ಮಂಡ್ಯ ಮೂಲ, ಕೋಲಾರದಲ್ಲಿ ವಾಸ, 4 ಜಿಲ್ಲೆಯಲ್ಲಿ ಪ್ರವಾಸ, ಕೊನೆಗೂ ಬೆಂಗ್ಳೂರಿಗೆ ಶಿಫ್ಟ್ ಆದ ಸೋಂಕಿತ
ಮೂರು ನಾಲ್ಕು ಜಿಲ್ಲೆಗಳಿಗೆ ತಲೆ ನೋವಾದ ಕೊರೋನಾ ಸೋಂಕಿತ ಮಂಡ್ಯದಲ್ಲಿ ಪತ್ತೆಯಾಗಿದ್ದು, ಈತನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಮಂಡ್ಯ(ಮೇ 17): ಮೂರು ನಾಲ್ಕು ಜಿಲ್ಲೆಗಳಿಗೆ ತಲೆ ನೋವಾದ ಕೊರೋನಾ ಸೋಂಕಿತ ಮಂಡ್ಯದಲ್ಲಿ ಪತ್ತೆಯಾಗಿದ್ದು, ಈತನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಲಾರದಲ್ಲಿ ಕೊರೋನಾ ಟೆಸ್ಟ್ ಗೆ ಒಳಗಾಗಿದ್ದ ಈತ ಬೆಂಗಳರೂರಿಗೆ ಶಿಫ್ಟ್ ಆಗುವುದರೊಂದಿಗೆ ಈಗ ಕೊರೋನಾ ಸೋಂಕಿತ ಪ್ರಕರಣ ಜಿಲ್ಲಾಡಳಿತಕ್ಕೆ ಮತ್ತೊಂದು ತಲೆನೋವು ಕಡಿಮೆಯಾದಂತಾಗಿದೆ.
ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ, ತಾಯಿ, ಇಬ್ಬರು ಸಹೋದರಿಯವರು, ಸಹೋದರರು, ಅಕ್ಕನ ಮಗ ಅವರನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಸ್ವಾ್ಯಬ್ ಸಂಗ್ರಹಿಸಿ 7 ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ.
ನಾಲ್ಕು ಜಿಲ್ಲೆಯಲ್ಲಿ ಪ್ರವಾಸ:
ಈ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತೆ ಇದೆ. ಮೂರು ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾನೆ. ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು ಜಿಲ್ಲೆಗಳಲ್ಲಿ ಸಂಚಾರ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ವ್ಯಕ್ತಿ. ಲಾಕ್ಡೌನ್ ವೇಳೆ ಸ್ವಗ್ರಾಮಕ್ಕೆ ಬಂದಿದ್ದನು. ಏ.24ರಂದು ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದಲ್ಲಿ ನಿರ್ಮಿಸಿದ್ದ ತನ್ನ ಮನೆಯ ಗೃಹ ಪ್ರವೇಶಕ್ಕೆ ಬಂದಿದ್ದಾನೆ. ಅಲ್ಲಿಂದ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿರುವ ಪತ್ನಿ ಮನೆಗೆ ಹೋಗಿದ್ದಾನೆ. ನಂತರ ಚನ್ನಪಟ್ಟಣಕ್ಕೆ ಪ್ರಯಾಣ ಮಾಡಿ ಅಲ್ಲಿಂದ ಸಹೋದ್ಯೋಗಿ ಜೊತೆ ಬೈಕಿನಲ್ಲಿ ಕೋಲಾರಕ್ಕೆ ವಾಪಸ್ ಆಗಿದ್ದಾನೆ. ಕೋಲಾರದಲ್ಲಿ ಸ್ವಯಂ ಪ್ರೇರಿತನಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಪರೀಕ್ಷೆ ಬಳಿಕ ಬೆಂಗಳೂರಿಗೆ ಹೋಗಿದ್ದ. ಕೋಲಾರ ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ವ್ಯಕ್ತಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸೋಂಕಿತ ಯಾರು
ಕೋಲಾರ ಜಿಲ್ಲೆಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಪ್ರಥಮ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಡ್ಯ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ 40 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತ ಮಾ.12ರಂದು ಕೋಲಾರ ಜಿಲ್ಲೆಯಲ್ಲಿ ಲಾಕ್ಡೌನ್ ಆದ ಬಳಿಕ ನ್ಯಾಯಾಲಯದ ರಜೆ ಮೇಲೆ ತನ್ನ ಹೆಂಡತಿ ಊರಾದ ಹಲಗೂರು ಹೋಬಳಿಯ ದಳವಾಯಿಕೋಡಿಹಳ್ಳಿ ಗ್ರಾಮಕ್ಕೆ ಬಂದಿದ್ದಾನೆ.
ಮದ್ಯದ ನಶೆಯಲ್ಲಿ ಎಮ್ಮೆ ಕುಳಿತ ಕುಡುಕ: ಲಾಕ್ಡೌನ್ ಮುಂದುವರೆಸಿ ಎಂದು ಪ್ರಧಾನಿ ಮೋದಿಗೆ ಮನವಿ..!
ಆನಂತರ ಏ.23ರಂದು ತನ್ನ ಸ್ವಂತ ಗ್ರಾಮವಾದ ಕಡಿಲುವಾಗಿಲು ಗ್ರಾಮಕ್ಕೆ ಮನೆ ಗೃಹಪ್ರವೇಶ ಸಂಬಂಧ ಬಂದಿದ್ದು ಬಳಿಕ ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ದಳವಾಯಿ ಕೋಡಿಹಳ್ಳಿ ಗ್ರಾಮಕ್ಕೆ ಮೇ 11ರಂದು ತನ್ನ ಸಂಬಂಧಿ ಜೊತೆ ಬೈಕ್ನಲ್ಲಿ ಚನ್ನಪಟ್ಟಣದವರೆಗೆ ಡ್ರಾಪ್ ತೆಗೆದುಕೊಂಡು ನಂತರ ಸಹದ್ಯೋಗಿ ಜೊತೆ ಕೋಲಾರ ಜಿಲ್ಲೆಗೆ ತೆರಳಿದ್ದಾನೆ.
ಮೇ 15ರಂದು ಈತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಹಾಲಿ ಈತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.