ವಿಜಯನಗರ ಪ್ರತ್ಯೇಕ ಜಿಲ್ಲೆ ಕಂಪಲ್ಸರಿ ಆಗಬೇಕು|ಬಳ್ಳಾರಿ 250 ಕಿ.ಮಿ. ವ್ಯಾಪ್ತಿಯ ಅತಿ ದೊಡ್ಡ ಜಿಲ್ಲೆ|  ಸೋಮಶೇಖರ್‌ ರೆಡ್ಡಿ ಮನವೊಲಿಸಲು ಮುಂದಾದ ಮುಖ್ಯಮಂತ್ರಿ| ನಾನು ಸೋಮಶೇಖರ್‌ ರೆಡ್ಡಿ ಮನವೊಲಿಸುತ್ತೇನೆ ಎಂದ ರಾಮುಲು| 

ಮೈಸೂರು(ನ.27):  ನಾನು ಹಿನ್ನಡೆಯಾಗುತ್ತೆ ಎಂದು ಯಾವತ್ತೂ ರಾಜಕಾರಣ ಮಾಡಿದವನಲ್ಲ. ಇಂದಿಗೂ ನನ್ನ ಜೊತೆ ಹಲವಾರು ಶಾಸಕರು, ಸಮುದಾಯದ ಬೆಂಬಲ ಇದೆ. ಅಧಿಕಾರಕ್ಕೊಸ್ಕರ ರಾಜಕಾರಣ ಮಾಡುವವನು ನಾನಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ರಮೇಶ್‌ ಜಾರಕಿಹೊಳಿ ಜೊತೆ ಮಾತುಕತೆ ಬಗ್ಗೆ ಮೈಸೂರಿನಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು ಅವರು, ರಾಜಕೀಯವಾಗಿ ನಾನು ಯಾವುದೇ ಭೇಟಿ ಮಾಡಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿರೋನು. ನಾನು ತುಂಗಭದ್ರಾ ವ್ಯಾಪ್ತಿಯ ಏತ ನೀರಾವರಿ ಯೋಜನೆ ಸಂಬಂಧ ಭೇಟಿ ಕೊಟ್ಟಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. 

ರಮೇಶ್‌ ಜಾರಕಿಹೊಳಿ ಆಗಮನದಿಂದ ಶ್ರೀರಾಮುಲುಗೆ ಹಿನ್ನಡೆ ಎಂಬ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅಧಿಕಾರಕ್ಕೊಸ್ಕರ ರಾಜಕಾರಣ ಮಾಡುವವನು ಅಲ್ಲ. ಚಾಮರಾಜನಗರದಿಂದ ಬೀದರ್‌ವರೆಗೆ ಅದೇ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಆ ಕ್ರೆಡಿಬಿಲಿಟಿಯೇ ನನ್ನನ್ನ ಕೈ ಹಿಡಿಯುತ್ತೇ ಅನ್ನೋ ವಿಶ್ವಾಸವಿದೆ ಎಂದರು.

