ಅಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ದೇಶ ಸ್ವಾತಂತ್ರ್ಯಗೊಂಡ 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಿಂಚೇರಿ ಗುಡ್ಡದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಸಚಿವ ಬಿ.ಶ್ರೀರಾಮುಲು ಅವರು ನೆರವೇರಿಸಿದರು. 

ವರದಿ: ನರಸಿಂಹ ಮೂರ್ತಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಳ್ಳಾರಿ

Add Asianetnews Kannada as a Preferred SourcegooglePreferred

ಬಳ್ಳಾರಿ (ಆ.14): ಅಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ದೇಶ ಸ್ವಾತಂತ್ರ್ಯಗೊಂಡ 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಿಂಚೇರಿ ಗುಡ್ಡದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಸಚಿವ ಬಿ.ಶ್ರೀರಾಮುಲು ಅವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ 60ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾದ ಬ್ರಿಟಿಷ್ ಜಡ್ಜ್ ಬಂಗ್ಲೆಯನ್ನು ಸಹ ಅವರು ಉದ್ಘಾಟಿಸಿದರು.

ಐತಿಹಾಸಿಕ ಸ್ಮಾರಕ ರಕ್ಷಣೆ ಮಾಡ್ತೇವೆ: ಐತಿಹಾಸಿಕ ಕುರುಹುಳ್ಳ, ಹಚ್ಚ/ಹಸಿರಿನ ಸುಂದರ ತಾಣವಾಗಿರುವ ಬಳ್ಳಾರಿ ತಾಲೂಕಿನ ಮಿಂಚೇರಿ ಬೆಟ್ಟವನ್ನು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶ್ರೀರಾಮುಲು ಹೇಳಿದರು. ಮಿಂಚೇರಿ ಬೆಟ್ಟದಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಉಪಹಾರದ ವ್ಯವಸ್ಥೆ, ತಂಗುವಿಕೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಂದಾಜುಪಟ್ಟಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸಿ ಸ್ಥಳಗಳನ್ನು ಗುರುತಿಸುವ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ ಎಂದರು.

ಧ್ವಜದ ಮಧ್ಯೆ ಜೀಸೆಸ್ ಸ್ಟಿಕ್ಕರ್, ಹಿಂದೂ ಪರ ಕಾರ್ಯಕರ್ತರಿಂದ ಆಕ್ರೋಶ

ವೈಟ್ ಹೌಸ್ ನಂತಿರೋ ಬಂಗಲೆ: ಬಳ್ಳಾರಿ ವೈಟ್‍ಹೌಸ್‍ನಂತಿರುವ ನವೀಕೃತ ಬ್ರೀಟಿಷ್ ಜಡ್ಜ್ ಬಂಗ್ಲೆಗೆ ಹಾಗೂ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಮಿಂಚೇರಿಬೆಟ್ಟಕ್ಕೆ ಟ್ರಕ್ಕಿಂಗ್ ‌ಮೂಲಕ‌ ನೂರಾರು ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಭೇಟಿ ನೀಡಿರೋದು ವಿಶೇಷವಾಗಿತ್ತು. ಬ್ರಿಟಿಷ್ ಜಡ್ಜ್ ಬಂಗ್ಲೆಗೆ ಅಮೃತಮಹಲ್ ಎಂದು ನಾಮಕರಣ ಮಾಡುವ ನಿಟ್ಟಿನಲ್ಲಿ ಪ್ರಸ್ತಾವನೆ ಕಳುಹಿಸಿದ್ದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಕ್ರಮವಹಿಸುವುದಾಗಿ ಶ್ರೀರಾಮುಲು ಭರವಸೆ ನೀಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹನೀಯರು ನಡೆಸಿದ ಹೋರಾಟ, ತ್ಯಾಗ, ಬಲಿದಾನಗಳು ಅಪಾರವಾಗಿದ್ದು, ಏನೇ ಸಾಧಿಸಬೇಕಾದರೂ ಶ್ರಮವಹಿಸಬೇಕಾಗುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಮಹನೀಯರ ಕುರಿತು ಸ್ಮರಿಸಿಕೊಳ್ಳುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ ಮತ್ತು ಯುವಜನರು ಇತಿಹಾಸವನ್ನು ತಿಳಿದುಕೊಳ್ಳಬೇಕಿದೆ ಎಂದರು.

ಸಾರಿಗೆ ಇಲಾಖೆಯಿಂದ ಹೊಸ 600 ಬಸ್‌ಗಳ ಸಂಚಾರ ಶುರು: ಸಚಿವ ಶ್ರೀರಾಮುಲು

ಬ್ರಿಟಿಷ್ ಬಂಗಲೇಯೇ ಐತಿಹಾಸಿಕ ಸ್ಮಾರಕ: ಮಿಂಚೇರಿ ಗುಡ್ಡದಲ್ಲಿ ದೇಶ ಸ್ವತಂತ್ರಗೊಂಡ ನಂತರ ನಡೆಯುತ್ತಿರುವ ಮೊದಲ ಧ್ವಜಾರೋಹಣ ಇದಾಗಿದೆ. ಬ್ರೀಟಿಷರು ಜಡ್ಜ್ ಬಂಗ್ಲೆಯನ್ನು 1894ರ ಅವಧಿಯಲ್ಲಿ ನಿರ್ಮಿಸಿದ್ದರು. ಸ್ವಾತಂತ್ರ್ಯ ನಂತರ ಅದನ್ನು ರೆಂಜ್ ಫಾರೆಸ್ಟ್ ಆಫೀಸರ್ ವಸತಿ ಗೃಹವನ್ನಾಗಿ ಮಾಡಲಾಗಿತ್ತು. 2015ರಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವಿಶೇಷ ಮುತುವರ್ಜಿಯ ಫಲವಾಗಿ ಮೂಲಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ನವೀಕರಣ ಕೆಲಸ ಆರಂಭಿಸಿ ಪೂರ್ಣಗೊಳಿಸಲಾಗಿದೆ‌ ಎಂದು ಜಿಲ್ಲಾ ಉಪಅರಣ್ಯ ಸಂರಕ್ಷಾಣಾಧಿಕಾರಿಗಳಾದ ಸಂದೀಪ್ ಸೂರ್ಯವಂಶಿ ಹೇಳಿದರು. ಪ್ರವಾಸೋದ್ಯಮ, ಪ್ರವಾಸೋದ್ಯಮಕ್ಕೆ ಉತ್ತೇಜನ, ಮ್ಯೂಸಿಯಂ ಸೇರಿದಂತೆ ಇನ್ನೀತರ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು,2-3 ತಿಂಗಳಲ್ಲಿ ಅನುಷ್ಠಾನಗೊಳ್ಳಲಿವೆ ಎಂದರು.