Asianet Suvarna News Asianet Suvarna News

ಅನಗತ್ಯ ಪಾಸ್‌ ಹೊಂದಿರುವವರನ್ನು ಒದ್ದು ಒಳಗೆ ಹಾಕಿ ಎಂದ ಸಚಿವ

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅನಾವಶ್ಯಕ ಪಾಸ್‌ ಹೊಂದಿ ಸಾರ್ವಜನಿಕರಿಗೆ ಮತ್ತು ತಾಲೂಕು ಆಡಳಿತಕ್ಕೆ ಕಿರಿಕಿರಿ ಮಾಡುತ್ತಿರುವವರನ್ನು ಒದ್ದು ಒಳಗೆ ಹಾಕಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪೊಲೀಸ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

 

Minister jc madhuswamy suggest police to arrest people with unessesary pass
Author
Bangalore, First Published Apr 23, 2020, 2:18 PM IST

ತುಮಕೂರು(ಏ.23): ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅನಾವಶ್ಯಕ ಪಾಸ್‌ ಹೊಂದಿ ಸಾರ್ವಜನಿಕರಿಗೆ ಮತ್ತು ತಾಲೂಕು ಆಡಳಿತಕ್ಕೆ ಕಿರಿಕಿರಿ ಮಾಡುತ್ತಿರುವವರನ್ನು ಒದ್ದು ಒಳಗೆ ಹಾಕಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪೊಲೀಸ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ಆದೇಶಪಾಲನೆಯಲ್ಲಿ ಸಂಬಂಧಿಸಿದ ಇಲಾಖೆಯ ಸಿಬ್ಬಂದಿ ತಮ್ಮ ಕರ್ತವ್ಯಗಳನ್ನು ಬಿಗಿಯಾಗಿ ಜಾರಿಗೆ ತರುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಅಗತ್ಯ ಸೇವಾ ನಿರತರೆಂಬ ಪಾಸ್‌ಗಳನ್ನು ಸರ್ಕಾರಿ ನಿಯಮಾವಳಿಗಳ ಆದೇಶದಂತೆ ತಾಲೂಕು ಆಡಳಿತ, ಅಗತ್ಯ ಸೇವೆಯಲ್ಲಿರುವ ಅರ್ಹರಿಗೆ ವ್ಯವಸ್ಥಿತವಾಗಿ ಪಾಸ್‌ಗಳನ್ನು ನೀಡಲಾಗಿತ್ತು.

ಕೊರೋನಾ ಮುಕ್ತ ಜಿಲ್ಲೆ ಅನ್‌ಲಾಕ್‌, ಇನ್ನೆರಡು ದಿನಗಳಲ್ಲಿ ಸಿಎಂ ನಿರ್ಧಾರ

ಈಚೆಗೆ ತಾಲೂಕಿನಾದ್ಯಂತ ಕೆಲವು ಸ್ವಹಿತಾಸಕ್ತಿಯ ಪಟ್ಟಭದ್ರರು ತಾಲೂಕು ಆಡಳಿತದ ಗಮನಕ್ಕೆ ಬಾರದೆ ಹೊರಗಿನಿಂದ ಅಗತ್ಯ ಸೇವಾನಿರತರೆಂಬ ಸರ್ಕಾರಿ ಪಾಸ್‌ಗಳನ್ನು ಪಡೆದಿದ್ದಾರೆ. ಈ ಪಾಸ್‌ಗಳನ್ನು ಪಡೆದಿರುವ ಬಗ್ಗೆ ಸ್ಥಳೀಯ ತಾಲೂಕು ಆಡಳಿತಕ್ಕಾಗಲಿ ಹಾಗೂ ಪೊಲೀಸ್‌ ಇಲಾಖೆಗಾಗಲಿ ತಿಳಿಸದೆ ಕೆಲವು ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿಯನ್ನು ಸಚಿವರಿಗೆ ಸಭೆಯಲ್ಲಿ ನೀಡಲಾಯಿತು.

ಈ ಪಾಸ್‌ಗಳನ್ನು ಪಡೆದಿರುವವರು ಪಟ್ಟಣವೂ ಸೇರಿದಂತೆ ಹುಳಿಯಾರು ಮುಂತಾದ ಕಡೆ ತಹಸೀಲ್ದಾರ್‌ ಮತ್ತು ಪೊಲೀಸ್‌ ಕೆಲಸವನ್ನು ರಾಜಾರೋಷವಾಗಿ ನಿರ್ವಹಿಸಲು ಮುಂದಾಗಿದ್ದಾರೆ. ಅಂಗಡಿ, ಹೋಟೆಲ್‌, ಮಾರುಕಟ್ಟೆ, ಬ್ಯಾಂಕ್‌ಗಳಲ್ಲಿರುವ ಜನಗಳಿಗೆ ಮತ್ತು ಸಂಸ್ಥೆಯವರಿಗೆ ತಾವೇ ಅಧಿಕಾರಿಗಳಂತೆ ಗದರಿಸುವ ಮೂಲಕ ನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದಾರೆ ಎಂದರು.

ಮಹಾಮಾರಿ ಕೊರೋನಾದಿಂದ ಗುಣಮುಖ: ಬಳ್ಳಾರಿಯಲ್ಲಿ ಮೂವರು ಡಿಸ್ಚಾರ್ಜ್‌

ಇದೂ ಸಾಲದೆಂಬಂತೆ ತಾಲೂಕು ಆಡಳಿತದ ಗಮನಕ್ಕೂ ಬಾರದಂತೆ ಅನುಮತಿಯನ್ನು ಪಡೆಯದೆ ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ದೇಣಿಗೆ ಸಂಗ್ರಹಸಿ ಹಸಿದವರಿಗೆ ಅನ್ನ ನೀಡುತ್ತಿದ್ದೇವೆ ಎಂಬ ನೆಪದಲ್ಲಿ ದಂದೆ ಸಹ ಶುರುವಿಟ್ಟುಕೊಂಡಿದ್ದರು. ಇವರು ತಯಾರಿಸುತ್ತಿದ್ದ ಆಹಾರ ಅಸುರಕ್ಷಿತವಾಗಿದ್ದು, ಇದರಿಂದ ತಾಲೂಕು ಆಡಳಿತದ ಕೊರೊನಾ ನಿಯಂತ್ರಣದ ಕಾರ್ಯಕ್ರಮಕ್ಕೆ ಅಡಚಣೆಯುಂಟಾಗುತ್ತಿತ್ತು. ಈ ಬೇನಾಮಿ ಪಾಸ್‌ ಹೊಂದಿರುವವರ ಕಿರಿಕುಳವನ್ನು ಸಹಿಸಲಾರದೆ ಸಾರ್ವಜನಿಕರು ತಹಸೀಲ್ದಾರ್‌ ಹಾಗೂ ವೃತ್ತನಿರೀಕ್ಷಕರಿಗೆ ಮೌಖಿಕವಾಗಿ ದೂರು ನೀಡಿದ್ದರು. ಈ ಮೇರೆಗೆ ಅಧಿಕಾರಿಗಳು ಇಂತಹ ಸ್ವಘೋಷಿತ ಸ್ವಯಂ ಸೇವಕರಿಲ್ಲಿದ್ದ ಪಾಸ್‌ಗಳನ್ನು ಮುಟ್ಟುಗೋಲು ಹಾಕಿಕೊಂಡರು.

ಗೃಹರಕ್ಷಕ ಮುಖ್ಯಸ್ಥನಿಂದ ಸಚಿವರಿಗೆ ದೂರು:

