ರಾಜ್ಯದಲ್ಲಿ ಇನ್ನೂ 15 ದಿನ ಸೋಂಕು ತೀವ್ರ ಏರಿಕೆ!| ನಂತರ ಇಳಿಕೆ: ಡಾ| ಬಲ್ಲಾಳ್‌| ಅಕ್ಟೋಬರ್‌ಗೆ 3ನೇ ಅಲೆ

 ಬೆಂಗಳೂರು(ಮೇ.04): ‘ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯ ತೀವ್ರತೆ ಇನ್ನೂ 15 ದಿನ ಇರಲಿದೆ. ನಂತರ ಸೋಂಕಿನ ಪ್ರಕರಣ ಕಡಿಮೆಯಾಗಬಹುದು’ ಎಂದು ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ.ಸುದರ್ಶನ್‌ ಬಲ್ಲಾಳ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ ಎರಡನೇ ಅಲೆಯು ಬಹಳ ವೇಗವಾಗಿ ವ್ಯಾಪಿಸಿದೆ. ಇನ್ನೂ 15 ದಿನಗಳ ಕಾಲ ಈ ಅಲೆ ಇನ್ನಷ್ಟುಹೆಚ್ಚಾಗಲಿದೆ. ಬಳಿಕ ಸೋಂಕಿನ ಪ್ರಕರಣ ಕಡಿಮೆ ಆಗಬಹುದು. ಜೂನ್‌, ಜುಲೈನಲ್ಲಿ ಕಳೆದ ನವೆಂಬರ್‌, ಡಿಸೆಂಬರ್‌ನಲ್ಲಿದ್ದ ಸ್ಥಿತಿ ಇರಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

"

‘ಆದರೆ ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಮತ್ತೆ ಮೂರನೇ ಅಲೆ ಅಪ್ಪಳಿಸಲಿದೆ. ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣ ಕಡಿಮೆ ಆದರೂ ಕೂಡ ಜನರು ತಮ್ಮ ಕೋವಿಡ್‌ ಮುಂಜಾಗ್ರತಾ ವರ್ತನೆಗಳನ್ನು ಕೈ ಬಿಡಬಾರದು. ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ, ಕೈ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜನ ಸಂದಣಿ ಸೇರಬಾರದು’ ಎಂದು ಎಚ್ಚರಿಸಿದರು.

‘ಐಸಿಯು ಹಾಸಿಗೆ, ವೆಂಟಿಲೇಟರ್‌ ಸಂಖ್ಯೆಗಳನ್ನು ವಿಪರೀತ ಪ್ರಮಾಣದಲ್ಲಿ ಏರಿಸಿದರೂ ಅದನ್ನು ನಿರ್ವಹಿಸುವುದು ಕಷ್ಟವೇ. ಆದರೆ ಯೋಜಿತ ರೀತಿಯಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಏರಿಸಬೇಕು. ಲಸಿಕೆಯನ್ನು ಎಲ್ಲರೂ ಪಡೆಯಬೇಕು’ ಎಂದು ಡಾ.ಬಲ್ಲಾಳ್‌ ಸಲಹೆ ನೀಡಿದರು.

‘ಈ ಬಾರಿ ಸೋಕು ವ್ಯಾಪಕವಾಗಿ ಹಬ್ಬಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ. ಮೊದಲ ಅಲೆಯಲ್ಲಿ 100 ಸೋಂಕಿತರಲ್ಲಿ ಒಬ್ಬರು ಮರಣವನ್ನಪ್ಪುತ್ತಿದ್ದರು. ಎರಡನೇ ಅಲೆಯಲ್ಲಿ 200 ಸೋಂಕಿತರಲ್ಲಿ ಒಬ್ಬರು ಮೃತರಾಗುತ್ತಿದ್ದಾರೆ. ಈಗ 4 ಲಕ್ಷ ಮೀರಿ ಸಕ್ರಿಯ ಪ್ರಕರಣಗಳಿರುವುದು ಚಿಕಿತ್ಸಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ’ ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona