ಮಂಡ್ಯದ ಡಯಾಗ್ನೋಸ್ಟಿಕ್ ಸೆಂಟರ್ ಮೇಲೆ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಕಳೆದ ಒಂದು ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರಿಗೆ ಗರ್ಭಿಣಿ ಸ್ಕ್ಯಾನಿಂಗ್ ಮಾಡಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಪ್ರಕರಣಗಳನ್ನು ಫೋಕ್ಸೋ ಕಾಯ್ದೆಯಡಿ ವರದಿ ಮಾಡಲಾಗಿದೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮಂಡ್ಯ: ನಗರದ ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಕಳೆದೊಂದು ವರ್ಷದಲ್ಲಿ ೫೫ ಬಾಲ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡಿರುವುದಾಗಿ ಜಾಗೃತ ದಳದ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಕಂಡುಬಂದಿದೆ.
ಉಪ ಲೋಕಾಯುಕ್ತರು ಬೀಸಿದ ಚಾಟಿಯಿಂದ ಕುಂಭಕರ್ಣ ನಿದ್ರೆಯಲ್ಲಿದ್ದ ತಾಲೂಕು ಮಟ್ಟದ ಜಾಗೃತದಳಗಳು ಇದೀಗ ಎಚ್ಚೆತ್ತು ಜಿಲ್ಲೆಯ ಎಲ್ಲಾ ಖಾಸಗಿ ಸ್ಕ್ಯಾನಿಂಗ್ಸೆಂಟರ್ಗಳಿಗೆ ತೆರಳಿ ಪರಿಶೀಲನೆ ನಡೆಸಲಾರಂಭಿಸಿವೆ. ಅದರಂತೆ ಮಂಗಳವಾರ ತಾಲೂಕು ಜಾಗೃತ ದಳ ಮಂಡ್ಯ ತಹಸೀಲ್ದಾರ್ ವಿಶ್ವನಾಥ್ ನೇತೃತ್ವದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
55 ಬಾಲ ಗರ್ಭಿಣಿಯರು
ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್ಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಕಳೆದೊಂದು ವರ್ಷದಲ್ಲಿ 16 ಸಾವಿರ ಗರ್ಭಿಣಿಯರ ಸ್ಕ್ಯಾನಿಂಗ್ ಆಗಿದ್ದು, ಅದರಲ್ಲಿ 55 ಬಾಲ ಗರ್ಭಿಣಿಯರಿರುವುದು ಕಂಡುಬಂದಿದೆ. ಈ ಬಾಲಗರ್ಭಿಣಿಯರ ಮಾಹಿತಿಯನ್ನು ಸಂಬಂಧಿಸಿದವರಿಗೆ ನೀಡಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಒಮ್ಮೆ ಮದುವೆಯಾಗಿ ಸ್ಕ್ಯಾನಿಂಗ್ಗೆ ಬಂದಿದ್ದರೂ ಅದೂ ಫೋಕ್ಸೋಅಡಿ ಬರುವುದರಿಂದ ಅದರ ಬಗ್ಗೆಯೂ ಮಾಹಿತಿ ನೀಡಿರುವರೇ ಎಂದು ದಾಖಲೆಗಳನ್ನು ಪರಾಮರ್ಶಿಸಲಾಗುತ್ತಿದೆ ಎಂದು ನೋಡಲ್ ಅಧಿಕಾರಿ ಡಾ.ಕೆ.ಸೋಮಶೇಖರ್ ತಿಳಿಸಿದರು.
ಸ್ಕ್ಯಾನಿಂಗ್ ದಾಖಲೆಗಳ ನಿರ್ವಹಣೆ
ಸ್ಕ್ಯಾನಿಂಗ್ ಸೆಂಟರ್ನ ರಿಜಿಸ್ಟರ್ ಹಾಗೂ ಸ್ಕ್ಯಾನಿಂಗ್ ಮಾಡಿರುವ ದಾಖಲೆಗಳ ಕುರಿತಂತೆ ಪರಿಶೀಲನೆ ನಡೆಸಿದರು. ಸ್ಕ್ಯಾನಿಂಗ್ ದಾಖಲೆಗಳ ನಿರ್ವಹಣೆಯನ್ನು ಸರಿಯಾದ ಕ್ರಮದಲ್ಲಿಡುವಂತೆ ಡಯಾಗ್ನೋಸ್ಟಿಕ್ ಸೆಂಟರ್ ಸಿಬ್ಬಂದಿಗೆ ಸೂಚಿಸಿದರು. ಬಾಲ ಗರ್ಭಿಣಿಯರು ಸ್ಕ್ಯಾನಿಂಗ್ಗೆ ಬಂದಿರುವುದು ಕಂಡುಬಂದ ಕೂಡಲೇ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು. ಲಿಂಗಪತ್ತೆ ಪ್ರಕರಣ ನಡೆಸುವುದು, ಭ್ರೂಣ ಹತ್ಯೆಯಂತಹ ಕೃತ್ಯಗಳಿಗೆ ಮುಂದಾಗದಂತೆ ಎಚ್ಚರಿಕೆ ನೀಡಿದರು.
ಇದೇ ವೇಳೆ ತಾಲೂಕು ಆರೋಗ್ಯ ಅಧಿಕಾರಿ ಜವರೇಗೌಡ, ಸಿಡಿಪಿಒ ನಾರಾಯಣ್ ಸೇರಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ತಹಸೀಲ್ದಾರ್ ನೇತೃತ್ವದ ಜಾಗೃತದಳ ಸ್ಕ್ಯಾನಿಂಗ್ ಸೆಂಟರ್ನ ರಿಜಿಸ್ಟರ್ ಹಾಗೂ ಸ್ಕ್ಯಾನಿಂಗ್ ಮಾಡಿರುವ ದಾಖಲೆಗಳ ಕುರಿತಂತೆ ಪರಿಶೀಲನೆ ನಡೆಸಿದರು.

