ಪ್ರೀತಿಯಲ್ಲಿ ಅನುಮಾನವೆಂಬ ಭೂತ ಕಾಡಿ ಅಪ್ರಾಪ್ತ ಬಾಲಕಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಯುವಕ ತನ್ನ ಪ್ರಿಯತಮೆಯ ಮೇಲೆ ಸಂಶಯ ಪಟ್ಟು ವಿಷವುಣಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕಬಳ್ಳಾಪುರ(ಜ.14): ಪ್ರೀತಿಸಿದ ಬಾಲಕಿಯ ಮೇಲಿನ ಅನುಮಾನದಿಂದ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಪ್ರಿಯತಮನ ಮಾತು ನಂಬಿ ವಿಷ ಸೇವಿಸಿದ ಬಾಲಕಿ ಹಾಗೂ ಗೌರಿಬಿದನೂರು ತಾಲೂಕಿನ ಕಮಲಾಪುರ ನಿವಾಸಿ ವೆಂಕಟೇಶ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆರೋಪಿ ವೆಂಕಟೇಶ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಪ್ರೀತಿಸಿದ ಹುಡುಗಿಯ ಮೇಲೆ ತೀವ್ರ ಅನುಮಾನ ಪಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಕಮಲಿ ಕ್ಯಾತೆ; ಧಾರಾವಾಹಿ ನಿರ್ದೇಶಕನ ವಿರುದ್ಧ ಇದೆಂಥ ದೂರು

ಜ.6ರಂದು ಇದೇ ವಿಷಯದಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಕಳೆದ ಜ.6ರಂದು ವಂಕಟೇಶ್ ಜ್ಯೂಸ್‌ನಲ್ಲಿ ವಿಷ ಬೆರೆಸಿ ನೀಡಿ, ನನ್ನ ಮೇಲೆ ಪ್ರೀತಿ ಇದ್ದರೆ ವಿಷ ಸೇವಿಸಿದರೂ ನೀನು ಬದುಕುತ್ತೀಯ ಎಂದು ಬೆದರಿಕೆ ಹಾಕಿ ಬಾಲಕಿಗೆ ವಿಷ ಕುಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ತಾನೂ ವಿಷ ಸೇವಿಸುವುದಾಗಿ ಆಕೆಯನ್ನು ನಂಬಿಸಿ ತಾನು ವಿಷ ಬೆರೆಸದ ಜ್ಯೂಸ್ ಸೇವಿಸಿದ್ದಾನೆ.

ಅಸ್ವಸ್ತಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಈ ಘಟನೆಯನ್ನು ವೆಂಕಟೇಶ್ ಆತ್ಮಹತ್ಯೆ ಪ್ರಕರಣ ಎಂದು ನಂಬಿಸುವ ಯತ್ನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಪ್ರಸ್ತುತ ಪೊಲೀಸರ ತನಿಖೆಯಿಂದ ಅಸಲೀ ವಿಷಯ ಬಹಿರಂಗವಾಗಿದ್ದು, ಆರೋಪಿ ವೆಂಕಟೇಶ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ

ಮಂಡ್ಯ: ಮೂವರು ಯುವತಿಯರು ನಾಪತ್ತೆ..!