ಮೆಟ್ರೋ ನಿಲ್ದಾಣದಲ್ಲಿ ಶೌಚಾಲಯವೆಂದು ಗುಂಡಿಗೆ ಬಿದ್ದು ಸಾವು
5 ದಿನಗಳ ಬಳಿಕ ಶವ ಪತ್ತೆ| ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ನಡೆದ ಘಟನೆ| ಒಬ್ಬರೇ ಹೋಗಿ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆ| ಕೊಳೆತ ವಾಸನೆ ಬಂದ ಬಳಿಕ ಘಟನೆ ಬೆಳಕಿಗೆ ಬಂದ ಪ್ರಕರಣ|
ಬೆಂಗಳೂರು(ಏ.10): ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಕೆಳಗೆ ಮೃತ ದೇಹವೊಂದು ಪತ್ತೆಯಾಗಿದ್ದು, ಐದು ದಿನಗಳ ಹಿಂದೆಯೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತರನ್ನು ಸುಬ್ರಹ್ಮಣ್ಯಪುರ ನಿವಾಸಿ ನಾಗರಾಜ್ (57) ಎಂದು ಗುರುತಿಸಲಾಗಿದೆ. ಮೆಟ್ರೋ ನಿಲ್ದಾಣದಲ್ಲಿ ದುರ್ವಾಸನೆ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಹೇಳಿದ್ದಾರೆ.
ಹಿನ್ನೀರಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ : ಸುದ್ದಿ ಕೇಳಿ ಅಜ್ಜಿಯೂ ಹೃದಯಾಘಾತದಿಂದ ನಿಧನ
ನಾಗರಾಜ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಕುಟುಂಬದೊಂದಿಗೆ ಸುಬ್ರಹ್ಮಣ್ಯಪುರದಲ್ಲಿ ನೆಲೆಸಿದ್ದರು. ಭಾನುವಾರ ಮೂತ್ರ ಮಾಡಲು ಮೆಟ್ರೋ ಮೊದಲ ಮಹಡಿಯಲ್ಲಿ ಓಡಾಡಿದ್ದಾರೆ. ಮೆಟ್ರೋ ನಿಲ್ದಾಣದ ಮೊದಲ ಮಹಡಿಯಲ್ಲಿ ಇದ್ದ ಗುಂಡಿಯನ್ನು ಶೌಚಾಲಯ ಗೃಹ ಎಂದು ಅದರೊಳಗೆ ಹೆಜ್ಜೆ ಇಟ್ಟಿದ್ದು, ನೆಲ ಮಹಡಿಗೆ ಬಿದ್ದಿದ್ದಾರೆ. ಭಾನುವಾರ ರಾತ್ರಿ ನಾಗರಾಜ್ ಅವರು ಬಿದ್ದು, ಮೃತಪಟ್ಟಿದ್ದು ಯಾರೊಬ್ಬರಿಗೂ ಗೊತ್ತಾಗಿಲ್ಲ. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಒಬ್ಬರೇ ಹೋಗಿ ಬಿದ್ದಿರುವುದು ಗೊತ್ತಾಗಿದೆ. ನಾಗರಾಜ್ ಅವರು ಮದ್ಯ ಸೇವನೆ ಮಾಡಿದ್ದಾರೋ ಇಲ್ಲವೋ ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಲಿದೆ. ಕೊಳೆತ ವಾಸನೆ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.