ಭಾರತ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಇದು ಸಂಕೇತವಾಗಿದೆ. ನಮ್ಮದು ಸ್ವತಂತ್ರ್ಯ ರಾಷ್ಟ್ರ. ಏನು ಮಾಡಬೇಕು ಎಲ್ಲಿ ಖರೀದಿ ಮಾಡಬೇಕು ಎಂಬುದನ್ನು ಅಮೆರಿಕ ಬಳಿ ಅಡವಿಟ್ಟಿದ್ದರೆ ಇದು ದೌರ್ಭಾಗ್ಯ ಎಂದು ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರ (ಮೇ.17): ಭಾರತ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಇದು ಸಂಕೇತವಾಗಿದೆ. ನಮ್ಮದು ಸ್ವತಂತ್ರ್ಯ ರಾಷ್ಟ್ರ. ಏನು ಮಾಡಬೇಕು ಎಲ್ಲಿ ಖರೀದಿ ಮಾಡಬೇಕು ಎಂಬುದನ್ನು ಅಮೆರಿಕ ಬಳಿ ಅಡವಿಟ್ಟಿದ್ದರೆ ಇದು ದೌರ್ಭಾಗ್ಯ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

Add Asianetnews Kannada as a Preferred SourcegooglePreferred

ರಷ್ಯಾದಿಂದ ತೈಲ ಖರೀದಿಗೆ ಅಮೆರಿಕಾದ ಒಪ್ಪಿಗೆ ಕೇಳುತ್ತಿರುವ ಪಿಎಂ ಮೋದಿ ಎಂಬ ಆರೋಪದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುರಿತು ಇದೇ ಮೋದಿ ಅವರು ಸಿಎಂ ಆಗಿದ್ದಾಗ ಟೀಕೆ ಮಾಡುತ್ತಿದ್ದರು. ನೆಹರು, ಇಂದಿರಾ, ನರಸಿಂಹರಾಯರು ಮನಮೋಹನಸಿಂಗ್ ಅವರು ಭಾರತಕ್ಕೆ ಉತ್ತಮ ಆರ್ಥಿಕ ವ್ಯವಸ್ಥೆ ಮಾಡಿದ್ದರು. ಕಚ್ಚಾ ತೈಲದ ದರ ಏರಿದಾಗ ತೈಲ ಬೆಲೆ ಏರಬೇಕು, ಕಡಿಮೆಯಾದಾಗ ದರ ಇಳಿಯಬೇಕು. ಆದರೆ, ಬಿಜೆಪಿ ಕಾಲದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಿದ್ದಾಗ ತೈಲ ಬೆಲೆ ಏರಿಕೆಯಾಗಿದ್ದು ಯಾಕೆ? ಇವರು ಹಿಂದು ಮುಸಲ್ಮಾನ ಎಂದು ಮಾತನಾಡಿ ಬಾರಾಖೂನ್ ಮಾಫ್ ಮಾಡಿಕೊಂಡು ಹೊರಟಿದ್ದಾರೆ ಎಂದು ದೂರಿದರು.

ತೈಲಗಳ ಟ್ಯಾಕ್ಸ್‌ ಅನ್ನು ಕೇಂದ್ರ ಕಡಿಮೆ ಮಾಡಿದೆ. ರಾಜ್ಯ ಸರ್ಕಾರವೂ ಕಡಿಮೆ ಮಾಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಚ್ಚಾತೈಲ ಬೆಲೆ ಕಡಿಮೆಯಿದ್ದಾಗ ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆ ಮಾಡಿಲ್ಲ. ಲಕ್ಷಾಂತರ ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ₹56 ಲಕ್ಷ ಕೋಟಿ ಹಣ ದರ ಏರಿಕೆಯಿಂದ ಗಳಿಸಿದ್ದಾರೆಂದು ಸುರ್ಜೆವಾಲಾ ಹೇಳಿದ್ದಾರೆ. ಆ ಹಣ ಜನೋಪಯೋಗಿ ಕೆಲಸಕ್ಕೆ ಬಳಕೆ ಮಾಡಿದ್ದಾರಾ? ಪಾಕಿಸ್ತಾನ ಬಾಂಗ್ಲಾದೇಶ ಬರ್ಮಾದಲ್ಲಿ ತೈಲ ಬೆಲೆ ಕಡಿಮೆ ಇದ್ದಾಗ ನಮ್ಮಲ್ಲಿ ದರ ಹೆಚ್ಚಿತ್ತು. ಭಾರತದ ಜಿಡಿಪಿ ದರಕ್ಕಿಂತ ಬಾಂಗ್ಲಾದೇಶದ ಜಿಡಿಪಿ ದರ ಉತ್ತಮವಾಗಿದೆ. ನಾವೆಲ್ಲ ಅವರಿಗಿಂತ ಕಡೆಯಾಗಿದ್ದೇವೆ.

