಕ್ತಪಡಿಸಿದರು. ನೌಕರರ ಕುಟುಂಬದಿಂದ ಭಿಕ್ಷಾಟನೆ ಮಾಡಿಸಿರುವುದು ಅವಮಾನಕರ, ಖಂಡನೀಯ ಹಾಗೂ ಕಾನೂನುಬಾಹಿರ. ಮಹಿಳೆಯರು, ಮಕ್ಕಳನ್ನು ಕಳುಹಿಸಿ ಭಿಕ್ಷಾಟನೆ ಮಾಡಿಸಿದ್ದಾರೆ. ಯಾರೂ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು ಎಂದರು.