ಸಿಎಂ ಬದಲಾವಣೆ ಕುರಿತು ವರಿಷ್ಠರ ಸಂದೇಶ?: ಸಚಿವ ಶೆಟ್ಟರ್ ಹೇಳಿದ್ದಿಷ್ಟು
* ವರಿಷ್ಠರ ತೀರ್ಮಾನ ಏನೋ ಗೊತ್ತಿಲ್ಲ: ಶೆಟ್ಟರ್
* ನನ್ನೊಂದಿಗೆ ಯಾರೂ ಚರ್ಚಿಸಿಲ್ಲ. ಕಾದು ನೋಡಬೇಕು
* ಕಟೀಲ ಅವರದೆನ್ನಲಾದ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ
ಹುಬ್ಬಳ್ಳಿ(ಜು.25): ಮುಖ್ಯಮಂತ್ರಿ ಬದಲಾವಣೆ ಕುರಿತು ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ತಮ್ಮೊಂದಿಗೆ ಯಾರೂ ಚರ್ಚಿಸಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವರಿಷ್ಠರು ಯಾವ ಸಂದೇಶ ಕೊಡುತ್ತಾರೋ, ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ? ಆ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನೊಂದಿಗೆ ಯಾರೂ ಚರ್ಚಿಸಿಲ್ಲ. ಕಾದು ನೋಡಬೇಕು ಎಂದು ನುಡಿದರು.
ತಾವು ಗುಜರಾತ್ ಹಾಗೂ ದೆಹಲಿಗೆ ಭೇಟಿ ನೀಡಿದ್ದು ವರಿಷ್ಠರನ್ನು ಭೇಟಿ ಮಾಡಲು ಅಲ್ಲ. ಇಲಾಖೆಯ ಕೆಲಸಗಳಿಗಾಗಿ ಹೋಗಿದ್ದೆ. ಗುಜರಾತ್ನಲ್ಲಿ ಮೂರು ದಿನ ಉಸಿರಾಡಲು ಪುರಸೊತ್ತು ಇಲ್ಲದಂತೆ ಅಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕೈಗಾರಿಕೆಗಳನ್ನು ಪರಿಶೀಲಿಸಿ ಬಂದಿದ್ದೇನೆ ಎಂದರು.
ಯಡಿಯೂರಪ್ಪ ಬಳಿಕ ಇವರೇ ಅಂತೆ ಮುಂದಿನ ಮುಖ್ಯಮಂತ್ರಿ..!
ದೆಹಲಿಗೆ ತೆರಳಿದ್ದು ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಪ್ರಥಮ ಅಧಿವೇಶನ ಇತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲು ತೆರಳಿದ್ದೆ. ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ರಕ್ಷಣಾ ಇಲಾಖೆಗೆ ಸಂಬಂಧಪಟ್ಟಂತೆ ಕೈಗಾರಿಕೆಗ ಳ ಕ್ಲಸ್ಟರ್ ಸ್ಥಾಪನೆ ಕುರಿತು ಚರ್ಚಿಸಿದೆ ಅಷ್ಟೆ. ಅವರನ್ನು ಬಿಟ್ಟರೆ ಯಾರನ್ನೂ ಭೇಟಿ ಮಾಡಿಲ್ಲ. ಭೇಟಿ ಮಾಡುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರದೆನ್ನಲಾದ ಆಡಿಯೋ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಟೀಲ ಅವರೇ ಆ ಆಡಿಯೋ ತನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನಿಖೆ ನಡೆಸುವಂತೆ ಸಿಎಂಗೆ ಪತ್ರ ಕೂಡ ಬರೆದಿರುವುದುಂಟು. ಹೀಗಾಗಿ ಆ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.