ಜನರನ್ನು ಮರಳು ಮಾಡುತ್ತಿದ್ದಾರೆ. ಕರೋನಾ ಬಂದಾಗ ತಮಟೆ ಬಡೆಯೋದಕ್ಕೆ ಹಚ್ಚಿದ್ದರು. ಮೇಲಾಗಿ ಮೋದಿ ಅವರು ವಿಶ್ವಗುರು ಎಂದು ಲೇವಡಿ ಮಾಡಿದರು. ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ, ಬೇರೆಯದ್ದೇ ಮಾಡುತ್ತಾರೆ. ಪಶ್ಚಿಮ ಬಂಗಾಳ, ಅಸ್ಸಾಂ ಸಿಎಂ ಬಗ್ಗೆ ಮೋದಿ ಹಿಂದೆ ಏನೆಲ್ಲಾ ಮಾತನಾಡಿದ್ದರು. ಅಶೊಕ ಚವ್ಹಾಣ, ಅಜೀತ್ ಪವಾರ ಬಗ್ಗೆ ಮೋದಿ ಏನೆಲ್ಲಾ ಮಾತನಾಡಿದ್ದರು. ಎಲ್ಲವನ್ನು ವಾಷಿಂಗ್ ಮಷೀನ್ ನಲ್ಲಿ ಹಾಕಿ ಶುಭ್ರ ಮಾಡುತ್ತಾರೆಂದು ಟಾಂಗ್ ಕೊಟ್ಟರು.

ಇರಾನ್ ಜೊತೆಗೆ ನಮ್ಮ ಸಾಮ್ಯತೆಯಿತ್ತು

ಮನಮೋಹನಸಿಂಗ್ ಪ್ರಧಾನಿ ಇದ್ದಾಗ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ಪೆಟ್ರೋಲ್, ಡಿಸೇಲ್, ಅನಿಲ ಸಿಲೆಂಡರ್ ಹಾಗೂ ಅಡುಗೆ ಎಣ್ಣೆ ದರ ಕಡಿಮೆಯಿದ್ದವು. ಮೋದಿ ಅವರ ಅಧಿಕಾರದಲ್ಲಿ ಎಲ್ಲ ದರಗಳು ಏರಿಕೆಯಾಗಿವೆ. ಈಗ ಯುದ್ಧದ ನೆಪವಿದೆ, ಆದರೆ, ಯುದ್ದ ಆರಂಭವಾಗದ ಮುಂಚೆಯೇ ದರ ಏರಿಕೆಯಾಗಿದೆ. ವಿದೇಶಾಂಗ ನೀತಿ, ಮೋದಿ ಅವರ ವೈಯುಕ್ತಿಕ ನೀತಿಯಾಗಿದೆ. ನೆಹರು ಕಾಲದಿಂದ ವಾಜಪೇಯಿ ಅವರ ಕಾಲದ ವರೆಗೆ ಪ್ಯಾಲಿಸ್ತೇನ್, ಇರಾನ್ ಜೊತೆಗೆ ನಮ್ಮ ಸಾಮ್ಯತೆಯಿತ್ತು. ಪ್ರಧಾನಿ ಯಾವುದಾದರೂ ದೇಶಕ್ಕೆ ಹೋಗಿ ಏನೆನೋ ಮಾತನಾಡುತ್ತಾರೆ. ಮೋದಿ ಫಾದರ್ ಲ್ಯಾಂಡ್, ಮದರ್ ಲ್ಯಾಂಡ್ ಎಂದೆಲ್ಲ ಮಾತಾಡಿದರು. ಇರಾನ್ ಭಾರತ ಕುರಿತು ಗೌರವ ನೀಡಿದೆ. ಭಾರತದ ಬಗ್ಗೆ ಅಮೇರಿಕಾ ಮಾತನಾಡಿದಾಗ ಇರಾನ್ ಭಾರತದ ಪರ ಗೌರವದ ಮಾತನಾಡಿದೆ. ಇದೆಲ್ಲಾ ಮೋದಿ ಅವರಿಗೆ, ಅವರ ಅಂಧ ಭಕ್ತರಿಗೆ ಯಾವಾಗ ಗೊತ್ತಾಗುತ್ತದೆಯೋ ಎಂದು ಎಂ.ಬಿ.ಪಾಟೀಲ ಹೇಳಿದರು.