ಲಾಕ್ಡೌನ್: ಇನ್ಮುಂದೆ ವಾರದಲ್ಲಿ 2 ದಿನ ಕಿರಾಣಿ, ಮೂರು ದಿನ ತರಕಾರಿ
ಗದಗ ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ 4 ಕೊರೋನಾ ಪಾಸಿಟಿವ್ ಪತ್ತೆ, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ| ಮುಂಡರಗಿ ತಾಲೂಕಿನಲ್ಲಿಯೂ ಸಹ ದಿನಸಿ ಹಾಗೂ ಕಿರಾಣಿ ಅಂಗಡಿ, ವಾರದಲ್ಲಿ 2 ದಿನ, ತರಕಾರಿ ವ್ಯಾಪಾರ|
ಮುಂಡರಗಿ(ಏ.22): ಗದಗ ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ 4 ಕೊರೋನಾ ಪ್ರಕರಣಗಳು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮುಂಡರಗಿ ತಾಲೂಕಿನಲ್ಲಿಯೂ ಸಹ ಬುಧವಾರದಿಂದ ದಿನಸಿ ಹಾಗೂ ಕಿರಾಣಿ ಅಂಗಡಿಗಳನ್ನು ವಾರದಲ್ಲಿ 2 ದಿನ, ತರಕಾರಿ ವ್ಯಾಪಾರವನ್ನು ವಾರದಲ್ಲಿ ಮೂರು ದಿನ ಮಾಡಲು ತಾಲೂಕು ಆಡಳಿತ ನಿರ್ಧರಿಸಿದೆ.
ಈ ಕುರಿತು ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಇದೀಗ ಮುಂಡರಗಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಪ್ರತಿದಿನ ಬೆಳಗ್ಗೆ 6 ರಿಂದ 9 ಗಂಟೆಯ ವರೆಗೆ ದಿನಸಿ ಹಾಗೂ ಕಿರಾಣಿ ವ್ಯಾಪಾರ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ತರಕಾರಿ ಲಿಲಾವು ಸಹ ನಡೆಯುತ್ತಿತ್ತು. ತರಕಾರಿ ಮಾರಾಟಗಾರರು ಮಾತ್ರ ಇಡೀ ದಿನ ಊರಲ್ಲಿ ಒತ್ತುಗಾಡಿ ಮೂಲಕ ಅಥವಾ ತಲೆ ಮೇಲೆ ಹೊತ್ತು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಗದಗನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಇಲ್ಲಿಯೂ ಸಹ ನಿತ್ಯವೂ ಜನ ಒಂದೆಡೆ ಸೇರುವುದರಿಂದ ಕೊರೋನಾ ಹರಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಈ ನಿರ್ಧಾರ ಕೈಗೊಂಡಿದೆ.
ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಜನ: ಅಕ್ರಮ ಮಾಂಸ ಮಾರಾಟದ ಅಡ್ಡೆಗಳ ಮೇಲೆ ದಾಳಿ
ಇನ್ನು ಮುಂದೆ ದಿನಸಿ ಹಾಗೂ ಕಿರಾಣಿ ಮಾರಾಟ ಸೋಮವಾರ ಹಾಗೂ ಗುರುವಾರ ಜರುಗಲಿದ್ದು, ತರಕಾರಿ ಮಾರಾಟಕ್ಕೂ ಸಹ ದಿನ ನಿಗದಿಪಡಿಸಿದ್ದು ಸೋಮವಾರ, ಗುರುವಾರ ಹಾಗೂ ಶನಿವಾರ ಅವಕಾಶ ನೀಡಲಾಗಿದೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಹಾಲು ಮಾರಾಟ, ಶುದ್ಧ ನೀರಿನ ಘಟಕಗಳು ದಿನಪೂರ್ತಿ ಸಾಮಾಜಿಕ ಅಂತರದಲ್ಲಿ ಕಾರ್ಯ ನಡೆಸಲು ಸೂಚಿಸಲಾಗಿದೆ. ಬ್ಯಾಂಕುಗಳು ಸಹ ನಿಗದಿತ ಅವಧಿಯಲ್ಲಿ ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ. ಅಲ್ಲದೇ ಅನೇಕ ಕಡೆಗಳಲ್ಲಿ ವಿನಾಕಾರಣ ಗುಂಪು ಗುಂಪಾಗಿ ಕುಳಿತುಕೊಳ್ಳುವವರ, ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾದೆ.
ಲಾಕ್ಡೌನ್ ಮುಗಿಯುವ ವರೆಗೂ ವಿನಾಕಾರಣ ಮೋಟರ್ ಬೈಕ್ ತೆಗೆದುಕೊಂಡು ಓಡಾಡುವವರು ಕಂಡು ಬಂದರೆ ಬೈಕ್ ಹಿಡಿದು . 25 ಸಾವಿರ ದಂಡ ವಿಧಿಸಲಾಗುವುದು. ಗರ್ಭಿಣಿಯರು, ಕ್ಯಾನ್ಸರ್ ಖಾಯಿಲೆ ಹಾಗೂ ಸಕ್ಕರೆ ಖಾಯಿಲೆವುಳ್ಳಂತಹ ಅವಶ್ಯವಿರುವರಿಗೆ ಮಾತ್ರ ಆಸ್ಪತ್ರೆಗೆ ಬಂದು - ಹೋಗಲು ಅವಕಾಶ ಕಲ್ಪಿಸಲಾಗಿದೆ. ವಿನಾಕಾರಣ ಬೇರೆ ನೆಪಗಳನ್ನು ಹೇಳಿಕೊಂಡು ಓಡಾಡಿದರೆ ಅಂತವರ ವಾಹನಗಳನ್ನು ಜಪ್ತಿ ಮಾಡಲಾಗುವುದು. ನಿಗದಿತ ಸಮಯ ಹೊರತುಪಡಿಸಿ ಯಾರಾದರೂ ಅಂಗಡಿಗಳನ್ನು ತೆರೆದರೆ ಅಂತವರ ಪರವಾನಗೆ ರದ್ದುಗೊಳಿಸಲಾಗುವುದು ಎಂದು ಮುಂಡರಗಿ ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರು ಹೇಳಿದ್ದಾರೆ.