* ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವಷ್ಟು ನಾವು ದೊಡ್ಡವರಲ್ಲ* ಪಕ್ಷದ ವರಿಷ್ಠರು ಹಾಗೂ ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ* 2-3 ತಿಂಗಳಲ್ಲಿ ಸುಮಾರು 5ರಿಂದ 6 ಕೋಟಿ ಜನರಿಗೆ ಲಸಿಕೆ ಕೊಡುವ ಗುರಿ

ಚಿಕ್ಕಬಳ್ಳಾಪುರ(ಜು.26): ರಾಜ್ಯದಲ್ಲಿ ಉಚಿತವಾಗಿ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಸುಸೂತ್ರವಾಗಿ ಸಾಗುತ್ತಿದ್ದು ಇನ್ನೆರಡು ದಿನದಲ್ಲಿ 3 ಕೋಟಿ ತಲುಪುವ ಗುರಿ ಹೊಂದಲಾಗಿದೆ. ಜೊತೆಗೆ ಇನ್ನೆರಡು ಮೂರು ತಿಂಗಳಲ್ಲಿ ಸುಮಾರು 5ರಿಂದ 6 ಕೋಟಿ ಜನರಿಗೆ ಲಸಿಕೆ ಕೊಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಸಿಕಾಕರಣ ವೇಗ ಪಡೆಯಲು ರಾಜ್ಯದಲ್ಲಿನ ಸ್ವಯಂ ಸಂಸ್ಥೆಗಳು, ಮುಂದೆ ಬಂದು ಕೋವಿಡ್‌ ಲಸಿಕೆಯನ್ನು ಖರೀದಿಸಿ ಜನರಿಗೆ ಉಚಿತವಾಗಿ ನೀಡುವ ಪ್ರಕ್ರಿಯೆ ಹೆಚ್ಚಾಗಬೇಕು ಎಂದು ಹೇಳಿದ್ದಾರೆ.

ಕೊರೋನಾ 3ನೇ ಅಲೆ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಸುಧಾಕರ್‌

ಇನ್ನು ರಾಜ್ಯದಲ್ಲಿ ಮಳೆ ಹೆಚ್ಚಾಗಿರುತ್ತಿರುವುದರಿಂದ, ಸಾಂಕ್ರಾಮಿಕ ರೋಗಗಳ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ಈಗಾಗಲೆ ಅದಕ್ಕೆ ಪೂರಕವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ನೆರೆಪೀಡಿತ ಐದಾರು ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಮಾನನಾಡಿದ್ದು ಅಲ್ಲಿ ಕಾಳಜಿ ಕೇಂದ್ರಗಳಲ್ಲಿ ಶುದ್ಧ ನೀರು, ಅಗತ್ಯ ಔಷಧವನ್ನು ಪೂರೈಸಲಾಗಿದೆ. ಅದೇರೀತಿ ಮೊಬೈಲ್‌ ಯೂನಿಟ್ಸ್‌ ಹೆಲ್ತ್‌ ಕ್ಲಿನಿಕ್‌ಗಳನ್ನು ಕಳುಹಿಸಲಾಗಿದೆ ಎಂದರು.

ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ: 

ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಆ ವಿಚಾರವಾಗಿ ಮಾತನಾಡುವಷ್ಟು ನಾವು ದೊಡ್ಡವರಲ್ಲ. ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.