ಓಟಿಸಿ ಆನ್‌ಲೈನ್‌ ಸಮೀಕ್ಷೆಗೂ ಎನ್‌ಆರ್‌ಸಿ, ಸಿಎಎಗೂ ಯಾವುದೇ ಸಂಬಂಧವಿಲ್ಲ ಎಂದು ಪದೆ ಪದೇ ಸಾರಿ ಹೇಳುತ್ತಿದ್ದರೂ ಕೆಲವರು ಮನೆ ಬಾಗಿಲಿಗೆ ಬಂದ ಸಿಬ್ಬಂದಿಗೆ ಯಾವುದೇ ದಾಖಲೆ ನೀಡದೆ ಇರುವುದರಿಂದ ಮಾಹಿತಿ ಕಲೆ ಹಾಕುವಲ್ಲಿ ಗ್ರಾಮ ಸಹಾಯಕರು, ಸಿಬ್ಬಂದಿ ಸುಸ್ತಾಗಿದ್ದಾರೆ. 

ಉಡುಪಿ(ಮಾ.06): ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿರುವ ಪಡಿತರ ಚೀಟಿ ಮೂಲಕ ಜಾತಿ, ಆದಾಯ, ವಾಸ್ತವ್ಯದ ದೃಢೀಕರಣ ಪತ್ರವನ್ನು ಆನ್‌ಲೈನ್‌ ಮೂಲಕ ದಾಖಲಿಸುವ ಬಗ್ಗೆ ತಾಲೂಕು ಕಚೇರಿ ಸಿಬ್ಬಂದಿ ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವ ಸಂದರ್ಭ ಎನ್‌ಆರ್‌ಸಿ, ಸಿಎಎ ಸಮೀಕ್ಷೆ ಎಂದು ಭಾವಿಸಿ ಕೆಲವು ಸಮುದಾಯದವರು ಮಾಹಿತಿ ನೀಡಲು ನಿರಾಕರಿಸುತ್ತಿರುವುದು ಕಂಡುಬಂದಿದೆ.

Add Asianetnews Kannada as a Preferred SourcegooglePreferred

ಈ ಓಟಿಸಿ ಆನ್‌ಲೈನ್‌ ಸಮೀಕ್ಷೆಗೂ ಎನ್‌ಆರ್‌ಸಿ, ಸಿಎಎಗೂ ಯಾವುದೇ ಸಂಬಂಧವಿಲ್ಲ ಎಂದು ಪದೆ ಪದೇ ಸಾರಿ ಹೇಳುತ್ತಿದ್ದರೂ ಕೆಲವರು ಮನೆ ಬಾಗಿಲಿಗೆ ಬಂದ ಸಿಬ್ಬಂದಿಗೆ ಯಾವುದೇ ದಾಖಲೆ ನೀಡದೆ ಇರುವುದರಿಂದ ಮಾಹಿತಿ ಕಲೆ ಹಾಕುವಲ್ಲಿ ಗ್ರಾಮ ಸಹಾಯಕರು, ಸಿಬ್ಬಂದಿ ಸುಸ್ತಾಗಿದ್ದಾರೆ.

ಮಂಗಳೂರು-ಲಕ್ಷದ್ವೀಪ ಮಧ್ಯೆ ಪ್ಯಾಸೆಂಜರ್‌ ಹಡಗು ಪುನಾರಂಭ

ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 28 ಸಾವಿರ ಹೆಸರು ಚೀಟಿಗಳಿದ್ದು ಪ್ರತಿ ಮನೆ ಮನೆಗೆ ತೆರಳಿ ಮಾಹಿತಿ ಪಡೆದುಕೊಳ್ಳುಲಾಗುತ್ತಿದೆ. ಮಾಹಿತಿ ನೀಡುವುದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವರು ಮಾಹಿತಿ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹಾಗೂ ಸಮಸ್ಯೆಯ ಸುಳಿಯಲ್ಲಿ ಸಿಲುಕುವುದು ಸ್ಪಷ್ಟ.

ಏನಿದು ಓಟಿಸಿ..?:

ಪುರಸಭೆ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಮೂಲಕ ಜಾತಿ, ಆದಾಯ, ವಾಸ್ತವ್ಯದ ದೃಢೀಕರಣ ಪತ್ರವನ್ನು ಆನ್‌ಲೈನ್‌ ಮೂಲಕ ದಾಖಲಿಸಿ, ಬಳಿಕ ಜನತೆಗೆ ಮುಂದಿನ ದಿನಗಳಲ್ಲಿ ಈ ಎಲ್ಲ ದಾಖಲೆ ಪಡೆಯುವಲ್ಲಿ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸದೆ ಸರ್ಕಾರದ ಸವಲತ್ತುಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವಂತಹ ಯೋಜನೆ ಇದಾಗಿದೆ.

ಓಟಿಸಿ ಸಮೀಕ್ಷೆಗೂ, ಎನ್‌ಆರ್‌ಸಿಗೂ ಸಂಬಂಧವೇ ಇಲ್ಲ. ಓಟಿಸಿ ಮಾಹಿತಿ ನೀಡುವುದರಿಂದ ಮುಂದಿನ ದಿನಗಳಲ್ಲಿ ಜನತೆ ಕಚೇರಿಗೆ ಅಲೆದಾಟ ನಡೆಸುವುದು ತಪ್ಪುತ್ತದೆ. ಮನೆಯ ಬಳಿ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಆದರೆ ಕಚೇರಿಗೆ ಬಂದಾಗ ಮಾಹಿತಿ ನೀಡುತ್ತಾರೆ ಎಂದು ಕಸಬಾ ಗ್ರಾಮ ಲೆಕ್ಕಿಗ ಶಿವಪ್ರಸಾದ್‌ ತಿಳಿಸಿದ್ದಾರೆ.

ಮಣಿಪಾಲ- ಬೆಂಗಳೂರು ಮಲ್ಟಿಆಕ್ಸ್‌ಲ್‌ ವೋಲ್ವೊ ಬಸ್‌ ಆರಂಭ

ಓಟಿಸಿ ಸಮೀಕ್ಷೆ ಜಾತಿ, ಆದಾಯ, ವಾಸ್ತವ್ಯದ ದೃಢೀಕರಣ ಪತ್ರವನ್ನು ಆನ್‌ಲೈನ್‌ ಮೂಲಕ ದಾಖಲಿಸುವ ಯೋಜನೆಯಾಗಿದೆ. ಇದರಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲ. ಸಾರ್ವಜನಿಕರು ಸಹಕಾರ ನೀಡಬೇಕು ಕಾರ್ಕಳ ತಹಸೀಲ್ದಾರ್‌ ಪುರಂದರ ಹೆಗ್ಡೆ ಹೇಳಿದ್ದಾರೆ.

-ಬಿ. ಸಂಪತ್‌ ನಾಯಕ್‌ ಕಾರ್ಕಳ