ತಮಿಳುನಾಡಿನ 70ರ ಹರೆಯದ ವ್ಯಕ್ತಿಯೊಬ್ಬರು ಸೈಕಲ್‌ ಮೂಲಕ ತೀರ್ಥಯಾತ್ರೆ ಕೈಗೊಂಡಿದ್ದು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಅಲ್ಲಿಂದ ಕನ್ಯಾಡಿ ಶ್ರೀರಾಮ ಮಂದಿರಕ್ಕೆ ತೆರಳಿ ಉಜಿರೆ, ಚಾರ್ಮಾಡಿ ಮೂಲಕ ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಲಿದ್ದಾರೆ.

ಬೆಳ್ತಂಗಡಿ (ಮೇ.5) ತಮಿಳುನಾಡಿನ 70ರ ಹರೆಯದ ವ್ಯಕ್ತಿಯೊಬ್ಬರು ಸೈಕಲ್‌ ಮೂಲಕ ತೀರ್ಥಯಾತ್ರೆ ಕೈಗೊಂಡಿದ್ದು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಅಲ್ಲಿಂದ ಕನ್ಯಾಡಿ ಶ್ರೀರಾಮ ಮಂದಿರಕ್ಕೆ ತೆರಳಿ ಉಜಿರೆ, ಚಾರ್ಮಾಡಿ ಮೂಲಕ ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಲಿದ್ದಾರೆ.

Add Asianetnews Kannada as a Preferred SourcegooglePreferred

ತಿರುವನ್ವೇಲಿಯ ಬ್ರಾಹ್ಮಣ ಸಮುದಾಯ(Brahmana community)ದ ಗೋಪಾಲಕೃಷ್ಣ ಅಯ್ಯರ್‌(Gopalakrishna Iyer) ಎಂಬವರು ತಮಿಳುನಾಡಿನಿಂದ ತೀರ್ಥಯಾತ್ರೆಯನ್ನು ಆರಂಭಿಸಿ ಅಲ್ಲಿನ ಕನ್ಯಾಕುಮಾರಿ, ಪಳನಿ, ರಾಮೇಶ್ವರ, ಮಧುರೈ ಮೊದಲಾದ ದೇವಸ್ಥಾನಗಳ ದರ್ಶನ ಮುಗಿಸಿ ಕರ್ನಾಟಕದ ಮಲೆ ಮಹದೇಶ್ವರ, ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಭಾಗಮಂಡಲ, ತಲಕಾವೇರಿ ಮೂಲಕ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಸೌತಡ್ಕದ ದರ್ಶನ ಪಡೆದು ಶುಕ್ರವಾರ ಧರ್ಮಸ್ಥಳಕ್ಕೆ ಆಗಮಿಸಿದರು.

ಸಕ್ಕರೆ ಕಾಯಿಲೆ ವಿರುದ್ಧ, ಸೈಕಲ್ ರೈಡ್- ಕಾಶ್ಮೀರ ಟು ಕನ್ಯಾಕುಮಾರಿ ವರೆಗೆ ಅಭಿಯಾನ

ಇಲ್ಲಿಂದ ಚಿಕ್ಕಮಗಳೂರು ಮೂಲಕ ಚಿತ್ರದುರ್ಗ ತಲುಪಿ, ಮುಂದೆ ಬಿಜಾಪುರ, ಪಂಡರಾಪುರ, ಮುಂಬೈ, ಉತ್ತರಕಾಶಿ, ದೆಹಲಿ, ಆಗ್ರಾ ಮೂಲಕ ದೇಶದ 11 ರಾಜ್ಯಗಳಲ್ಲಿ ಸೈಕಲ್‌ ನಲ್ಲಿ ಸಂಚರಿಸಿ ಲಡಾಖ್‌ ಮೂಲಕ ಅಮರನಾಥ ಯಾತ್ರೆ ಕೈಗೊಳ್ಳುವ ಉದ್ದೇಶ ಹೊಂದಿದ್ದಾರೆ.

14 ತಿಂಗಳುಗಳ ಕಾಲ ಸೈಕಲ್‌ ಯಾತ್ರೆ ನಡೆಸಿ ತಮ್ಮ ಗುರಿಯನ್ನು ಮುಟ್ಟುವ ಇರಾದೆಯನ್ನು ಗೋಪಾಲಕೃಷ್ಣ ಅಯ್ಯರ್‌ ಹೊಂದಿದ್ದಾರೆ. ಕರ್ನಾಟಕ ಸೇರಿದಂತೆ ತಾನು ಪ್ರಯಾಣ ಬೆಳೆಸುವ ದಾರಿಯುದ್ದಕ್ಕೂ ಸಿಗುವ ದೇವಸ್ಥಾನ, ನದಿಗಳನ್ನು ಸಂದರ್ಶಿಸಿ ಅವುಗಳ ಪಾವಿತ್ಯತೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ.

ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ದಿನವೊಂದಕ್ಕೆ 15ರಿಂದ 20 ಕಿ.ಮೀ. ಸೈಕಲ್‌ ಪ್ರಯಾಣ ಬೆಳೆಸುತ್ತಾರೆ. ಶಾಲೆ, ದೇವಸ್ಥಾನ ಸಭಾಮಂಟಪಗಳಲ್ಲಿ ಸ್ಥಳೀಯ ಪಂಚಾಯಿತಿಯ ಅನುಮತಿ ಪಡೆದು ರಾತ್ರಿ ಆಶ್ರಯ ವ್ಯವಸ್ಥೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಸ್ವಂತ ಅಡುಗೆ ತಯಾರಿ: ದೇವಸ್ಥಾನಗಳಲ್ಲಿ ಊಟ ಇದ್ದಲ್ಲಿ ಅದನ್ನು ಸ್ವೀಕರಿಸಿ ಮುನ್ನಡೆಯುತ್ತಾರೆ. ಊಟದ ವ್ಯವಸ್ಥೆ ಇಲ್ಲದಿದ್ದಲ್ಲಿ ಹೋಟೆಲ್‌ನ್ನು ಆಶ್ರಯಿಸದೆ ತಾವೇ ಅಡುಗೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಅಕ್ಕಿ, ಸಾಂಬಾರ್‌ ಪುಡಿ, ಸ್ಟವ್‌ ಇನ್ನಿತರ ವ್ಯವಸ್ಥೆಗಳನ್ನು ತಮ್ಮ ಸೈಕಲ್‌ನಲ್ಲೇ ಕಟ್ಟಿಕೊಂಡಿದ್ದಾರೆ. ನಾಲ್ಕು ಧೋತಿ, ನಾಲ್ಕು ಅಂಗವಸ್ತ್ರ ಹಾಗೂ ರಾತ್ರಿಗೆ ಅಗತ್ಯವಿರುವ ಸ್ಥಳಗಳಲ್ಲಿ ಬೇಕಾದ ಹೊದಿಕೆಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಕಾಫಿ, ಟೀ, ಬಿಸ್ಕೆಟ್‌ ಇತ್ಯಾದಿಗೆ ಮಾತ್ರ ಇತರರನ್ನು ಆಶ್ರಯಿಸಿದ್ದಾರೆ.

Karwar: 'ಭಾರತದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರು': ಏಕಾಂಗಿ ಸೈಕಲ್ ಯಾತ್ರೆ ಮೂಲಕ ಯುವತಿಯ ಸಂದೇಶ

15 ದಿನಗಳ ಹಿಂದೆ ಸ್ವ-ಇಚ್ಛೆಯಿಂದ ಭಾರತ ದೇಶದ 11 ರಾಜ್ಯಗಳ ತೀರ್ಥಯಾತ್ರೆ ನಡೆಸುವ ಉದ್ದೇಶದಿಂದ ಹಳೆ ಸೈಕಲ್‌ ಮೂಲಕ ಯಾತ್ರೆ ಆರಂಭಿಸಿದ್ದೇನೆ. ಈಗಾಗಲೇ 220 ಕಿಮೀ.ಗಿಂತ ಅಧಿಕ ಪ್ರದೇಶವನ್ನು ಕ್ರಮಿಸಲಾಗಿದೆ. ಯಾವುದೇ ಕಾರಣಕ್ಕೂ ರಾತ್ರಿ ಪ್ರಯಾಣ ಮಾಡುವುದಿಲ್ಲ. ಇಷ್ಟರವರೆಗೆ ಸಂದರ್ಶಿಸಿದ ಊರುಗಳಲ್ಲಿ ಸ್ಥಳೀಯರು ಉತ್ತಮ ಸಹಕಾರ ನೀಡಿದ್ದಾರೆ

- ಗೋಪಾಲಕೃಷ್ಣ ಅಯ್ಯರ್‌