ಜಯಮಾಲಾ ವಾಟ್ಸಪ್ ಸಂದೇಶ ತಂದ ಮಂಗನ ಕಾಯಿಲೆ ಗಾಬರಿ!
ಜಿಲ್ಲೆಯಲ್ಲಿ ಮಂಗನ ಕಾಯಿಲೆ ಇಲ್ಲ ಎಂದು ಡಿಸಿ ಅಧಿಕೃತ ಪ್ರಕಟಣೆ ಹೊರಡಿಸಿದರೆ ಜಿಲ್ಲಾ ಉಸ್ತುವಾರಿ ಸಚಿವೆ ಹೊರಡಿಸಿದ ವಾಟ್ಸಪ್ ಸಂದೇಶದಲ್ಲಿ ಮಂಗನ ಕಾಯಿಲೆ ಇತ್ತು. ಈ ಗೊಂದಲ ಊರೆಲ್ಲ ಹಬ್ಬಿ ಅಧಿಕಾರಿಗಳು ಮತ್ತು ನಾಗರಿಕರು ಗಾಬರಿ ಬೀಳುವಂತಾಯಿತು.
ಉಡುಪಿ(ಜ.14] ಸೋಮವಾರ ಅತ್ತ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅವರು ಉಡುಪಿ ಜಿಲ್ಲೆಯಲ್ಲಿ ಯಾವುದೇ ಮಂಗನ ಕಾಯಿಲೆಯ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲೆಯ ಜನರಿಗೆ ಧೈರ್ಯ ತುಂಬುತಿದ್ದರೇ, ಇತ್ತ ಜಿಲ್ಲಾ ಉಸ್ತುವಾರಿ ಸಚಿವೆ ಅವರು ಬೆಂಗಳೂರಿನಿಂದ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ, ಜಿಲ್ಲೆಯ ಕುಂದಾಪುರದ ಹಳ್ಳಿಹೊಳೆ, ಶಿರೂರು, ಸಿದ್ಧಾಪುರ, ಹೊಸಂಗಡಿ ಮುಂತಾದ ಕಡೆಗಳಲ್ಲಿ ಮಂಗನಕಾಯಿಲೆ ಕಂಡು ಬಂದಿದೆ ಎಂದು ಹೇಳಿ ಗೊಂದಲಕ್ಕೆ ಕಾರಣರಾದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅವರ ಮಾಹಿತಿ ಮರುದಿನ ಪತ್ರಿಕೆಗಳಲ್ಲಿ ಮುದ್ರಣವಾಗಿ ಜನರಿಗೆ ತಲುಪುವುದಾದರೇ, ಸಚಿವೆ ಡಾ.ಜಯಮಾಲ ಅವರ ವಾಟ್ಸಾಪ್ ಸಂದೇಶ ಕೆಲವೇ ನಿಮಿಷಗಳಲ್ಲಿ ವಾಟ್ಸಾಪ್ ಮೂಲಕ ವೈರಲ್ ಆಗಿ, ಟೀಕೆಗೆ ಕಾರಣವಾಯಿತು.
ಇದನ್ನು ತಿಳಿದ ಸಚಿವೆ ಅವರ ಆಪ್ತ ಸಹಾಯಕರು ಜಿಲ್ಲೆಯಲ್ಲಿ ಮಂಗನಕಾಯಿಲೆ ಪತ್ತೆಯಾಗಿಲ್ಲ ಎಂದು ಬೇರೆ ಪ್ರಕಟಣೆಯಲ್ಲಿ ಕಳುಸಿದರಾದರೂ, ಅದಾಗಲೇ ಎಡವಟ್ಟಾಗಿ ಹೋಗಿತ್ತು.