ಈ ಪಟ್ಟಭದ್ರ ಹಿತಾಸಕ್ತ ಸ್ವಯಂಸೇವಕರ ಚಿತಾವಣೆಯ ಮೇರೆಗೆ ಗೃಹರಕ್ಷಕ ದಳದ ತಾಲೂಕು ಮುಖ್ಯಸ್ಥ ಮಂಜುನಾಥ (ಅರಸ್‌) ಎಂಬುವರು ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೊರೋನಾ ನಿಯಂತ್ರಣದ ಪರಿಶೀಲನಾ ಸಭೆಯಲ್ಲಿ, ನಕಲಿ ಸ್ವಯಂಸೇವಕರ ಪರವಾಗಿ ವಕಾಲತ್ತು ವಹಿಸಿಕೊಂಡು, ವೃತ್ತ ನಿರೀಕ್ಷಕರ ಮೇಲೆ ಆರೋಪಹೊರಿಸಿ ಟ್ರಕ್‌ ಚಾಲಕರಿಗೆ ಉಚಿತವಾಗಿ ಆಹಾರಪೊಟ್ಟಣಗಳನ್ನು ನೀಡುತ್ತಿದ್ದ ಸ್ವಯಂ ಸೇವರ ಬಳಿಯಿದ್ದ ಪಾಸ್‌ಗಳನ್ನು ವೃತ್ತ ನಿರೀಕ್ಷಕರು ವಾಪಸ್‌ ಪಡೆದಿದ್ದಾರೆ. ಇದರಿಂದ ಸಮಾಜ ಸೇವೆಯಲ್ಲಿ ತೊಡಗಿದ್ದ ಅವರಿಗೆ ಆಹಾರ ವಿತರಣೆಗೆ ಅಡ್ಡಿಯುಂಟಾಗಿದೆ ಎಂದು ಆರೋಪಿಸಿದರು.

ಕೊರೋನಾ ವೈರಸ್ ತಗುಲದಂತೆ ಲಸಿಕೆ, ಶುರುವಾಯ್ತು ಪ್ರಯೋಗ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನಮ್ಮ ತಾಲೂಕು ಆಡಳಿತ ಸಮರ್ಥವಾಗಿ ಕೊರೋನಾ ನಿಯಂತ್ರಣ ಕಾರ್ಯವನ್ನು ನಿಯಂತ್ರಿಸುತ್ತಿದೆ. ವೈದ್ಯಕೀಯ ಸೇವೆಯಾಗಲಿ, ಹಸಿದವರಿಗೆ ಪಡಿತರ ನೀಡುವುದಾಗಲಿ, ಮಾಸ್ಕ್‌ ಮತ್ತು ಇತರೆ ಕೊರೋನಾ ನಿಯಂತ್ರಣ ಅಗತ್ಯ ವಸ್ತುಗಳನ್ನು ವಿತರಿಸುತ್ತಿದೆ. ಇದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಪೊಲೀಸ್‌ ಇಲಾಖೆ ಶಕ್ತಿಮೀರಿ ಕಾರ್ಯನಿರ್ವಹಿಸುತ್ತಿದೆ. ಜನಸಾಮನ್ಯರಿಗೆ ಅಗತ್ಯವಸ್ತುಗಳ ಪೂರೈಕೆಯಲ್ಲಿಯೂ ಸಹ ವ್ಯವಸ್ಥಿತವಾಗಿ ಸರ್ಕಾರಿ ಸಿಬ್ಬಂದಿಯ ಮೂಲಕವೇ ನಡೆದಿದೆ. ಆದ್ದರಿಂದ ಹೊರಗಿನವರು ಬೇನಾಮಿ ಪಾಸ್‌ ತಂದು ತಾಲೂಕು ಆಡಳಿತದಲ್ಲಿ ಮೂಗು ತೂರಿಸುವುದು ಬೇಡ. ಅಂತಹ ಚಟುವಟಿಕೆ ನಡೆಸುತ್ತಿರುವವರನ್ನು ಒದ್ದು ಒಳಗೆ ಹಾಕಿ ಎಂದು ಸಚಿವರು ಖಡಕ್‌ ಸೂಚನೆಯಿತ್ತರು.

ಸಭೆಯಲ್ಲಿ ತಹಸೀಲ್ದಾರ್‌ ಬಿ.ತೇಜಸ್ವಿನಿ, ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಸಮಾಜಕಲ್ಯಾಣಾಧಿಕಾರಿ ರೇಣುಕಾದೇವಿ, ಸಿಪಿಐ ವೀಣಾ, ಸಹಾಯಕ ಕೃಷಿ ನಿರ್ದೇಶಕ ಡಿ.ಆರ್‌. ಹನುಮಂತರಾಜು, ತೋಟಗಾರಿಕೆ ಇಲಾಖೆಯ ಚಿತ್ತೇಶ್‌, ಕಾರ್ಖಾನೆಯ ಜನರಲ್‌ ಮ್ಯಾನೇಜರ್‌ ಲಕ್ಷ್ಮೇನಾರಾಯಣ್‌ ಮುಂತಾದವರಿದ್ದರು.

Follow Us:
Download App:
  • android
  • ios