ಲಾಕ್‌ಡೌನ್ ಸಡಿಲಿಕೆ ಆಯ್ತು ಅಂತ ಬೇಕಾಬಿಟ್ಟಿ ರಸ್ತೆಗಿಳಿಯುವುದು ಒಳ್ಳೆಯ ಲಕ್ಷಣವಲ್ಲ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.05): ಲಾಕ್‌ಡೌನ್‌ ಸಡಿಲಿಕೆಯಾಗಿದೆ ಎಂದ ತಕ್ಷಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿರುವುದು ಅಪಾಯಕಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Add Asianetnews Kannada as a Preferred SourcegooglePreferred

ಸೂಡಾ ಸಭಾಂಗಣದಲ್ಲಿ ಜನಪ್ರತಿನಿ​ಧಿಗಳು ಹಾಗೂ ಅ​ಧಿಕಾರಿಗಳ ಸಭೆ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಇದೀಗ 30ಕ್ಕೂ ಅ​ಧಿಕ ಪಾಸಿಟಿವ್‌ ಪ್ರಕರಣಗಳು ವರದಿಯಾಗಿದೆ. ಜನರು ಇದನ್ನು ಅರಿತುಕೊಂಡು ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು ಎಂದು ಮನವಿ ಮಾಡಿದರು. ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ತಪ್ಪಿಸಲು ಗಾಂಧಿ​ ಬಜಾರ್‌ ಹಾಗೂ ದುರ್ಗಿಗುಡಿ ರಸ್ತೆಗಳಲ್ಲಿ ಒಂದು ಬದಿಯ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗುವುದು ಎಂದರು.

ಒನ್‌ವೇ ಪಾಸ್‌:

ಹೊರ ಜಿಲ್ಲೆಗಳಿಗೆ ತೆರಳಲು ಬಯಸುವವರಿಗೆ ವನ್‌ ವೇ ಪಾಸ್‌ ನೀಡಲಾಗುವುದು. ಇದೇ ರೀತಿ ಬೇರೆ ಕಡೆ ಸಿಲುಕಿರುವವರನ್ನು ಹೋಗಿ ಕರೆದುಕೊಂಡು ಬರಲು ಸಹ ಪಾಸ್‌ ನೀಡಲಾಗುವುದು. ಜಿಲ್ಲಾ​ಧಿಕಾರಿ ಕಚೇರಿಯಲ್ಲಿ ಮಾತ್ರವಲ್ಲದೆ, ತಾಲೂಕುಗಳಲ್ಲಿ ತಹಸೀಲ್ದಾರ್‌ಗಳು ಸಹ ಪಾಸ್‌ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೇ 11ರಿಂದ ಅಡಕೆ ವ್ಯಾಪಾರ ಪ್ರಾರಂಭ: ಅಡಕೆ ಟಾಸ್ಕ್‌ಫೋರ್ಸ್‌ ಅಧ್ಯಕ್ಷ ಆರಗ ಜ್ಞಾನೇಂದ್ರ

ಕಠಿಣ ಕ್ರಮ:

ಬೇರೆ ಜಿಲ್ಲೆಗಳಿಂದ ಪಾಸ್‌ ಇಲ್ಲದೆ ಅನ​ಧಿಕೃತವಾಗಿ ಅಡ್ಡದಾರಿಯಲ್ಲಿ ಜಿಲ್ಲೆ ಪ್ರವೇಶಿಸುವವರ ಮೇಲೆ ಪೊಲೀಸ್‌ ಕಣ್ಗಾವಲು ಇರಿಸಲಾಗಿದೆ. ಅಂತಹವರ ಮೇಲೆ ಎಫ್‌ಐಆರ್‌ ದಾಖಲಿಸಿ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳಿಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಅವಕಾಶ ಇದೆ. ತಾಲೂಕು ಕೇಂದ್ರಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಬೆಳಿಗ್ಗೆ 7ರಿಂದ 10 ಹಾಗೂ ಸಂಜೆ 4ರಿಂದ 7ರವರೆಗೆ ಸಂಚರಿಸಲಿವೆ. ಸೆಲೂನ್‌, ಬ್ಯೂಟಿಪಾರ್ಲರ್‌ಗಳಿಗೂ ತೆರೆಯಲು ಅನುಮತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.