ಈ ಬಾರಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಹಳ್ಳಿಗಳಲ್ಲಿಯೂ ರಣಕೇಕೆ ಹಾಕುತ್ತಿದ್ದು, ಇದೀಗ ಸಚಿವರ ಸ್ವಗ್ರಾಮವೊಂದು ಕೊರೋನಾ ಹಾಟ್‌ಸ್ಪಾಟ್ ಆಗಿ ಬದಲಾಗಿದೆ. 

ಚಿಕ್ಕನಾಯಕನಹಳ್ಳಿ (ಮೇ.04):  ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಗ್ರಾಮ ಜೆ.ಸಿ.ಪುರ ಗ್ರಾಮವೇ ಕೂರೋನಾ ಹಾಟ್‌ ಸ್ಪಾಟ್‌ ಆಗಿ ಜಿಲ್ಲಾಡಳಿತ ಗುರುತಿಸಿದೆ.

ಕೊರೋನಾ ನಿರ್ಲಕ್ಷ್ಯಕ್ಕೆ ದಿನದಿಂದ ದಿನಕ್ಕೆ ಗ್ರಾಮೀಣ ಭಾಗದಲ್ಲಿ ವೈರಸ್‌ ರಣಕೇಕೆ ಭಾರಿಸುತ್ತಿರುವುದರಿಂದ ಹಳ್ಳಿಗಳೂ ಕೂಡ ಕೊರೋನಾ ಹಾಟ್‌ ಸ್ಪಾಟ್‌ ಕೇಂದ್ರಗಳಾಗುತ್ತಿವೆ. ಜೆ.ಸಿ.ಪುರ ಪಿಡಿಒ ಕೋಕಿಲಾ ಪತ್ರಿಕೆಯೊಂದಿಗೆ ಮಾತನಾಡಿ, ಕೊರೋನಾ ಹಾಟ್‌ಸ್ಪಾಟ್‌ ಆಗಿ ಜೆ.ಸಿ ಪುರ, ಜಿಲ್ಲಾಡಳಿತ ಗುರುತಿಸಿಕೊಂಡಿದ್ದು, ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಪಂಚಾಯಿತಿ ವತಿಯಿಂದ ಕೈಗೊಂಡಿದ್ದೇವೆ ಎಂದರು.

ಪಾಸಿಟಿವ್‌ ಸೋಂಕಿತರನ್ನು ಈಗಾಗಲೇ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಲಾಗಿದೆ. ಸೋಂಕಿತರ ಬೀದಿಗಳನ್ನು ಸ್ಯಾನಿಟೈಸ್‌ ಮಾಡಿಸಲಾಗುತ್ತಿದೆ. ತಾಲೂಕು ಆಡಳಿತದ ಸೂಚನೆಯಂತೆ ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳ ಪ್ರತಿ ಮನೆಗಳಿಗೆ ಪ್ರತಿನಿತ್ಯವೂ ಭೇಟಿ ನೀಡಿ, ಸೋಂಕಿತರ ಪಲ್ಸ್‌ರೇಟ್‌, ಸ್ಯಾಚುರೇಷನ್‌, ಪರೀಕ್ಷೀಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಇನ್ನೂ 15 ದಿನ ಸೋಂಕು ತೀವ್ರ ಏರಿಕೆ: ಡಾ| ಬಲ್ಲಾಳ್!

ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕಡ್ಡಾಯವಾಗಿ ಹೊರಗೆ ಬರದಂತೆ ಸೂಚಿಸಿದ್ದು, ಆಶಾ ಕಾರ್ಯಕರ್ತೆಯರು ಅವರ ಮೇಲೆ ನಿಗಾ ವಹಿಸಿದ್ದಾರೆ ಎಂದು ತಿಳಿಸಿದರು.

ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ದಂಡು: ತಿಪಟೂರು ಡಿವೈಎಸ್‌ಪಿ ಚಂದನ ಕುಮಾರ್‌, ಪಿಎಸ್‌ಐ ಹರೀಶ್‌, ತಾಪಂ ಪ್ರಭಾರ, ಇಒ ಹನುಮಂತರಾಜು, ಜೆ.ಸಿ.ಪುರ ವೈದ್ಯ ಮನೋಜ್‌, ಟಿಎಚ್‌ಒ ಡಾ.ನವೀನ್‌ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಸೋಂಕಿತ ವ್ಯಕ್ತಿಗಳ ಮನೆ ಮನೆಗೆ ಭೇಟಿ ನೀಡಿದ ತಹಸೀಲ್ದಾರ್‌ ಬಿ.ತೇಜಸ್ವಿನಿ ಮಾತನಾಡಿ, ಗ್ರಾಮದ ಸಾರ್ವಜನಿಕರು ಅನಗತ್ಯವಾಗಿ ಓಡಾಡಬಾರದು, ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್‌ ಬಳಸಿ ಹಾಗೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ, ಆರೋಗ್ಯ ರಕ್ಷಿಸಿಕೊಳ್ಳಲು ಸರ್ಕಾರದ ಕೋವಿಡ್‌ ಮಾರ್ಗಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು.

ಜ್ವರ, ಕೆಮ್ಮು , ನೆಗಡಿ, ತಲೆ ನೋವು, ಕಂಡು ಬಂದರೆ ನಿರ್ಲಕ್ಷ್ಯ ತೋರದೆ, ತಕ್ಷಣ ವೈದ್ಯರ ಸಲಹೆ ಹಾಗೂ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು.

ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದು, ಗ್ರಾಮದಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಸ್ಯಾನಿಟೈಸ್‌ ಮಾಡಿಸುತ್ತಿದ್ದು. ಮನೆಯ ಸುತ್ತಮುತ್ತದ ಪರಿಸರವನ್ನು ಶುಚಿತ್ವ ಕಾಪಾಡಿಕೊಳ್ಳಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಭಯ ಪಡೆದೆ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡುತ್ತಿದ್ದು, ಗ್ರಾಮದಲ್ಲಿ ವ್ಯಾಕ್ಸಿನೇಷನ್‌ ಕಾರ್ಯಗಾರವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona