Asianet Suvarna News Asianet Suvarna News

ಸುವರ್ಣ ನ್ಯೂಸ್‌ ಬಿಗ್‌ ಇಂಪ್ಯಾಕ್ಟ್‌: ಸೌದಿ ಜೈಲಿಂದ ಬಿಡುಗಡೆ, ಕುಟುಂಬ ಕಂಡು ಕಣ್ಣೀರಿಟ್ಟ ಯುವಕ..!

ರಿಯಾದ್ ನಿಂದ ಮುಂಬೈ ಮೂಲಕ ಮಂಗಳೂರು ಏರ್ಪೋರ್ಟ್ ಗೆ ಆಗಮಿಸಿದ ಮಗನ ಕಂಡು ತಾಯಿ ಹೇಮಾವತಿ ಕಣ್ಣೀರಾಗಿದ್ದು, ಮಗನ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಸಹೋದರನ ಬಂಧಮುಕ್ತಗೊಳಿಸಲು ಹೋರಾಡಿದ ಅಣ್ಣ ಹರೀಶ್ ಕೂಡ ಭಾವುಕರಾಗಿದ್ದಾರೆ. ಭಾವನಾತ್ಮಕ ಸನ್ನಿವೇಶಕ್ಕೆ ಮಂಗಳೂರು ಏರ್ಪೋರ್ಟ್ ಸಾಕ್ಷಿಯಾಯಿತು. 

Mangaluru Origin Young Man Came to Karnataka after Released from Saudi Arabia Prison grg
Author
First Published Nov 21, 2023, 2:00 AM IST

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್. ಮಂಗಳೂರು

ಮಂಗಳೂರು(ನ.21):  ಆತ ಮಾಡದ ತಪ್ಪಿಗೆ ಬರೋಬ್ಬರಿ ಹನ್ನೊಂದು ತಿಂಗಳುಗಳ ಕಾಲ ವಿದೇಶದಲ್ಲಿ ಜೈಲುವಾಸ ಅನುಭವಿಸಿದ್ದ. ಹ್ಯಾಕರ್ ಗಳ ಕೈಗೆ ಸಿಲುಕಿ ಆ ಅಮಾಯಕ ಅಕ್ಷರಶಃ ಗಲ್ಫ್ ನೆಲದಲ್ಲಿ ನಲುಗಿ ಹೋಗಿದ್ದ. ಕೊನೆಗೂ ಆತ ಬಂಧ ಮುಕ್ತಿಗೊಂಡಿದ್ದು, ತಾಯ್ನಾಡಿಗೆ ಕಾಲಿಟ್ಟ ಆ ಯುವಕ ಕುಟುಂಬವನ್ನು ಕಂಡು ಕಣ್ಣೀರಾಗಿದ್ದಾನೆ. ತನ್ನ ಬಿಡುಗಡೆಗೆ ನೆರವಾದ ಏಷ್ಯಾನೆಟ್ ಸುವರ್ಣ ನ್ಯೂಸ್ ಗೂ ಧನ್ಯವಾದ ಸಲ್ಲಿಸಿದ್ದಾನೆ.

ದೂರದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಬ್ಯಾಂಕ್ ಖಾತೆ ಹ್ಯಾಕರ್ ಗಳ ಸುಳಿಗೆ ಸಿಲುಕಿ ಜೈಲುಪಾಲಾಗಿದ್ದ ದ‌‌.ಕ ಜಿಲ್ಲೆಯ ಕಡಬದ ಯುವಕ ಚಂದ್ರಶೇಖರ್ ಕೊನೆಗೂ ಬಂಧಮುಕ್ತಗೊಂಡಿದ್ದಾನೆ. ಬರೋಬ್ಬರಿ 11 ತಿಂಗಳ ಬಳಿಕ ರಿಯಾದ್ ಜೈಲಿನಿಂದ ಬಂಧ ಮುಕ್ತರಾದ ಚಂದ್ರಶೇಖರ್ ನಿನ್ನೆ(ಸೋಮವಾರ) ತಾಯ್ನಾಡಿಗೆ ಆಗಮಿಸಿದ್ದು, ರಾತ್ರಿ ವೇಳೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. 

ಭಜರಂಗದಳದವರು ರೌಡಿಗಳಾಗಿದ್ದು ದೇಶ, ಧರ್ಮಕ್ಕೋಸ್ಕರ: ಸುನೀಲ್ ಕೆ.ಆರ್

ರಿಯಾದ್ ನಿಂದ ಮುಂಬೈ ಮೂಲಕ ಮಂಗಳೂರು ಏರ್ಪೋರ್ಟ್ ಗೆ ಆಗಮಿಸಿದ ಮಗನ ಕಂಡು ತಾಯಿ ಹೇಮಾವತಿ ಕಣ್ಣೀರಾಗಿದ್ದು, ಮಗನ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಸಹೋದರನ ಬಂಧಮುಕ್ತಗೊಳಿಸಲು ಹೋರಾಡಿದ ಅಣ್ಣ ಹರೀಶ್ ಕೂಡ ಭಾವುಕರಾಗಿದ್ದಾರೆ. ಭಾವನಾತ್ಮಕ ಸನ್ನಿವೇಶಕ್ಕೆ ಮಂಗಳೂರು ಏರ್ಪೋರ್ಟ್ ಸಾಕ್ಷಿಯಾಯಿತು. ವರ್ಷದ ಬಳಿಕ ತಾಯ್ನಾಡಿಗೆ ಕಾಲಿಟ್ಟು ಚಂದ್ರಶೇಖರ್ ಕೂಡ ಭಾವುಕರಾಗಿದ್ದಾರೆ. ನೆರವಿಗೆ ಬಂದ ಹಲವರನ್ನ ನೆನೆದು ಕಣ್ಣೀರು ಹಾಕಿದ ಚಂದ್ರಶೇಖರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಧನ್ಯವಾದ ಸಲ್ಲಿಸಿದ್ದಾರೆ. 

ನಿಮ್ಮಿಂದಾಗಿ ಅಲ್ಲಿದ್ದವರು ನನ್ನ ನೆರವಿಗೆ ಬಂದರು. ಸುವರ್ಣ ನ್ಯೂಸ್ ನಲ್ಲಿ ವರದಿ ಬಂದಿದೆ ಅಂತ ಕೆಲವರು ಬಂದು ಹೇಳಿದ್ರು. ನನಗೆ ಗೊತ್ತೇ ಇರಲಿಲ್ಲ, ಫಸ್ಟ್ ಟೈಂ ಸುವರ್ಣ ನ್ಯೂಸ್ ನಲ್ಲಿ ಬಂದಿದೆ ಅಂತ ಹೇಳಿದ್ರು. ರಾತ್ರಿ ಊಟ ಮಾಡ್ತಿದ್ದಾಗ ಜೈಲಿನಲ್ಲಿ ಒಬ್ಬರು ಮಂಗಳೂರಿನವರು ನೋಡಲು ಬಂದಿದ್ರು. ಅವರು ಸುವರ್ಣ ನ್ಯೂಸ್ ನಲ್ಲಿ ನನ್ನ ಬಗ್ಗೆ ವರದಿ ಬಂದಿದ್ದಾಗಿ ಹೇಳಿದ್ರು. ಆಗ ನನಗೆ ಶಾಕ್ ಆಯ್ತು, ಸುವರ್ಣ ನ್ಯೂಸ್ ನಲ್ಲಿ ನನ್ನ ಬಗ್ಗೆ ಹೇಗೆ ಬಂತು ಅಂತ. ಒಂದು ವಾರ ಬಿಟ್ಟು ಮತ್ತೊಬ್ಬರು ಬಂದವರೂ ಸುವರ್ಣ ನ್ಯೂಸ್ ಬಗ್ಗೆ ಹೇಳಿದ್ರು. ಆಗ ಅಮ್ಮನಿಗೆ ಗೊತ್ತಾದ್ರೆ ಆತಂಕ ಪಡ್ತಾರೆ ಅಂತ ಹೇಳಿದೆ,. ಆಗ ಅವರು ಎಲ್ಲರಿಗೂ ಗೊತ್ತಾಗಿದೆ, ಸಮಸ್ಯೆ ಸರಿಯಾಗುತ್ತೆ ಅಂದ್ರು. ಸುವರ್ಣ ನ್ಯೂಸ್ ಗೆ ತುಂಬಾ ಧನ್ಯವಾದಗಳು ಎಂದರು. 

ದ.ಕ ಜಿಲ್ಲೆಯ ಕಡಬ ತಾಲೂಕಿನ ಐತ್ತೂರಿನ ಚಂದ್ರಶೇಖರ್ ಜೈಲುವಾಸದ ಬಗ್ಗೆ ಅಗಸ್ಟ್ 21 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3ಯಲ್ಲಿ ವರದಿ ಪ್ರಸಾರವಾಗಿತ್ತು. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದ ಚಂದ್ರಶೇಖರ್ ಬಗ್ಗೆ ವರದಿ ಮಾಡಲಾಗಿತ್ತು. 2022ರ ನವೆಂಬರ್ ನಿಂದ ರಿಯಾದ್ ನ ಜೈಲಿನಲ್ಲಿ ಬಂಧಿಯಾಗಿರೋ ಚಂದ್ರಶೇಖರ್, ಕಳೆದ ಜುಲೈನಲ್ಲಿ ಆರು ತಿಂಗಳ ಶಿಕ್ಷೆ ಅವಧಿ ಮುಗಿದಿದ್ದರೂ ಮತ್ತೆ ಎರಡು ವರ್ಷ ವಿಸ್ತರಣೆಯಾಗಿದ್ದ ಜೈಲು ಶಿಕ್ಷೆಗೆ ಸಿಲುಕಿದ್ದರು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಯುವಕನ ಸಂಕಷ್ಟದ ಬಗ್ಗೆ ಬೆಳಕು ಚೆಲ್ಲಿತ್ತು. ಬಳಿಕ ಸೌದಿಯಲ್ಲಿದ್ದ ಕರಾವಳಿಯ ಅನೇಕರು ಯುವಕನ ನೆರವಿಗೆ ಬಂದಿದ್ದರು. 

ಎರಡು ವರ್ಷ ಶಿಕ್ಷೆಯ ಬದಲಾಗಿ ದಂಡ ಪಾವತಿಗೆ ಸಿದ್ದತೆ ನಡೆಸಿದ್ದರು‌. ಅದರಂತೆ ಸುಮಾರು 4-5 ಲಕ್ಷ ರೂ. ದಂಡ ಪಾವತಿಸಿ ಕೊನೆಗೂ ಚಂದ್ರಶೇಖರ್ ರಿಲೀಸ್ ಆಗಿತ್ತು. ಎಂಟು ವರ್ಷಗಳಿಂದ ಸೌದಿಯ ರಿಯಾದ್ ನ ಅಲ್ಫಾನರ್ ಸೆರಾಮಿಕ್ಸ್ ಕಂಪೆನಿಯಲ್ಲಿ ಅವರು ಉದ್ಯೋಗಿಯಾಗಿದ್ದರು‌. ಮಹಿಳೆಯೊಬ್ಬರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಚಂದ್ರಶೇಖರ್ ಬ್ಯಾಂಕ್ ಖಾತೆಗೆ 40 ಲಕ್ಷ ಹಣ ವರ್ಗಾವಣೆಯಾಗಿತ್ತು. ಹ್ಯಾಕ್ ಮಾಡಿ ಚಂದ್ರಶೇಖರ್ ಹಣ ಲಪಟಾಯಿಸಿದ್ದಾರೆ ಅನ್ನೋ ಆರೋಪದ ಮೇಲೆ ಜೈಲು ಸೇರಿದ್ದರು. ಆಕೆ ನೀಡಿದ್ದ ದೂರಿನಂತೆ ರಿಯಾದ್ ಪೊಲೀಸರು ಚಂದ್ರಶೇಖರ್ ನನ್ನು ಬಂಧಿಸಿದ್ದರು. ಆದರೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಳಿ ಅಲ್ಪಾನರ್ ಸೆರಾಮಿಕ್ಸ್ ಕಂಪೆನಿ ಕೂಡ ನೆರವಿಗೆ ಬಂದಿತ್ತು. 

ಕಳೆದ ಅಗಸ್ಟ್ ನಿಂದ ಆರಂಭವಾಗಿದ್ದ ಚಂದ್ರಶೇಖರ್ ಬಿಡುಗಡೆ ಪ್ರಕ್ರಿಯೆ, ಕೊನೆಗೆ ದಂಡ ಪಾವತಿಸಿದ ಕರಾವಳಿ ಮೂಲದ ಕನ್ನಡಿಗರ ಮೂಲಕ ಇದೀಗ ಎರಡು ವರ್ಷದ ಹೆಚ್ಚುವರಿ ಶಿಕ್ಷೆಯಿಂದ ಪಾರಾಗಿ ಚಂದ್ರಶೇಖರ್ ಮಂಗಳೂರಿಗೆ ಮರಳಿದ್ದಾರೆ. ಚಂದ್ರಶೇಖರ್ ಮರಳಿದ್ದಕ್ಕೆ ಸಹೋದರ ಹರೀಶ್ ಮತ್ತು‌ ಗೆಳೆಯರು ಸಂತಸ ವ್ಯಕ್ತಪಡಿಸಿದ್ದು, ಜೊತೆ ನಿಂತ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. 

'ಸುವರ್ಣ ನ್ಯೂಸ್ ನಲ್ಲಿ ನನ್ನ ಬಗ್ಗೆ ಹೇಗೆ ಬಂತು ಅಂತ ಶಾಕ್ ಆಯ್ತು'

ಸುವರ್ಣ ನ್ಯೂಸ್ ಗೆ ತುಂಬಾ ಧನ್ಯವಾದಗಳು, ನಿಮ್ಮಿಂದಾಗಿ‌ ನಾನು ಊರಿಗೆ ಬಂದೆ...ಇದು ಸೌದಿಯಲ್ಲಿ ಜೈಲು ಪಾಲಾಗಿ ಬಂಧಮುಕ್ತವಾದ ಕಡಬದ ಚಂದ್ರಶೇಖರ್ ಭಾವುಕ ನುಡಿ. ಮಂಗಳೂರು ಏರ್ಪೋರ್ಟ್ ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಧನ್ಯವಾದ ಸಲ್ಲಿಸಿ ಚಂದ್ರಶೇಖರ್ ಮಾತನಾಡಿದರು. ನಿಮ್ಮಿಂದಾಗಿ ಅಲ್ಲಿದ್ದವರು ನನ್ನ ನೆರವಿಗೆ ಬಂದರು. ಸುವರ್ಣ ನ್ಯೂಸ್ ನಲ್ಲಿ ವರದಿ ಬಂದಿದೆ ಅಂತ ಕೆಲವರು ಬಂದು ಹೇಳಿದ್ರು. ನನಗೆ ಗೊತ್ತೇ ಇರಲಿಲ್ಲ, ಫಸ್ಟ್ ಟೈಂ ಸುವರ್ಣ ನ್ಯೂಸ್ ನಲ್ಲಿ ಬಂದಿದೆ ಅಂತ ಹೇಳಿದ್ರು. ರಾತ್ರಿ ಊಟ ಮಾಡ್ತಿದ್ದಾಗ ಜೈಲಿನಲ್ಲಿ ಒಬ್ಬರು ಮಂಗಳೂರಿನವರು ನೋಡಲು ಬಂದಿದ್ರು. ಅವರು ಸುವರ್ಣ ನ್ಯೂಸ್ ನಲ್ಲಿ ನನ್ನ ಬಗ್ಗೆ ವರದಿ ಬಂದಿದ್ದಾಗಿ ಹೇಳಿದ್ರು.‌ ಆಗ ನನಗೆ ಶಾಕ್ ಆಯ್ತು, ಸುವರ್ಣ ನ್ಯೂಸ್ ನಲ್ಲಿ ನನ್ನ ಬಗ್ಗೆ ಹೇಗೆ ಬಂತು ಅಂತ. ಒಂದು ವಾರ ಬಿಟ್ಟು ಮತ್ತೊಬ್ಬರು ಬಂದವರೂ ಸುವರ್ಣ ನ್ಯೂಸ್ ಬಗ್ಗೆ ಹೇಳಿದ್ರು‌. ಆಗ ಅಮ್ಮನಿಗೆ ಗೊತ್ತಾದ್ರೆ ಆತಂಕ ಪಡ್ತಾರೆ ಅಂತ ಹೇಳಿದೆ. ಆಗ ಅವರು ಎಲ್ಲರಿಗೂ ಗೊತ್ತಾಗಿದೆ, ಸಮಸ್ಯೆ ಸರಿಯಾಗುತ್ತೆ ಅಂದ್ರು‌‌. ಸುವರ್ಣ ನ್ಯೂಸ್ ಗೆ ತುಂಬಾ ಧನ್ಯವಾದಗಳು. ನಿಮ್ಮಿಂದಾಗಿ ಅಲ್ಲಿದ್ದವರು ನನ್ನ ನೆರವಿಗೆ ಬಂದರು. ನೀವು ಬಂದ ಕಾರಣ ನಾನು ಇಷ್ಟು ಬೇಗ ಊರಿಗೆ ಬಂದೆ. ಇಲ್ಲದೇ ಇದ್ರೆ ಇನ್ನೂ‌ ಒಂದು ವರ್ಷ ನಾನು ಅಲ್ಲೇ ಇರ್ತಿದ್ದೆ. ಅವರಿಂದಾಗಿಯೇ ನಾನು ಇಲ್ಲಿಗೆ ಬಂದೆ, ಮಂಗಳೂರಿನವರು ತುಂಬಾ ಜನ ನೆರವಾದ್ರು. 

ಸ್ಪೀಕರ್ ಸ್ಥಾನ ಧರ್ಮಾಧಾರಿತವಾಗಿ ನೋಡುವಂಥದಲ್ಲ: ಖಾದರ್‌

ತಾಯ್ನಾಡಿಗೆ ಬಂದಿದ್ದು ಮತ್ತು ಅಮ್ಮನ ನೋಡಿ ತುಂಬಾ ಖುಷಿಯಾಗಿದೆ. ಅಲ್ಲಿ ತುಂಬಾನೇ ಕಷ್ಟ ಆಗ್ತಿತ್ತು, ಯಾರತ್ರನೂ ಮಾತನಾಡಲು ಆಗ್ತಿರಲಿಲ್ಲ. ತಪ್ಪು ಮಾಡದೇ ನಾನು ಅಲ್ಲಿ ಸುಮ್ಮನೆ ಒಳಗಿದ್ದೆ, ತಪ್ಪು ಮಾಡದೇ ಅನುಭವಿಸಿದೆ. ಅಲ್ಲಿನ ಸ್ಟೇಷನ್ ನಿಂದ ಕರೆ ಬಂದಾಗಲೇ ನನಗೆ ಈ ವಿಷಯ ಗೊತ್ತಾಗಿದ್ದು. ಅದಕ್ಕೂ ಮೊದಲು ನನ್ನತ್ರ ಕಂಪೆನಿ ಕೊಟ್ಟ ಒಂದೇ ಅಕೌಂಟ್ ನಂಬರ್ ಇತ್ತು. ಆದರೆ ಆವತ್ತು ಬ್ಯಾಂಕ್ ಅಕೌಂಟ್ ಚೆಕ್ ಮಾಡಿದಾಗಲೇ‌ ಮತ್ತೊಂದು ಅಕೌಂಟ್ ಇರೋದು ಗೊತ್ತಾಯ್ತು. ಸ್ಟೇಷನ್‌ ನಲ್ಲಿ ಕ್ಯಾಪ್ಟನ್ ಕೇಳಿದಾಗಲೂ ನನಗೆ ಅವರ ಅರಬಿ ಭಾಷೆ ಅರ್ಥವಾಗಿಲ್ಲ. ಕಂಪೆನಿ‌ ಕೊಟ್ಟ ಅಕೌಂಟ್ ಒಂದೇ ಅಂತ ಹೇಳಿದಾಗ ಅವತ್ತು ತನಿಖೆ ಮಾಡಿ ಬಿಟ್ಟರು. ಮತ್ತೆ ಬ್ಯಾಂಕ್ ಗೆ ಹೋಗಿ ಪರಿಶೀಲಿಸಿದಾಗಲೂ ಮತ್ತೊಂದು ಅಕೌಂಟ್ ಇರೋದು ಗೊತ್ತಾಯ್ತು. ಒಂದು ವಾರ ಬಿಟ್ಟು ಮತ್ತೆ ಸ್ಟೇಷನ್ ಗೆ ಹೋಗಿ ವಿಚಾರಣೆಗೆ ಹಾಜರಾದೆ. ಅಲ್ಲದೇ ಊರಿಗೆ ಹೋಗಲು ಇದೆ ಅಂತ ವಿನಂತಿ ಮಾಡಿದೆ. ಆದರೆ ಕಂಪೆನಿ‌ ಶ್ಯೂರಿಟಿ ಕೊಡಬೇಕು ಅಂತ ಅವರು ಹೇಳಿದ್ರು. ಬಳಿಕ ಸಂಜೆ ಹೋದಾಗ ನನ್ನನ್ನ ಅರೆಸ್ಟ್ ಮಾಡಿದ್ರು. ಆ ಬಳಿಕ ನಾನು ಹೊರಗೆ ಬಂದೇ ಇಲ್ಲ, ಜೈಲಿಗೆ ಹಾಕಿದ್ರು. ಆರು ತಿಂಗಳು ಜೈಲು ಮುಗಿಸಿ ಮತ್ತೆ ಸ್ಟೇಷನ್ ಗೆ ಬಂದರೂ ಹೊರಗೆ ಬಿಟ್ಡಿಲ್ಲ.

