ಮೂಡಿಗೆರೆಯಿಂದ ಮಗ್ರಹಳ್ಳಿ, ಕೋಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗೆ ಹೊಂದಿಕೊಂಡಿರುವ ರಸ್ತೆ ಹಾಗೂ ತಡೆಗೋಡೆ ಮಳೆಯಿಂದ ಕುಸಿದಿದ್ದು, ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು(ಜು.21): ಉದ್ಘಾಟನೆಗೂ ಮುನ್ನ ಸೇತುವೆ ತಡೆಗೋಡೆ ಹಾಗೂ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಗ್ರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೂಡಿಗೆರೆಯಿಂದ ಮಗ್ರಹಳ್ಳಿ, ಕೋಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗೆ ಹೊಂದಿಕೊಂಡಿರುವ ರಸ್ತೆ ಹಾಗೂ ತಡೆಗೋಡೆ ಮಳೆಯಿಂದ ಕುಸಿದಿದ್ದು, ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

4 ವರ್ಷದ ಹಿಂದೆ ಸುರಿದ ಮಹಾ ಮಳೆಗೆ ಹಾನಿಯಾಗಿದ್ದ ಸೇತುವೆ : 

ಕಳೆದ 4 ವರ್ಷದ ಹಿಂದೆ ಸುರಿದ ಮಹಾ ಮಳೆಗೆ ಮುಗ್ರಹಳ್ಳಿ ಸೇತುವೆ ಬಿರುಕು ಬಿಟ್ಟಿದ್ದು, ನೂತನ ಸೇತುವೆ ನಿರ್ಮಾಣಕ್ಕೆ ಸುಮಾರು 2 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಇದೀಗ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸೇತುವೆ ಉದ್ಘಾಟನೆಗೂ ಮುನ್ನ ಈ ಬಾರಿ ಸುರಿದ 675 ಮಿ.ಮೀ ಮಳೆಗೆ ಸೇತುವೆಗೆ ಹೊಂದಿಕೊಂಡಿರುವ ತಡೆಗೋಡೆ ಹಾಗೂ ರಸ್ತೆ ಬಿರುಕು ಬಿಟ್ಟಿದೆ. ತಡೆಗೋಡೆ ಕಾಮಗಾರಿಯನ್ನು ಜರ್ಮನ್ ಮಾದರಿಯಲ್ಲಿ ಕಾಂಕ್ರೀಟ್ ಹಾಕಿ ನಿರ್ಮಿಸಬೇಕಿತ್ತು. ಆದರೆ ತಡೆಗೋಡೆಯನ್ನು ಕೇವಲ ಮಣ್ಣಿನಿಂದ ನಿರ್ಮಿಸಿದ್ದರಿಂದ ಸಣ್ಣ ಮಳೆಗೆ ಬಿರುಕು ಬಿಟ್ಟಿದೆ. ಅಲ್ಲದೇ ರಸ್ತೆ ಕಾಮಗಾರಿ ಕೂಡ ಕಳೆಪೆಯಾಗಿದೆ ಎಂದು ರಸ್ತಯಲ್ಲಿ ಡಾಂಬರಿಗೆ ಅಂಟಿರುವ ಜೆಲ್ಲಿ ಪುಡಿಯನ್ನು ಸ್ಥಳೀಯರು ಕೈಗೆತ್ತಿಕೊಂಡು ಪ್ರದರ್ಶಿಸಿದ್ದಾರೆ.

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಭಾರೀ ಮಳೆಗೆ ವೃದ್ಧೆ ಬಲಿ

ಕಳಪೆ ಕಾಮಗಾರಿ ಆರೋಪ : 

ಕನಿಷ್ಟ 50 ವರ್ಷವಾದರೂ ಬಾಳ್ವಿಕೆ ಬರಬೇಕಿದ ಸೇತುವೆ ಕಾಮಗಾರಿ ಕೇವಲ ಸಣ್ಣ ಮಳೆಗೆ ಸೇತುವೆಗೆ ಹೊಂದಿಕೊಂಡಿರುವ ತಡೆಗೋಡೆ ಮತ್ತು ರಸ್ತೆ ಬಿರುಕು ಬಿಟ್ಟಿದ್ದು, ಇದರಿಂದ ಸೇತುವೆ ಮತ್ತೊಮ್ಮೆ ಬಿರುಕು ಬೀಳುವ ಅಪಾಯ ಎದುರಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸರಕಾರ ಕೋಟ್ಯಾಂತರ ರೂ ಅನುದಾನ ಬಿಡುಗಡೆ ಮಾಡಿದರೆ, ಅದನ್ನು ಸಮರ್ಪಕವಾಗಿ ಬಳಸಿ ಗುಣಮಟ್ಟದ ಕಾಮಗಾರಿ ನಡೆಸಬೇಕಿದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು, ಕಳಪೆ ಕಾಮಗಾರಿ ಮಾಡುವ ಮೂಲಕ ಸರಕಾರ ಹಣವನ್ನು ಪೋಲು ಮಾಡಲು ಹೊರಟಿದ್ದಾರೆ. ಹಾಗಾಗಿ ಕಳಪೆ ಕಾಮಗಾರಿ ನಡೆಸಿರುವ ಪಿಡಬ್ಲೂಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ನಿವೃತ್ತ ಸೈನಿಕ ದೇವರಾಜು, ಬೆಟ್ಟಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ವಸಂತ್, ಹಾಲಿ ಸದಸ್ಯ ಸಂಪತ್ ಮತ್ತಿತರರು ಆಗ್ರಹಿಸಿದ್ದಾರೆ.