ಕಾಂಗ್ರೆಸ್‌ನವರು ಇಷ್ಟು ವರ್ಷ ದೇಶವನ್ನು ಆಳಿದ್ದಾರೆ. ಹೀಗಾಗಿ ಅವರು ಎಲ್ಲವೂ ನಡೆಯುತ್ತದೆ ಅಂದುಕೊಂಡಿದ್ದರು. ಆದರೆ, ಇಂದು ಅಕ್ರಮಗಳ ತನಿಖೆ ನಡೆಯುತ್ತಿದೆ. ಏನು ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ತಪ್ಪು ಮಾಡದಿದ್ದರೆ ಹೆದರುವ ಅವಶ್ಯಕತೆ ಇರುವುದಿಲ್ಲ ಎಂದ ಶೆಟ್ಟರ್‌

ಧಾರವಾಡ(ನ.09): ಕಾಂಗ್ರೆಸಿಗೆ ಅಧೋಗತಿ ಆರಂಭವಾಗಿದ್ದು, ಉಪಚುನಾವಣೆಯಲ್ಲಿ ಸೋಲುವ ಹಂತದಲ್ಲಿದ್ದಾರೆ. ಹೀಗಾಗಿ ವಿನಯ್‌ ಕುಲಕರ್ಣಿ ಬಂಧನ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಅನ್ಯಾಯವಾಗಿದ್ದರೆ ಕೋರ್ಟ್‌ಗೆ ಹೋಗಲಿ, ಅದನ್ನು ಬಿಟ್ಟು ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸಚಿವ ಜಗದೀಶ ಶೆಟ್ಟರ್‌ ಕಿಡಿಕಾರಿದ್ದಾರೆ. 

Add Asianetnews Kannada as a Preferred SourcegooglePreferred

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡರಿಗೆ ಬೇರೆ ವಿಷಯಗಳಿಲ್ಲ. ಹೀಗಾಗಿ ಎಲ್ಲದರಲ್ಲೂ ರಾಜಕೀಯ ಹುಡುಕುವ ಅನಿವಾರ್ಯತೆಯಲ್ಲಿ ಇದ್ದಾರೆ. ಭ್ರಷ್ಟರ ಮನೆ ಮೇಲೆ ಸಿಬಿಐ, ಇಡಿ ದಾಳಿಯಾದರೆ ರಾಜಕೀಯ ಮಾಡುತ್ತಾರೆ. ಸಿದ್ದರಾಮಯ್ಯ ಅವರಿಗೆ ಮಾತನಾಡಲು, ವಿರೋಧಿಸಲು ಬೇರೆ ವಿಷಯಗಳಿಲ್ಲ. ಅವರು ಮುಖ್ಯಮಂತ್ರಿ ಆಗಿದ್ದವರು, ಜವಾಬ್ದಾರಿ ಸ್ಥಾನದಲ್ಲಿದ್ದವರು, ಯೋಚನೆ ಮಾಡಿ ಮಾತನಾಡಬೇಕು ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗುವುದು ಖಚಿತ. ಎಕ್ಸಿಟ್‌ ಪೋಲ್‌ಗಳಲ್ಲೂ ತಿಳಿದು ಬಂದಿದೆ. ಹೀಗಾಗಿಯೇ ಇಂಥ ಹೇಳಿಕೆ ನೀಡುತ್ತ ತಮ್ಮತನ ತೋರಿಸಿಕೊಳ್ಳುತ್ತಿದ್ದಾರೆ. ಸಿಬಿಐ, ಇಡಿ ಇಲಾಖೆಗಳು ಸರ್ಕಾರದ ಅಡಿಯಲ್ಲಿಯೇ ಕೆಲಸ ಮಾಡಬೇಕಲ್ಲವೇ? ಯುಪಿಎ ಸರ್ಕಾರದ ವೇಳೆಯಲ್ಲಿ ಜನಾರ್ದನ ರೆಡ್ಡಿ ಬಂಧನ ಆಗಿರಲಿಲ್ಲವೆ? ಅವರನ್ನು ಜೈಲಿನಲ್ಲಿ ಇಡಲಿಲ್ಲವೆ? ಆಗ ನಾವು ವಿರೋಧಿಸಿದ್ದೇವೆಯೇ ಎಂದು ಪ್ರಶ್ನಿಸಿದರು.

ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಪ್ಪುಗಳ ಸರಮಾಲೆ: ಇಕ್ಕಟ್ಟಿಗೆ ಸಿಲುಕಿದ ಕುಲಕರ್ಣಿ

ಕಾಂಗ್ರೆಸ್‌ನವರು ಇಷ್ಟು ವರ್ಷ ದೇಶವನ್ನು ಆಳಿದ್ದಾರೆ. ಹೀಗಾಗಿ ಅವರು ಎಲ್ಲವೂ ನಡೆಯುತ್ತದೆ ಅಂದುಕೊಂಡಿದ್ದರು. ಆದರೆ, ಇಂದು ಅಕ್ರಮಗಳ ತನಿಖೆ ನಡೆಯುತ್ತಿದೆ. ಏನು ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ತಪ್ಪು ಮಾಡದಿದ್ದರೆ ಹೆದರುವ ಅವಶ್ಯಕತೆ ಇರುವುದಿಲ್ಲ ಎಂದರು.

ಸ್ವಾಮೀಜಿಗಳ ಬೆಂಬಲ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿನಯ್‌ ಕುಲಕರ್ಣಿ ಅವರಿಗೆ ಸ್ವಾಮಿಗಳ ಬೆಂಬಲ ವಿಚಾರ ಗಮನಕ್ಕಿದೆ. ಆದರೆ, ಇಂಥ ಪ್ರಕರಣಗಳನ್ನು ಧರ್ಮಕ್ಕೆ, ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಹಾಗೆ ಮಾಡುವುದು ತಪ್ಪು. ಸಿಬಿಐ ತಪ್ಪು ಮಾಡಿದರೆ ಕೋರ್ಟ್‌ಗೆ ಹೋಗಲಿ ಎಂದರು.