ಬಳ್ಳಾರಿ ಜಿಲ್ಲೆಯ ವಿಭಜನೆಗೆ ಹೆಚ್ಚಿದ ವಿರೋಧ

ವಿಜಯನಗರ ಪ್ರತ್ಯೇಕ ಜಿಲ್ಲೆ ಕಂಪಲ್ಸರಿ ಆಗಬೇಕು. ಬಳ್ಳಾರಿ 250 ಕಿ.ಮಿ. ವ್ಯಾಪ್ತಿಯ ಅತಿ ದೊಡ್ಡ ಜಿಲ್ಲೆ. ಬಹಳ ದಿನಗಳಿಂದ ಪ್ರತ್ಯೇಕ ಜಿಲ್ಲೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದು ನಾನು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಅಂತ ಹೇಳಿದ್ದೆ. ಈಗಾಗಲೇ ಸೋಮಶೇಖರ್‌ ರೆಡ್ಡಿಯನ್ನು ಮುಖ್ಯಮಂತ್ರಿ ಮನವೊಲಿಸಲು ಮುಂದಾಗಿದ್ದಾರೆ. ನಾನು ಸೋಮಶೇಖರ್‌ ರೆಡ್ಡಿ ಮನವೊಲಿಸುತ್ತೇನೆ ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರದಲ್ಲಿ ಮುಖ್ಯಮಂತ್ರಿ ನಿರ್ಧಾರ ಸರಿಯಾಗಿಯೇ ಇದೆ. ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆ ಮಾಡಲಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಮುಖ್ಯಮಂತ್ರಿ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರುವುದಾಗಿ ಹೇಳಿದ್ದೇವೆ. ಬಂದ್‌ ಮಾಡುವವರಿಗೆ ವಿನಂತಿ, ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲರೂ ಸಹಕರಿಸಬೇಕು ಎಂದು ಅವರು ಕೋರಿದರು.

ಬಿಜೆಪಿಯಲ್ಲಿ ಮೂಲ, ವಲಸಿಗ ಎಂಬ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿಯೇ ಒಂದು ಎಂದು ತಿಳಿಕೊಂಡಿದ್ದೇನೆ. ಸರ್ಕಾರ ಬಂದ ಮೇಲೆ ಬಿಜೆಪಿಯಲ್ಲಿ ನಿಂತು ಗೆದ್ದಿದ್ದಾರೆ. ಆದರೆ ಐದಾರು ಬಾರಿ ಗೆದ್ದಿರುವ ಕೆಲವರಿಗೆ ಅವಕಾಶ ಸಿಗಬೇಕು. ಐದಾರು ಬಾರಿ ಗೆದ್ದಿರುವ ಯಾರ್ಯಾರು ಆಕಾಂಕ್ಷಿಗಳಿದ್ದಾರೋ ಅವರಿಗೆ ಆದ್ಯತೆ ನೀಡುವಂತೆ ಮುಖ್ಯನಮಂತ್ರಿಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಮುಖಂಡರ ಕಣ್ಣು ಕೆಂಪಾಗಿಸಿದ ಯಡಿಯೂರಪ್ಪ ನಡೆ..!

ಯಾವುದೇ ರಾಜಕೀಯ ಸ್ವಾರ್ಥ ಇಲ್ಲ

ನಾವು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿಲ್ಲ. ಆ ಜಾತಿಯ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿದ್ದೇವೆ. ದೇಶಕ್ಕಾಗಿ ಹೋರಾಡಿದ ಕ್ಷತ್ರಿಯ ಸಮುದಾಯದ ಅದು. ಬೆಳಗಾವಿ, ಬೀದರ್‌ ಭಾಗದಲ್ಲಿ ಆ ಸಮುದಾಯದಲ್ಲಿ ಬಡತನ ಇದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಸ್ವಾರ್ಥ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶ್ರೀರಾಮುಲು ಮೌನ

ಸಚಿವ ಸಂಪುಟ ವಿಸ್ತರಣೆ ವಿಚಾರ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಸಂಬಂಧ ಸುದ್ದಿಗಾರರ ಪ್ರಶ್ನೆಗಳಿಗೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಮೌನಕ್ಕೆ ಶರಣಾದರು. ಈ ಬಗ್ಗೆ ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಹೈಕಮಾಂಡ್‌ ಮುಖ್ಯಮಂತ್ರಿಗಳಿಗೆ ಸೂಚನೆ ನೀಡುತ್ತಾರೆ. ಅದನ್ನ ಬಿಟ್ಟು ನನಗೇನು ಗೊತ್ತಿಲ್ಲ ಎಂದರು. ಡಿಸಿಎಂ ಸ್ಥಾನ ಸಂಬಂಧ ಪ್ರಶ್ನೆಗೂ ಶ್ರೀರಾಮುಲು ಉತ್ತರಿಸಲಿಲ್ಲ.