ಮಾಗಡಿ: ಶಾಲಾ ವೇಳೆ ಹೆಚ್ಚುವರಿ ಬಸ್ ಬಿಡಲು ಆಗ್ರಹ
ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್ ಗಳ ಸಂಚಾರಕ್ಕೆ ಒತ್ತಾಯಿಸಿ ತಾಲೂಕಿನ ನೇತೇನಹಳ್ಳಿ ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ನೇತೃತ್ವದಲ್ಲಿ ಗ್ರಾಮಸ್ಥರು ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
![Magadi Demand to leave extra bus during school hours snr Magadi Demand to leave extra bus during school hours snr](https://static-ai.asianetnews.com/images/01h32ve2efx35yj21p1bqp0xw6/ffngngng_363x203xt.jpg)
ಮಾಗಡಿ: ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್ ಗಳ ಸಂಚಾರಕ್ಕೆ ಒತ್ತಾಯಿಸಿ ತಾಲೂಕಿನ ನೇತೇನಹಳ್ಳಿ ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ನೇತೃತ್ವದಲ್ಲಿ ಗ್ರಾಮಸ್ಥರು ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ರಾಮನಗರ ಮಾರ್ಗವಾಗಿ ಜಾಲಮಂಗಲ, ಮತ್ತಿಕೆರೆ, ಹೇಳಿಗೆಹಳ್ಳಿ ಮೂಲಕ ನೇತೇನಹಳ್ಳಿ ಮಾರ್ಗವಾಗಿ ಮಾಗಡಿಗೆ ಬರುವ ಸಾರಿಗೆ ಬಸ್ನಲ್ಲಿ ಬೆಳಗಿನ ಸಮಯದಲ್ಲಿ 50 ಜನ ಪ್ರಯಾಣಿಸುವ ಬಸ್ನಲ್ಲಿ 110ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್ ಡೋರ್ನಲ್ಲಿ ನೇತಾಡಿಕೊಂಡು ಅಪಾಯದಲ್ಲಿ ಪ್ರಯಾಣಿಸುತ್ತಿದ್ದು, ರಸ್ತೆ ಕಿರಿದಾಗಿದ್ದು, ವಿದ್ಯಾರ್ಥಿಗಳು ಆಯಾ ತಪ್ಪಿ ಬಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಸರ್ಕಾರ ಸ್ತ್ರೀಶಕ್ತಿ ಯೋಜನೆಯಿಂದ ಬಸ್ಗಳಲ್ಲಿ ಮಹಿಳೆಯರ ಸಂಚಾರ ಸಂಖ್ಯೆ ಹೆಚ್ಚಾಗಿದೆ. ಶಾಲಾ ಮತ್ತು ಕಾಲೇಜು ಸಮಯದಲ್ಲಿ ಒಂದೇ ಬಸ್ ಇರುವುದರಿಂದ ಹೆಚ್ಚುವರಿ ವಿದ್ಯಾರ್ಥಿಗಳು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಹೆಚ್ಚುವರಿ ಬಸ್ ಬಿಡಬೇಕು. ಇಲ್ಲವಾದರೆ ಬಸ್ ಸಂಚಾರಕ್ಕೆ ಬಿಡುವುದಿಲ್ಲ ಎಂದು ನೇತೇನಹಳ್ಳಿ ಗ್ರಾಮದಲ್ಲಿ ಬಸ್ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಬೆಳಗಿನ ಸಮಯದಲ್ಲಿ ಹೆಚ್ಚುವರಿ ಬಸ್ಗಳನ್ನು ರಾಮನಗರ ಡಿಪೋ ಮತ್ತು ಮಾಗಡಿ ಡಿಪೋನಿಂದ ಬಿಡಬೇಕು. ಪ್ರತಿದಿನವೂ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದ್ದು ಈ ಬಗ್ಗೆ ಡಿಪೋ ಮ್ಯಾನೇಜರ್ ಕ್ರಮವಹಿಸದಿದ್ದರೆ ಸಾರಿಗೆ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಚಂದ್ರು, ಸುನೀಲ…, ಮಂಜು, ಮಧು, ಲಕ್ಷ್ಮಣ…, ಪುಟ್ಟಸ್ವಾಮಿ ಸೇರಿದಂತೆ ನೇತೇನಹಳ್ಳಿ, ಉಡುವೆಗೆರೆ ಗ್ರಾಮಸ್ಥರು ಭಾಗವಹಿಸಿದ್ದರು.
ಉಚಿತ ತರಬೇತಿ
ಚಿಕ್ಕಬಳ್ಳಾಪುರ (ಜು.27): ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರ ತೆರೆದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಉಚಿತವಾಗಿ ನೀಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಪ್ರಯುಕ್ತ ಇಂದು ತಾಲೂಕಿನ ಅಜ್ಜವಾರ ಗ್ರಾಮಕ್ಕೆ ಭೇಟಿ ನೀಡಿ, ಜನತೆಯ ಸಮಸ್ಯೆಗಳನ್ನು ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ, ಜನರಿಂದ ಅಹವಾಲು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇವಲ ನನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ನೀಟ್, ಸಿಇಟಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ತರಬೇತಿ ಮತ್ತು ಪದವಿ ಪೂರೈಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್, ಐಪಿಎಸ್, ಐಆರ್ಎಸ್ ಸೇರಿ ಎಲ್ಲಾ ತರಬೇತಿಗಳನ್ನು ವಸತಿ ಮತ್ತು ಊಟ ತಿಂಡಿಯೊಂದಿಗೆ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸುಮಾರು 3 ರಿಂದ 4 ಕೋಟಿ ರು. ವೆಚ್ಚವಾಗಲಿದ್ದು, ಆ ಹಣವನ್ನು ತಾವೇ ಭರಿಸುವುದಾಗಿ ತಿಳಿಸಿದರು.
ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ‘ರಾಜಕೀಯ ಗ್ರಹಣ’: ಕಾಮಗಾರಿ ಇನ್ನೂ ಅಪೂರ್ಣ
ಶಾಲಾಮಕ್ಕಳು ತಮ್ಮ ಗ್ರಾಮಕ್ಕೆ ಬಸ್ ಬಾರದಿರುವರಿಂದ ನಿತ್ಯ ಬಸ್ಗಾಗಿ ಎರಡು ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ ಎಂದು ಸಮಸ್ಯೆ ಹೇಳಿಕೊಂಡಾಗ, ಮೂರು ನಾಲ್ಕು ದಿನದಲ್ಲಿ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ, ಉತ್ತಮ ಅಂಕ ಗಳಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹೆತ್ತ ತಂದೆ-ತಾಯಿ, ವಿದ್ಯೆ ನೀಡಿದ ಗುರುಗಳಿಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕೇಂದು ತಿಳಿಸಿದರು.