Asianet Suvarna News Asianet Suvarna News

Tumakuru: ಪ್ರವಾಸಿ ಸ್ಥಳಗಳನ್ನು ತಂಬಾಕು ಮುಕ್ತವನ್ನಾಗಿಸಿ: ಡೀಸಿ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯ ಸೇವನೆಯ ವಿರುದ್ಧ ಜಿಲ್ಲೆಯಾದ್ಯಂತ ದಂಡ ವಿಧಿಸುವುದು ಹಾಗೂ ತಪಾಸಣೆ ತಂಡಗಳು ಭೇಟಿ ನೀಡುವುದನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ಹೇಳಿದರು. 

Make tourist places tobacco free says DC YS Patil At Tumakuru gvd
Author
First Published Nov 2, 2022, 9:58 PM IST

ತುಮಕೂರು (ನ.02): ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯ ಸೇವನೆಯ ವಿರುದ್ಧ ಜಿಲ್ಲೆಯಾದ್ಯಂತ ದಂಡ ವಿಧಿಸುವುದು ಹಾಗೂ ತಪಾಸಣೆ ತಂಡಗಳು ಭೇಟಿ ನೀಡುವುದನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳು ಉತ್ಪನ್ನ ಅಧಿನಿಯಮ(ಕೋಟ್ಪಾ)-2003 ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಗೆ ನಿಷೇಧವಿದ್ದು, ತಂಬಾಕು ಉತ್ಪನ್ನಗಳ ದುಷ್ಟಪರಿಣಾಮದ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಜೊತೆಗೆ ನಿಯಮಿತ ದಾಳಿ ನಡೆಸಿ ವರದಿ ಸಲ್ಲಿಸಬೇಕು. ಪ್ರವಾಸಿ ಸ್ಥಳಗಳನ್ನು ತಂಬಾಕು ಮುಕ್ತವನ್ನಾಗಿಸಲು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ತಂಬಾಕು ಸೇವನೆ ನಿಯಂತ್ರಣದಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ತಂಬಾಕು ನಿಯಂತ್ರಣ ಕೋಶದಿಂದ ನಿರಂತರವಾಗಿ ದಾಳಿ ನಡೆಸಿ ಸಾರ್ವಜನಿಕ ಪ್ರದೇಶ, ಶಾಲೆ ಆವರಣದ ಬಳಿಯೇ ಬೀಡಿ, ಸಿಗರೇಟು, ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ದಂಡ ವಿಧಿಸಬೇಕು. 

ತಿಪಟೂರು ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, 32.50 ಕೋಟಿ ರೂ ವೆಚ್ಚದಲ್ಲಿ 4 ಲೇನ್!

ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ದಂಡ ವಿಧಿಸುವ ಕುರಿತು ಎಚ್ಚರಿಕೆಯ ಫಲಕವನ್ನು ಅಳವಡಿಸಬೇಕು. ತಂಬಾಕು ಮುಕ್ತ ನಗರವನ್ನಾಗಿಸಲು ವಿವಿಧ ಇಲಾಖೆಗಳ ಪರಸ್ಪರ ಸಂಪೂರ್ಣವಾದ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ತಂಬಾಕು ಸೇವನೆ ದುಷ್ಪರಿಣಾಮದ ಕುರಿತು ಪ್ರೌಢಶಾಲೆ ಮತ್ತು ಪಿಯುಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ಜಾಥಾ, ವಿಚಾರ ಸಂಕಿರಣಗಳನ್ನು ಆಯೋಜಿಸಬೇಕು. ಶಾಲಾ-ಕಾಲೇಜುಗಳು ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿಷೇಧಿತ ವಲಯಗಳಾಗಿದ್ದು, ಸುತ್ತಮುತ್ತ ತಂಬಾಕು ಉತ್ಪನ್ನಗಳ ಅನಧಿಕೃತ ಮಾರಾಟಕ್ಕೆ ಕಡಿವಾಣ ಹಾಕಿ, ಕಠಿಣ ಕ್ರಮ ಕ್ಯೆಗೊಳ್ಳಬೇಕು. ತಂಬಾಕು ನಿಯಂತ್ರಣ ಕೋಶದ ತಂಡದೊಂದಿಗೆ ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ.ಮೋಹನ್‌ ದಾಸ್‌ ಮಾತನಾಡಿ, ತುಮಕೂರು ವಿಶ್ವವಿದ್ಯಾನಿಲಯವನ್ನು ತಂಬಾಕು ಮುಕ್ತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್‌, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪ್ರೇಮ ಟಿ.ಎಲ್‌.ಎಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್‌, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ರವಿಪ್ರಕಾಶ್‌, ಜಿಲ್ಲಾ ಸಾಮಾಜಿಕ ಕಾರ್ಯಕರ್ತ ಹರೀಶ್‌ ಕೆ.ಎಸ್‌, ಆಪ್ತ ಸಮಾಲೋಚಕ ರುಕ್ಮಿಣಿ, ಪ್ರವಾಸೋದ್ಯಮ ಇಲಾಖೆಯ ಇಮ್ರಾನ್‌ವುಲ್ಲಾ ಖಾನ್‌ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಅಧಿಕಾರಿಗಳ ವರ್ಗಾವಣೆಗೆ ಪ್ರತ್ಯೇಕ ಬೋರ್ಡ್‌ ಇದೆ : ನನ್ನಿಂದ ಆಗಲ್ಲ

ತಂಬಾಕು ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ: ಸಹವಾಸ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ದುಷ್ಪ್ರೇರಣೆಯಿಂದ ಮಕ್ಕಳ ಆರೋಗ್ಯ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರಿ ತಂಬಾಕು ಸೇವನೆಯ ಕಡೆ ಆಕರ್ಷಿತವಾಗುವ ಸಂಭವ ಇರುತ್ತದೆ. ಈ ನಿಟ್ಟಿನಲ್ಲಿ ಪ್ರೌಢಶಾಲೆ, ಕಾಲೇಜು ಹಾಗೂ ವಿದ್ಯಾರ್ಥಿ/ವಸತಿ ನಿಲಯಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಒಂದು ಮಗುವಿಗೆ ಉತ್ತಮ ಶಿಕ್ಷಣ ನೀಡಿದರೆ ಆ ಮೂಲಕ ಆ ವಿದ್ಯಾರ್ಥಿಯ ಕುಟುಂಬಕ್ಕೂ ಶಿಕ್ಷಣದ ಫಲ ದೊರೆಯುತ್ತದೆ. ಶಾಲಾ-ಕಾಲೇಜುಗಳ ಆವರಣದಲ್ಲಿ ತಂಬಾಕು ಮಾರಾಟ ಮಾಡುವವರು ಹಾಗೂ ಸೇವಿಸುವವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಾಗಿ ಡೀಸಿ ಪಾಟೀಲ ಸೂಚಿಸಿದರು.

Follow Us:
Download App:
  • android
  • ios