* ಅಂಜನಾದ್ರಿ ಪರ್ವತ ಆಂಜನೇಯಸ್ವಾಮಿ ಜನ್ಮ ಸ್ಥಳ ಎಂದು ಇತಿಹಾಸ ಪುಟಗಳಲ್ಲಿ ಉಲ್ಲೇಖ* ಅಂಜನಾದ್ರಿ ರಾಮ, ಲಕ್ಷ್ಮಣರು ಬಂದಂತ ಪುಣ್ಯಭೂಮಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯ* ಕೆಲವರಿಂದ ಅನಾವಶ್ಯಕ ಗೊಂದಲ ಸೃಷ್ಟಿ

ಕೊಪ್ಪಳ(ಜು.17): ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಪರ್ವತವು ಆಂಜನೇಯ ಜನ್ಮ ಸ್ಥಳವಾಗಿದ್ದು, ಈ ಕುರಿತು ಗೊಂದಲ ಎಬ್ಬಿಸುತ್ತಿರುವುದು ಸರಿಯಲ್ಲ ಎಂದು ‘ಕರ್ನಾಟಕ ರಾಜ್ಯ ಹಿಂದೂ ಸಾಮ್ರಾಟ್‌ ಧರ್ಮಸೇನೆ’ ಅಧ್ಯಕ್ಷ ಮಧುಗಿರಿ ಮೋದಿ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜನಾದ್ರಿ ಪರ್ವತ ಆಂಜನೇಯಸ್ವಾಮಿ ಜನ್ಮ ಸ್ಥಳ ಎಂದು ಇತಿಹಾಸ ಪುಟಗಳಲ್ಲಿ ಉಲ್ಲೇಖವಾಗಿದೆ. ರಾಮಾಯಣವನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳದವರು ತಿರುಪತಿ, ಗೋಕರ್ಣ ಹನುಮನ ಜನ್ಮಸ್ಥಳ ಎನ್ನುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಮಾಯಣದ ಇತಿಹಾಸ ಹೇಳುವ ಕುರುಹುಗಳು ಇವೆ. ಇದು ರಾಮ, ಲಕ್ಷ್ಮಣರು ಬಂದಂತ ಪುಣ್ಯಭೂಮಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೆಲವರು ಅನಾವಶ್ಯಕವಾಗಿ ಗೊಂದಲ ಎಬ್ಬಿಸುತ್ತಿದ್ದಾರೆ ಎಂದು ವಿಷಾಧಿಸಿದರು.

ಭುಗಿಲೆದ್ದಿದೆ ಆಂಜನೇಯ ಜನ್ಮ ಸ್ಥಳ ವಿವಾದ : ಯಾಕೆ ಕಿತ್ತಾಟ..?

ಅಂಜನಾದ್ರಿ ಪ್ರದೇಶವನ್ನು ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡಬೇಕು. ಇದರ ಅಭಿವೃದ್ಧಿಗೆ ಸರ್ಕಾರ 5 ಸಾವಿರ ಕೋಟಿ ಅನುದಾನ ನೀಡಬೇಕು. ಅಂಜನಾದ್ರಿಯನ್ನು ಈಗಿರುವ ಮುಜರಾಯಿ ಇಲಾಖೆಯಿಂದ ಪ್ರಾಧಿಕಾರಕ್ಕೆ ವಹಿಸಬೇಕು. ಅಂದಾಗ ಮಾತ್ರ ತ್ವರಿತಗತಿಯಲ್ಲಿ ಪರ್ವತ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಇಲ್ಲಿರುವ ಋುಷಿಮುಖ ಪರ್ವತ, ಪಂಪಾಸರೋವರ, ಮಾತಂಗ ಬೆಟ್ಟ, ಚಿಂತಾಮಣಿ ಸೇರಿದಂತೆ ವಿವಿಧ ಪ್ರಸಿದ್ಧ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಹನುಮನ ಜನ್ಮ ಸ್ಥಳ ಅಭಿವೃದ್ಧಿಪಡಿಸಲು ಮುಂದಾಗಬೇಕೆಂದರು.