ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ|ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರದಿಂದ ಬಿಡುಗಡೆಯಾದ ಪರಿಹಾರ ನಿಧಿಯಲ್ಲಿ ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ| ಕೂಡಲೇ ಭ್ರಷ್ಟಾಚಾರದಲ್ಲಿ ಭಾಗಿಯಾದವರ ಮೇಲೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು| ಹಾವೇರಿ ಜಿಲ್ಲೆಯಲ್ಲಿ ಈ ಮೊದಲು ಕೊರೋನಾ ಸೊಂಕಿತರ ಪ್ರಮಾಣದ ಹೆಚ್ಚು ಕಂಡಬಂದರೂ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ|

ರಾಣಿಬೆನ್ನೂರು(ಜು.14): ಲಾಕ್‌ಡೌನ್‌ ಪರಿಹಾರ ನಿಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಭ್ರಷ್ಟಾಚಾರ ನಡೆಸಿದ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದು ಹಾಗೂ ಕೊರೋನಾ ತಡೆಗಟ್ಟಲು ವಿಫಲವಾದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್‌ ಬೊಮ್ಮಾಯಿ ರಾಜೀನಾಮೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರದ ಬಸ್‌ ನಿಲ್ದಾಣದ ಬಳಿ ಸೋಮವಾರ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಉಪತಹಸೀಲ್ದಾರ್‌ ಎಂ.ಎನ್‌. ಹಾನಿಮನಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

Add Asianetnews Kannada as a Preferred SourcegooglePreferred

ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರದಿಂದ ಬಿಡುಗಡೆಯಾದ ಪರಿಹಾರ ನಿಧಿಯಲ್ಲಿ ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು, ಕೂಡಲೇ ಭ್ರಷ್ಟಾಚಾರದಲ್ಲಿ ಭಾಗಿಯಾದವರ ಮೇಲೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಹಾವೇರಿ ಜಿಲ್ಲೆಯಲ್ಲಿ ಈ ಮೊದಲು ಕೊರೋನಾ ಸೊಂಕಿತರ ಪ್ರಮಾಣದ ಹೆಚ್ಚು ಕಂಡಬಂದರೂ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಸಮುದಾಯಕ್ಕೆ ಹರಡುವ ಮೊದಲೇ ಕ್ರಮಕೈಗೊಂಡರೆ ಇಷ್ಟುಸಮಸ್ಯೆಯಾಗುತ್ತಿರಲಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾ ಉಸ್ತುವಾರ ಸಚಿವರು ರಾಜೀನಾಮೆ ನೀಡಬೇಕು ಎಂದರು.

ಕರ್ನಾಟಕದ ಮತ್ತೋರ್ವ ಮಂತ್ರಿಗೆ ಕೊರೋನಾ ಭೀತಿ: ಇಡೀ ಕುಟುಂಬವೇ ಕ್ವಾರಂಟೈನ್​

ಲಾಕ್‌ಡೌನ್‌ ಹಾಗೂ ಇದುವರೆಗೂ ಸರಿಯಾಗಿ ಮಳೆ ಬಾರದೇ ಇರುವುದರಿಂದ ಕೃಷಿ ಇಲಾಖೆಯಿಂದ ನೀಡುವ ಸಬ್ಸಿಡಿ ಆಧಾರದಲ್ಲಿ ರೈತರಿಗೆ ವಿತರಿಸುವ ಬಿತ್ತನೆ ಬೀಜಗಳ ವಿತರಣೆ ದಿನಾಂಕವನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಹಸೀಲ್ದಾರ್‌ ಹತ್ಯೆ ಖಂಡನೀಯ. ಆದ್ದರಿಂದ ರಾಜ್ಯ ಎಲ್ಲ ತಹಸೀಲ್ದಾರರಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಿ, ಮೃತ ತಹಸೀಲ್ದಾರ್‌ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಸುರೇಶಪ್ಪ ಗರಡಿಮನಿ, ದಿಳ್ಳೆಪ್ಪ, ಜಯಣ್ಣ ಮಾಗನೂರ, ಶಂಭನಗೌಡ ಪಾಟೀಲ, ಹನುಮಂತಪ್ಪ ಕೂಸಗಟ್ಟಿ, ನಾಗರಾಜ ಸೂರ್ವೆ, ಯಲ್ಲಪ್ಪ ಡೊಂಬರ, ಜಮಾಲಸಾಬ ಶೇತಸನದಿ, ಹನುಮಂತಪ್ಪ ಹಾರೊಗೊಪ್ಪ, ಕೇಶಪ್ಪ ಹದಡಿ, ಪ್ರಭು ಹಳೆಮಾದರ, ಮಾರುತಿ ಕಬ್ಬಾರ ಸೇರಿದಂತೆ ಇತರರಿದ್ದರು.