ಹೊರಗೆ ಬಿಡಲು ಸಾಕಷ್ಟು ಪೇಪರ್ ವರ್ಕ್ ಆಗಿದೆ, ಅದರಲ್ಲಿ ಹಲವರ ಶ್ರಮ ಇದೆ. ಮೊಬೈಲ್ ಗೆ ಬಂದ ಯಾವುದೋ ಲಿಂಕ್ ಓಪನ್ ಮಾಡಿದ ಕಾರಣ ಹೀಗಾಗಿದೆ ಅನಿಸುತ್ತೆ. ತಾಯಿಯ ಜೊತೆ ಒಂದೆರಡು ಸಾರಿ ಒಂದೆರಡು ನಿಮಿಷ ಮಾತನಾಡಿದ್ದೇನೆ. ಕಂಪೆನಿ ಮತ್ತು ಕಂಪೆನಿಯಲ್ಲಿ ಇರೋ ಇಲ್ಲಿನವರು ಸಹಾಯ ಮಾಡಿದ್ದಾರೆ. ಇಲ್ಲಿನ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ ಅಂತ ಎರಡು ತಿಂಗಳ ಹಿಂದೆ ಗೊತ್ತಾಯ್ತು. ಆದರೆ ನಾನು ಮನೆಯವರಿಗೂ ಅರೆಸ್ಟ್ ಆದ ವಿಚಾರ ಹೇಳಿರಲಿಲ್ಲ, ಜೈಲಲ್ಲಿದ್ದ ವಿಷಯ ಯಾರಿಗೂ ಗೊತ್ತಿರಲಿಲ್ಲ. ಟಿವಿಯಲ್ಲಿ ಬಂದಿದೆ ಎಂದಾಗ ನನಗೇ ಒಮ್ಮೆ ಶಾಕ್ ಆಯ್ತು. ಟಿವಿಯಲ್ಲಿ ಬಂದದ್ದು ನನಗೆ ತುಂಬಾ ಸಹಾಯ ಆಗಿದೆ. ಟಿವಿಯಲ್ಲಿ ಬಂದ ಕಾರಣ ಅಲ್ಲಿದ್ದ ಅನೇಕರಿಗೆ ವಿಷಯ ಗೊತ್ತಾಯ್ತು. ಆ ಕಾರಣಕ್ಕೆ ಅವರು ಬಂದು ನನ್ನ ಬಗ್ಗೆ ವಿಚಾರಿಸಿ ಸಹಾಯ ಮಾಡಿದ್ರು. ಮುಂದೆ ಬೇರೆ ಕಡೆ ಕೆಲಸ ಸಿಗೋ ಭರವಸೆ ಇದೆ ಎಂದರು.

Follow Us:
Download App:
  • android
  • ios